ಮನೆಗಳಿಗೆ ನುಗ್ಗಿದ ಮಳೆ ನೀರು- ಜೋಳ, ಗೋಧಿ, ಅಕ್ಕಿ, ಈರುಳ್ಳಿ ನೀರು ಪಾಲು

Public TV
1 Min Read

– ಜಮೀನುಗಳು ಜಲಾವೃತ

ಕಲಬುರಗಿ: ಜಿಲ್ಲೆಯಾದ್ಯಂತ ತಡರಾತ್ರಿ ವರುಣನ ಆರ್ಭಟವಾಗಿದ್ದು, ಚಂದಾಪುರ ಪಟ್ಟಣದ ಆಶ್ರಯ ಕಾಲೋನಿಯ ಮನೆಗಳಿಗೆ ಅಪಾರ ಪ್ರಮಾಣದ ಮಳೆ ನೀರು ನುಗ್ಗಿ ಅವಾಂತರವಾಗಿದೆ.

ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದಾಪುರ ಪಟ್ಟಣದಲ್ಲಿ ತಡರಾತ್ರಿ ಧಾರಾಕಾರ ಮಳೆಯಾಗಿದೆ. ಮನೆಗಳಿಗೆ ನೀರು ನುಗ್ಗಿ ಜೋಳ, ಗೋಧಿ, ಅಕ್ಕಿ, ತೊಗರಿ ಬೆಳೆ, ಈರುಳ್ಳಿ ಸೇರಿದಂತೆ ಹಲವು ವಸ್ತುಗಳು ನೀರು ಪಾಲಾಗಿವೆ. ಅಲ್ಲದೇ ವಿವಿಧೆಡೆ ಜಮೀನುಗಳು ಸಹ ಜಲಾವೃತವಾಗಿವೆ.

ಕಳೆದ ತಿಂಗಳಷ್ಟೆ ಬಿತ್ತನೆ ಮಾಡಿದ್ದ ನೂರಾರು ಹೆಕ್ಟರ್ ಪ್ರದೇಶದಲ್ಲಿನ ಬೆಳೆಗಳು ಸಂಪೂರ್ಣ ನಾಶವಾಗಿದೆ. ಇದರಿಂದ ಸಾರ್ವಜನಿಕರು, ಅನ್ನದಾತರು ಕಂಗಾಲಾಗಿದ್ದಾರೆ. ಗುರುವಾರ ಕೂಡ ಭಾರೀ ಮಳೆಯಿಂದ ಜಿಲ್ಲೆಯ ಜೇವರ್ಗಿ ಪಟ್ಟಣದ ಹೊರವಲಯದಲ್ಲಿರುವ ಸೇತುವೆ ಕಿತ್ತು ಹೋಗಿತ್ತು.

ಕಳೆದ ದಿನ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ರಸ್ತೆಗಳು, ಹಳ್ಳ ಕೊಳ್ಳಗಳು ಜಲಾವೃತವಾಗಿದ್ದವು. ಚಿಕ್ಕಬಳ್ಳಾಪುರ ನಗರಲ್ಲೂ ಸಹ ಅತಿ ಹೆಚ್ಚಿನ ಮಳೆ ಆಗಿತ್ತು.

ಈಗಾಗಲೇ ಜುಲೈ 1 ರಿಂದ 5 ರವರೆಗೂ ಕರಾವಳಿಯ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಿಸಿದೆ. ಗುರುವಾರ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮಳೆ ಆರಂಭವಾಗಿದೆ. ಹವಾಮಾನ ಇಲಾಖೆಯ ಸೂಚನೆಯಂತೆ ಇನ್ನು ನಾಲ್ಕು ದಿನಗಳ ಕಾಲ ಮಳೆಯಾಗಲಿದ್ದು, ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ತಯಾರಿ ನಡೆಸಿದೆ.

Share This Article
Leave a Comment

Leave a Reply

Your email address will not be published. Required fields are marked *