ಮದ್ಯವ್ಯಸನಿಯಾಗಿದ್ದ ಗೃಹಿಣಿ ಸಾವು – ಆತ್ಮಹತ್ಯೆಯೋ..? ಕೊಲೆಯೋ..? ಶಂಕೆ

Public TV
1 Min Read

ಶಿವಮೊಗ್ಗ: ಮದ್ಯ ವ್ಯಸನಿಯಾಗಿದ್ದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆನೆಗದ್ದೆ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ಗೃಹಿಣಿಯನ್ನು ಮಂಜುಳಾ (35) ಎಂದು ಗುರುತಿಸಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಇದೇ ಮನೆಯಲ್ಲಿ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದ. ಮೃತಪಟ್ಟ ಯುವಕನನ್ನು ಹೊಸನಗರ ತಾಲೂಕಿನ ನೇರಲಮನೆಯ ಉದಯ್ ಕುಮಾರ್ ಎಂದು ಗುರುತಿಸಲಾಗಿತ್ತು.

ಕಳೆದ ಒಂದು ತಿಂಗಳ ಅವಧಿಯಲ್ಲಿ ಒಂದೇ ಮನೆಯಲ್ಲಿ ಎರಡು ಸಾವು ಸಂಭವಿಸಿದ್ದು, ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಸಂಶಯ ಗ್ರಾಮಸ್ಥರಲ್ಲಿ ಉಂಟು ಮಾಡಿದೆ. ಆನೆಗದ್ದೆ ಗ್ರಾಮದ ಮಂಜುಳಾ ಕಳೆದ 13 ವರ್ಷದ ಹಿಂದೆ ರಾಮಪ್ಪಗೌಡ ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದರು. ಪತಿ ವಿದೇಶದಲ್ಲಿ ನೆಲೆಸಿದ್ದರೆ ಪತ್ನಿ ಮಂಜುಳಾ ಹಾಗೂ ಮಗಳು ಸಿಂಧು ಬೆಂಗಳೂರಿನಲ್ಲಿ ನೆಲೆಸಿದ್ದರು.

ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಆನೆಗದ್ದೆಗೆ ಆಗಮಿಸಿ ತಾಯಿ ಹಾಗು ಸಹೋದರಿ ಜೊತೆ ನೆಲೆಸಿದ್ದರು. ಆದರೆ ಇತ್ತೀಚೆಗೆ ಮೃತ ಮಂಜುಳಾ ಮದ್ಯ ವ್ಯಸನಿಯಾಗಿದ್ದಳು ಎನ್ನಲಾಗಿದೆ. ಹೀಗಾಗಿಯೇ ಕುಡಿದ ಅಮಲಿನಲ್ಲಿ ತಾಯಿ, ತಂಗಿ ಹಾಗೂ ಮಗಳನ್ನು ಹೊರಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮಂಜುಳಾ ಸಾವಿಗೆ ಸ್ಪಷ್ಟ ಕಾರಣ ಏನೆಂಬುದು ಇನ್ನೂ ನಿಗೂಢವಾಗಿದ್ದು ಪೊಲೀಸರ ತನಿಖೆಯಿಂದಷ್ಟೇ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಬಯಲಾಗಬೇಕಿದೆ. ಘಟನೆ ಸಂಬಂಧ ರಿಪ್ಪನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *