ಮದ್ವೆಗೆ ಒಪ್ಪದ ಅಪ್ರಾಪ್ತೆ- ಮನೆ ಮುಂದೆ ಬೆಂಕಿ ಹಾಕಿ, ಗಾಳಿಯಲ್ಲಿ ಗುಂಡು

Public TV
1 Min Read

-ಬಾಲಕಿಯನ್ನ ಕಿಡ್ನ್ಯಾಪ್ ಮಾಡೋದಾಗಿ ಬೆದರಿಕೆ
-ಪುಂಡರ ಗ್ಯಾಂಗ್ ಬಂಧನ

ನವದೆಹಲಿ: ಅಪ್ರಾಪ್ತೆ ಮದುವೆಗೆ ಒಪ್ಪದ ಹಿನ್ನೆಲೆ ಆಕೆಯ ಮನೆ ಮುಂದೆ ಬಂದು ಬೆಂಕಿ ಹಾಕಿ, ಗಾಳಿಯಲ್ಲಿ ಗುಂಡು ಹಾರಿಸಿದ್ದ ಪುಂಡರ ತಂಡವನ್ನ ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ದೆಹಲಿಯ ಝರೋದಾ ಮಾಜರಾ ವ್ಯಾಪ್ತಿಯ ವಜೀರ್ ಬಾದ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.

ಏನಿದು ಘಟನೆ? ಆಗಸ್ಟ್ 30ರ ರಾತ್ರಿ ಸುಮಾರು 11.50ಕ್ಕೆ ವಜೀರ್ ಬಾದ್ ಪೊಲೀಸ್ ಠಾಣೆಯ ಪೇದೆಯೊಬ್ಬರಿಗೆ ಫೋನ್ ಮಾಡಿದ ವ್ಯಕ್ತಿ ಗಲಾಟೆ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದಾಗ ಮನೆಯ ಗೇಟ್ ಬಳಿ ಕಲ್ಲು ಎಸೆಯಲಾಗಿತ್ತು. ಗುಂಡು ಹಾರಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.

ಬಾಲಕಿಯ ಮನೆ ಮುಂದೆ ಬಂದಿದ್ದ ಪಾಗಲ್ ಪ್ರೇಮಿ ದೀಪಕ್ ಅಲಿಯಾಸ್ ದೀಪು ಕಲ್ಲು ಎಸೆದು, ಗಾಳಿಯಲ್ಲಿ ಗುಂಡು ಹಾರಿಸಿದ್ದನು. ಇನ್ನು ಆರೋಪಿ ದೀಪಕ್ ಜೊತೆ ಬೈಕ್ ಗಳಲ್ಲಿ ಬಂದಿದ್ದ ಪುಡಿ ರೌಡಿಗಳು ಗಲಾಟೆ ಮಾಡಿದ್ದರು. ಬಾಲಕಿಯನ್ನ ಅಪಹರಣ ಮಾಡಲಾಗುವುದು ಎಂದು ಕುಟುಂಬಸ್ಥರಿಗೆ ಬೆದರಿಕೆ ಸಹ ಹಾಕಿದ್ದರು. ಘಟನೆ ಬಳಿಕ ತನ್ನ ಫೋನ್ ಸರ್ವಿಸ್ ಸೆಂಟರ್ ಬಂದ್ ಮಾಡಿ ಪರಾರಿಯಾಗಿದ್ದನು. ದೀಪಕ್ ಗೆಳೆಯರು ಸಹ ನಾಪತ್ತೆಯಾಗಿದ್ದರು.

ಸೆಪ್ಟೆಂಬರ್ 3ರಂದು ದೀಪಕ್ ನನ್ನು ಸಂಜಯ್ ಗಾಂಧಿ ಟ್ರಾನ್ಸಪೋರ್ಟ್ ನಗರದಲ್ಲಿ ಬಂಧಿಸಲಾಗಿದೆ. ಬಂಧನದ ಬಳಿ ದೀಪಕ್ ನಶೆಯಲ್ಲಿ ಗಲಾಟೆ ನಡೆಸಿರೋದನ್ನ ತಪ್ಪೊಪ್ಪಿಕೊಂಡಿದ್ದಾನೆ. ದೀಪಕ್ ಜೊತೆಯಲ್ಲಿ ನಾಲ್ವರು ಪುಂಡರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *