ಮದ್ವೆಗೆ ಕೆಲ ಗಂಟೆ ಇರುವಾಗ್ಲೇ ಬ್ಯೂಟಿ ಪಾರ್ಲರಿನಲ್ಲಿ ವಧು ಕೊಲೆ

Public TV
2 Min Read

– ಮಾಜಿ ಪ್ರಿಯಕರನ ಫೋನ್ ರಿಸೀವ್ ಮಾಡಿದ್ದೇ ತಪ್ಪಾಯ್ತು
– ಪ್ರೇಮಿಯ ಮನವೊಲಿಸಿ ಸ್ಥಳ ತಿಳಿದುಕೊಂಡ

ಭೋಪಾಲ್: ಮದುವೆಗೆ ಇನ್ನೂ ಕೆಲವೇ ಗಂಟೆಗಳು ಇರುವಾಗಲೇ ಬ್ಯೂಟಿ ಪಾರ್ಲರಿನಲ್ಲಿ ವಧುವನ್ನು ಕೊಲೆ ಮಾಡಿರುವ ಘಟನೆ ಮಧ್ಯ ಪ್ರದೇಶದ ರತ್ನಂ ಜಿಲ್ಲೆಯಲ್ಲಿ ನಡೆದಿದೆ.

ಸೋನು ಯಾದವ್ ಕೊಲೆಯಾದ ವಧು. ಜಿಲ್ಲೆಯ ಜೌರಾ ಪಟ್ಟಣದಲ್ಲಿ ಭಾನುವಾರ ವಧು ಮೇಕಪ್ ಮಾಡಿಸಿಕೊಳ್ಳುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆಯ ಮಾಜಿ ಪ್ರಿಯಕರ ರಾಮ್ ಯಾದವ್ ಕೊಲೆ ಮಾಡಿರಬಹುದು. ಆತ ವಧುವಿನ ಕತ್ತನ್ನು ಕೊಯ್ದು ಕೊಲೆ ಮಾಡಿ ರಾಜಸ್ಥಾನಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸದ್ಯಕ್ಕೆ ಈ ಕೊಲೆಗೆ ಸಹಾಯ ಮಾಡಿದ ಮತ್ತು ಗಡಿ ದಾಟಲು ಸಹಾಯ ಮಾಡಿದ ಆರೋಪಿಯ ಸ್ನೇಹಿತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ಸೋನು ಯಾದವ್ ಮದುವೆ ಭಾನುವಾರ ನಿಗದಿಯಾಗಿತ್ತು. ಹೀಗಾಗಿ ಶಜಾಪುರ ಜಿಲ್ಲೆಯ ನಿವಾಸಿ ಸೋನು ವಿವಾಹ ದಿನದಂದು ಬೆಳಗ್ಗೆ ಕುಟುಂಬದೊಂದಿಗೆ ಜೌರಾ ಪಟ್ಟಣಕ್ಕೆ ಬಂದಿದ್ದಾಳೆ. ಸ್ವಲ್ಪ ಸಮಯದ ನಂತರ ಸೋನು ತನ್ನ ಸಂಬಂಧಿಯೊಂದಿಗೆ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದಾಳೆ. ಸೋನು ಬ್ಯೂಟಿ ಪಾರ್ಲರ್ ತಲುಪಿದ ಕೂಡಲೇ ಶಂಕಿತ ಪ್ರಿಯಕರ ರಾಮ್ ಯಾದವ್ ಅನೇಕ ಬಾರಿ ಫೋನ್ ಮಾಡಿದ್ದಾನೆ. ಆದರೆ ಸೋನು ಆತನ ಎಲ್ಲಾ ಕರೆಗಳನ್ನು ನಿರ್ಲಕ್ಷಿಸಿದಳು.

ರಾಮ್ ಯಾದವ್ ತನ್ನ ಸ್ನೇಹಿತನ ಮೊಬೈಲ್ ಫೋನಿನಿಂದ ಸೋನುಗೆ ಫೋನ್ ಮಾಡಿದ್ದಾನೆ. ಬೇರೆ ನಂಬರ್ ಆಗಿದ್ದರಿಂದ ಸೋನು ಫೋನ್ ರಿಸೀವ್ ಮಾಡಿ ಮಾತನಾಡಿದ್ದಾಳೆ. ಆಗ ರಾಮ್ ಯಾದವ್ ಆಕೆಯ ಮನವೊಲಿಸಿ ಸೋನು ಇರುವ ಸ್ಥಳವನ್ನು ತಿಳಿದುಕೊಂಡಿದ್ದಾನೆ. ಆಕೆಯ ಇರುವ ಸ್ಥಳ ತಿಳಿಯುತ್ತಿದ್ದಂತೆ ರಾಮ್ ಯಾದವ್ ಬ್ಯೂಟಿ ಪಾರ್ಲರ್‌ಗೆ ಬಂದು ಸೋನುವಿನ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾನೆ. ಪರಿಣಾಮ ಸೋನು ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಸೋನುವನ್ನು ಕೊಲೆ ಮಾಡಿದ ನಂತರ ರಾಮ್ ಯಾದವ್ ತನ್ನ ಸ್ನೇಹಿತ ಪವನ್ ಪಂಚಲ್ ಬೈಕಿನಲ್ಲಿ ಪರಾರಿಯಾಗಿದ್ದಾನೆ. ಆರೋಪಿಯನ್ನು ಪಂಚಲ್ ರಾಜಸ್ಥಾನದ ಬಸ್ ನಿಲ್ದಾಣದಲ್ಲಿ ಇಳಿಸಿದ್ದಾನೆಂದು ತಿಳಿದುಬಂದಿದೆ. ರತ್ನಂನಿಂದ ರಾಜಸ್ಥಾನದ ಗಡಿ ಕೇವಲ 25 ಕಿ.ಮೀ ದೂರದಲ್ಲಿದೆ. ಪಂಚಲ್ ರತ್ನಂಗೆ ಹಿಂದಿರುಗುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಸದ್ಯಕ್ಕೆ ಆರೋಪಿ ರಾಮ್ ಯಾದವ್‍ನನ್ನು ಬಂಧಿಸಲು ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.

ಸೋನು ಯಾದವ್ ಮೂರು ವರ್ಷಗಳ ಹಿಂದೆ ಒಂದು ಸಮಾರಂಭದಲ್ಲಿ ಆರೋಪಿ ರಾಮ್‍ನನ್ನು ಭೇಟಿಯಾಗಿದ್ದಳು. ಬಳಿಕ ಇಬ್ಬರ ಮಧ್ಯೆ ಸಂಬಂಧ ಇತ್ತು ಎಂದು ಬಂಧಿತ ಆರೋಪಿ ಪಂಚಲ್ ಪೊಲೀಸರಿಗೆ ತಿಳಿಸಿದ್ದಾನೆ. ಅಲ್ಲದೇ ಆರೋಪಿ ರಾಮ್ ಯಾದವ್ ಪ್ರಿಯತಮೆ ಸೋನುವಿನ ಮದುವೆ ಬಗ್ಗೆ ತಿಳಿದುಕೊಂಡಿದ್ದು, ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದನು. ಸೋನುವನ್ನು ಕೊಲೆ ಮಾಡುವ ಪ್ಲಾನ್ ಬಗ್ಗೆ ಸ್ನೇಹಿತ ಪಂಚಲ್‍ಗೆ ತಿಳಿಸಿದ್ದನು.

ಎಸ್‍ಪಿ ಗೌರವ್ ತಿವಾರಿ ಈ ಪ್ರಕರಣದ ಬಗ್ಗೆ ಮಾತನಾಡಿ, ಕೊಲೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದೇವೆ. ಕೂಡಲೇ ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದೇವೆ. ಆಗ ಇಬ್ಬರು ಪುರುಷುರು ಆ ಪ್ರದೇಶದಲ್ಲಿ ನಿಂತಿರುವುದು ಕಂಡು ಬಂದಿದೆ. ಒಬ್ಬ ಬ್ಯೂಟಿ ಪಾರ್ಲರಿಗೆ ಹೋಗಿದ್ದಾನೆ. ನಾವು ವಾಹನದ ನಂಬರ್ ಮತ್ತು ವಧುವಿಗೆ ಬಂದಿದ್ದ ಎರಡು ನಂಬರ್‌ಗಳನ್ನು ಪತ್ತೆ ಮಾಡಿದ್ದೇವೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *