ಮದ್ವೆಯಾಗಿ, ಮಗುವಿದ್ರೂ ಆಂಟಿಯ ಇನ್‍ಸ್ಟಾ ಲವ್ – ಪಾಳು ಬಾವಿಗೆ ತಳ್ಳಿದ ಯುವಕ

Public TV
2 Min Read

– 4 ದಿನ ಬಾವಿಯಲ್ಲೇ ಇದ್ದ ಮಹಿಳೆ
– ಪೊಲೀಸರಿಂದ ಅಮೃತಾ ರಕ್ಷಣೆ

ಚಿಕ್ಕಬಳ್ಳಾಪುರ: ಆಕೆಗೆ ಮದುವೆಯಾಗಿ ಎರಡೂವರೆ ವರ್ಷವಾಗಿದ್ದು, ಒಂದೂವರೆ ವರ್ಷದ ಮಗುವೂ ಇದೆ. ಆದರೆ ನಿರಂತರ ಫೋನ್ ನಲ್ಲಿ ಮುಳುಗುತ್ತಿದ್ದ ಆಕೆಗೆ ಇನ್‍ಸ್ಟಾಗ್ರಾಂ ನಲ್ಲಿ ಯುವಕನೊಬ್ಬನ ಪರಿಚಯವಾಗಿದೆ. ಪರಿಚಯ ಸಲುಗೆಗೆ ಬೆಳೆದು, ಸ್ನೇಹ ಪ್ರೇಮಕ್ಕೆ ತಿರುಗಿ ಕೊನೆಗೆ ಗಂಡ ಹಾಗೂ ಮಗುವನ್ನ ಬಿಟ್ಟು ಬಂದ ಆಕೆ ಬಾವಿಯಲ್ಲಿ ಸಿಕ್ಕಿಬಿದ್ದಿದ್ದಾಳೆ.

ಹೌದು. ಪ್ರಿಯಕರನ ಮಾತನ್ನ ನಂಬಿ ಗಂಡನ ಮನೆಯನ್ನ ಬಿಟ್ಟು ಬಂದ ಮಹಿಳೆಯನ್ನು ಪ್ರಿಯಕರನೇ ಪಾಳು ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳ ತಾಲೂಕಿನ ಎ.ರಂಗನಾಥಪುರ ಗ್ರಾಮದಲ್ಲಿ ನಡೆದಿದೆ. ಮಾಲೂರು ತಾಲೂಕಿನ ಸೊಣ್ಣಹಳ್ಳಿ ಗ್ರಾಮದ ನಿವಾಸಿ ಅಮೃತಾ (23) ಎಂಬವರನ್ನ ಪಾಳು ಬಾವಿಯಿಂದ ರಕ್ಷಣೆ ಮಾಡಲಾಗಿದೆ.

ಕಳೆದ ಶನಿವಾರದಂದು ಗಂಡನ ಮನೆ ಸೊಣ್ಣಹಳ್ಳಿ ಗ್ರಾಮದಿಂದ ಅಮೃತಾ ನಾಪತ್ತೆಯಾಗಿದ್ದಳು. ಅಂದು ನಾಪತ್ತೆಯಾಗಿದ್ದ ಅಮೃತಾಳಿಗಾಗಿ ಗಂಡನ ಮನೆ ಕಡೆಯವರು ಹುಡುಕಾಟವನ್ನ ನಡೆಸಿದ್ದರು. ಆದರೆ ಅಮೃತಾಳನ್ನ ರಂಗನಾಥಪುರದಲ್ಲಿದ್ದ ಪ್ರಿಯಕರ ಆದರ್ಶ ಎಂಬಾತನು ಕರೆಸಿಕೊಂಡಿದ್ದನಂತೆ. ಶನಿವಾರವೇ ಕರೆಸಿಕೊಂಡಿದ್ದ ಪ್ರಿಯಕರ ಆಕೆಯನ್ನ 100 ಅಡಿ ಆಳದ ಪಾಳು ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಕಳೆದ ನಾಲ್ಕು ದಿನಗಳಿಂದ ಬಾವಿಯಲ್ಲಿಯೇ ಬಿದ್ದಿದ್ದ ಅಮೃತಾ ಮೇಲೆ ಬರಲು ಆಗದೆ ಕಾಪಾಡುವಂತೆ ಕೂಗಿಕೊಂಡಿದ್ದಾಳೆ. ಆದರೆ ಯಾರೊಬ್ಬರು ಸಹಾಯಕ್ಕೆ ಬರಲಿಲ್ಲ. ಇತ್ತ ಬಾವಿಯಿಂದ ನಿರಂತರ ಕೂಗಾಟದ ಶಬ್ದ ಕೇಳಿದ ಅಕ್ಕಪಕ್ಕದ ತೋಟದವರು ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಜಯಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಅಸ್ವಸ್ಥವಾಗಿರುವ ಅಮೃತಾಳನ್ನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬಾವಿಗೆ ತಳ್ಳಿದ್ದ ಆದರ್ಶನ ಮಾಹಿತಿಯನ್ನ ಪಡೆದಿರುವ ಪೊಲೀಸರು ಆತನನ್ನ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಇನ್‍ಸ್ಟಾಗ್ರಾಂನಲ್ಲಿ ಮಹಿಳೆಯ ಪರಿಚಯವಾಗಿ ಪ್ರೀತಿ ಮಾಡುತ್ತಿದ್ದಾಗಿ ಬಂಧಿತ ಆದರ್ಶ ತಿಳಿಸಿದ್ದಾನೆ ಎನ್ನಲಾಗಿದೆ.

ಒಟ್ಟಿನಲ್ಲಿ ಕಟ್ಟಿಕೊಂಡ ಗಂಡ, ಜನ್ಮವಿತ್ತ ಮಗುವನ್ನ ಬಿಟ್ಟು ಬಂದು ಪ್ರಿಯಕರನ ಜೊತೆ ಮಾಡಬಾರದನ್ನ ಮಾಡಲು ಹೋದ ವಿವಾಹಿತೆ ಬಾವಿಯಲ್ಲಿ ಸಿಕ್ಕಿಬಿದ್ದಿದ್ದಾಳೆ. ಆದರೆ ಬಾವಿಗೆ ನಾನು ತಳ್ಳಿಲ್ಲ ಎನ್ನುತ್ತಿರುವ ಪ್ರಿಯಕರನನ್ನ ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನ ನಡೆಸುತ್ತಿದ್ದಾರೆ. ಇನ್ನೂ ತನಿಖೆಯ ನಂತರ ಈ ಪ್ರಕರಣದ ಇನ್ನಷ್ಟು ಅಸಲಿ ಸತ್ಯ ಹೊರ ಬಿಳಲಿದೆ.

Share This Article
Leave a Comment

Leave a Reply

Your email address will not be published. Required fields are marked *