ಮನೆಗೆ ಪ್ರತಿನಿತ್ಯ ಬರುತ್ತಿದ್ದ ಗೆಳೆಯನನ್ನ ಬರ್ಬರವಾಗಿ ಕೊಲೆಗೈದ!

Public TV
1 Min Read

– ಗುರುತು ಸಿಗದಂತೆ ಇಟ್ಟಿಗೆಯಿಂದ ಮುಖ ಜಜ್ಜಿದ

ಗ್ರೇಟರ್ ನೊಯ್ಡಾ: ವ್ಯಕ್ತಿಯೊಬ್ಬ ತನ್ನ ಮನೆಗೆ ದಿನಂಪ್ರತಿ ಬರುತ್ತಿದ್ದ ಗೆಳೆಯನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಾಧಯ್ಯ ಪ್ರದೇಶದ ಸಮೀಪ ನಡೆದಿದೆ.

ಮೃತ ದುರ್ದೈವಿಯನ್ನು ಮಿಲನ್ ಎಂದು ಗುರುತಿಸಲಾಗಿದೆ. ತನ್ನ ಪತ್ನಿ ಜೊತೆ ಮಿಲನ್ ಅಕ್ರಮ ಸಂಬಂಧವಿದೆ ಎಂದು ಸಂಶಗೊಂಡಿರುವ ಆರೋಪಿ ಕೃಷ್ಣಾ ಈ ಕೊಲೆಯನ್ನು ಮಾಡಿದ್ದಾನೆ.

ಮೃತ ಮಿಲನ್ ಪಶ್ಚಿಮ ಬಂಗಾಳದ ಮಲ್ದಾ ಪ್ರದೇಶದ ನಿವಾಸಿ. ಆರೋಪಿ ಕೃಷ್ಣಾ ಮೊದಲು ಮಿಲನ್ ಕತ್ತು ಹಿಸುಕಿ ನಂತರ ಆತನ ಗುರುತು ಸಿಗಬಾರದೆಂದು ಇಟ್ಟಿಗೆಯಿಂದ ಮುಖವನ್ನು ವಿರೂಪಗೊಳಿಸಿದ್ದಾನೆ. ಬಳಿಕ ಶವವನ್ನು ಕಮ್ಯುನಿಟಿ ಹಾಲ್ ಬಳಿ ಎಸೆದಿದ್ದಾನೆ.

ಭಾನುವಾರ ಬೆಳಗ್ಗೆ ದಾರಿಹೋಕರು ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬಯಲಾಗಿದೆ. ಶನಿವಾರ ರಾತ್ರಿ ಮಿಲನ್ ಹಾಗೂ ಕೃಷ್ಣಾ ಮಧ್ಯೆ ವಾಗ್ವಾದ ನಡೆದಿದ್ದು, ಜಗಳ ತಾರಕಕ್ಕೇರಿ ಈ ಕೊಲೆ ನಡೆದಿರುವುದಾಗಿ ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಕೃಷ್ಣಾನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ, ಮೃತ ಮಿಲನ್ ಬಳಿ ಮನೆಗೆ ಬರುವುದನ್ನು ನಿಲ್ಲಿಸು ಎಂದು ಹೇಳಿದ್ದೆ. ಆದರೆ ಮಿಲನ್ ನನ್ನ ಮಾತನ್ನು ಧಿಕ್ಕರಿಸಿ ಪ್ರತಿನಿತ್ಯ ಮನೆಗೆ ಬರುತ್ತಿದ್ದನು. ಇದರಿಂದ ಆತನಿಗೆ ನನ್ನ ಪತ್ನಿ ಜೊತೆ ಸಂಬಂಧ ಬೆಳೆಸಿದ್ದಾನೆ ಎಂದು ಅನುಮಾನಗೊಂಡು ಈ ಕೊಲೆ ಮಾಡಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.

ಮೃತ ಮಿಲನ್ ಮತ್ತು ಕೃಷ್ಣಾ ಆತ್ಮೀಯ ಸ್ನೇಹಿತರಾಗಿದ್ದಾರೆ. ಕೃಷ್ಣಾ ತಾಯಿ ಹಾಗೂ ಪತ್ನಿ ಜೊತೆಯೂ ಚೆನ್ನಾಗಿಯೇ ಇದ್ದನು. ಹೀಗಾಗಿ ಮಿಲನ್ ಪ್ರತಿ ನಿತ್ಯ ಕೃಷ್ಣಾ ಮನೆಗೆ ಬರುತ್ತಿದ್ದನು. ಇದರಿಂದ ಅನುಮಾನಗೊಂಡಿರುವ ಕೃಷ್ಣಾ, ಮಿಲನ್ ನನ್ನು ಮುಗಿಸಲು ಸ್ಕೆಚ್ ಹಾಕಿದ್ದನು. ಅದಕ್ಕಾಗಿಯೇ ತನ್ನಿಬ್ಬರು ಗೆಳೆಯರಾದ ಅರುಣ್ ಹಾಗೂ ಪಪ್ಪು ಜೊತೆ ಸೇರಿ ಕೊಲೆ ಮಾಡುವ ಪ್ಲಾನ್ ಮಾಡಿ ಕೊಲೆಗೈದಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ ವಿಶಾಲ್ ಪಾಂಡೇ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *