ಮನೆಗಳ ಹಕ್ಕುಪತ್ರ ನೋಂದಣಿ ಶುಲ್ಕ ಇಳಿಕೆ: ಸೋಮಣ್ಣ

Public TV
1 Min Read

ಬೆಂಗಳೂರು: ಮನೆಗಳ ಹಕ್ಕುಪತ್ರ ನೋಂದಣಿ ಶುಲ್ಕವನ್ನು ಕಡಿಮೆ ಮಾಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಹಕ್ಕುಪತ್ರ ವಿತರಣೆ ಮತ್ತು ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ಪ್ರಧಾನಿ ಮಂತ್ರಿ ಅವಾಸ್ ಯೋಜನೆಯ ಅಡಿಯಲ್ಲಿ ಮನೆ ಕಟ್ಟಲು ಅನುದಾನ ಬಿಡುಗಡೆಯ ಚಕ್ಕುಗಳನ್ನು ವಿ.ಸೋಮಣ್ಣ ಅರ್ಹ ಫಲಾನುಭವಿಗಳಿಗೆ ವಿತರಿಸಿ, ಬಳಿಕ ಮಾತನಾಡಿದರು.

ಫಲಾನುಭವಿಗಳಿಗೆ ಹಕ್ಕುಪತ್ರ ನೋಂದಣಿ ಶುಲ್ಕವನ್ನು ಸಾಮಾನ್ಯ ವರ್ಗದವರಿಗೆ 10ರಿಂದ 4 ಸಾವಿರ ಮತ್ತು ಎಸ್‍ಸಿ, ಎಸ್‍ಟಿ ಸಮುದಾಯದವರಿಗೆ 4 ಸಾವಿರದಿಂದ 2ಸಾವಿರಕ್ಕೆ ಇಳಿಸಲಾಗಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಬೆಂಗಳೂರಿನ ಹೃದಯಭಾಗದಲ್ಲಿದೆ. ಫಲಾನುಭವಿಗಳು ಮನೆ ಮಾರಟ ಮಾಡಬೇಡಿ, ನಿಮಗೆ ಮನೆ ಮಾಲಿಕತ್ವದ ಪತ್ರ ನೀಡಲಾಗಿದೆ. ಸುಖ ಜೀವನ ಮಾಡಲು ಸ್ವಂತ ಮನೆ ಇದ್ದರೆ ಸಾಕು ಎಂದು ಹೇಳಿದರು.

ಪ್ರಧಾನಿ ನರೇಂದ್ರಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಬಡವರು ಸೂರು ಇಲ್ಲದೇ ಜೀವನ ಸಾಗಿಸಬಾರದು, ಶಾಶ್ವತ ಸೂರು ಪ್ರತಿಯೊಬ್ಬ ನಾಗರಿಕರಿಗೆ ಕಲ್ಪಿಸಿಬೇಕು ಎಂಬ ಆಶಯವನ್ನು ಈಡೇರಿಸಲಾಗುತ್ತಿದೆ. ಎಲ್ಲ ಧರ್ಮ, ವರ್ಗದ ಜನರಿಗೆ ವಸತಿ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ವಸತಿ ಇಲಾಖೆ ಶರವೇಗದಲ್ಲಿ ವಸತಿ ನಿರ್ಮಾಣ ಹಂಚಿಕೆ ಮಾಡುತ್ತಿದೆ. ಕಳೆದ 40 ವರ್ಷಗಳಿಂದ ನೆನಗುದಿಗೆ ಬಿದ್ದಿದ ಹಕ್ಕುಪತ್ರ ನೀಡವ ಕಾರ್ಯವನ್ನು ಇಂದು ಬಡವರಿಗೆ ಕೊಡಮಾಡಲಾಗುತ್ತಿದೆ ಎಂದರು.

ಕೆ.ಉಮೇಶ್ ಶೆಟ್ಟಿ, ಗಂಗಭೈರಯ್ಯ, ರೂಪಲಿಂಗೇಶ್ವರ್, ಗೋವಿಂದರಾಜನಗರ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥಗೌಡ ಮತ್ತು ಸ್ಥಳೀಯ ಬಿಜೆಪಿ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು. ಗೋವಿಂದರಾಜನಗರ ವಾರ್ಡ್, ದಾಸರಹಳ್ಳಿ ಮತ್ತು ಡಾ.ರಾಜ್ ಕುಮಾರ್ ವಾರ್ಡ್ ನ ನೂರಾರು ಬಡವರಿಗೆ ಹಕ್ಕುಪತ್ರ ಮತ್ತು ಮನೆ ಕಟ್ಟಲು ಚೆಕ್ ವಿತರಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *