ಬೆಂಗಳೂರು: ಸರ್ಕಾರ ಜಾತ್ರೆ, ಮದುವೆ, ಸಮಾರಂಭಗಳಿಗೆ ಸರ್ಕಾರ ಬ್ರೇಕ್ ಹಾಕದೇ ಹೋದ್ರೆ ಅಪಾಯ ಗ್ಯಾರಂಟಿ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ನಿಯಂತ್ರಣ ಸಂಬಂಧ ಸರ್ಕಾರ ಕರೆದ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಕೊರೊನಾ ಎರಡನೆ ಅಲೆಯ ಆರಂಭ. ಈಗಲೇ ನಿಯಂತ್ರಣ ಹೇರದೇ ಇದ್ದರೆ ಮುಂದೆ ಅಪಾಯವಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಈಗ ಬೆಂಗಳೂರಿನಲ್ಲಿ 5 ಸಾವಿರ ಪ್ರಕರಣಗಳು ವರದಿಯಾಗುತ್ತಿದೆ. ಇದೇ ರೀತಿ ಹೋದರೆ ಮೇ 15ರ ವೇಳೆಗೆ ಈ ಸಂಖ್ಯೆ 15 ಸಾವಿರಕ್ಕೆ ಹೋಗಬಹುದು. ಜನರು ಐಸ್ ಕ್ರೀಂ ಪಾರ್ಲರ್, ಚಾಟ್ ಫುಡ್ ಅಂಗಡಿಗಳಲ್ಲಿ ಗುಂಪು ಸೇರುತ್ತಾರೆ. ಸಾಮಾಜಿಕ ಅಂತರವನ್ನು ಕಾಪಾಡುತ್ತಿಲ್ಲ. ಮದುವೆ, ಸಮಾರಂಭಗಳಿಗೆ ಮಿತಿ ಹೇರಬೇಕು ಮತ್ತು ಜನರು ಇದನ್ನು ಸರಿಯಾಗಿ ಪಾಲನೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಕೊರೊನಾ ನಿಯಂತ್ರಣ ಮಾಡಬೇಕಾದರೆ ಗುಂಪು ಸೇರುವುದನ್ನು ಕಡಿಮೆ ಮಾಡಲೇಬೇಕು. 144 ಸೆಕ್ಷನ್ ಸರ್ಕಾರ ಕಠಿಣವಾಗಿ ಜಾರಿಗೆ ತರಬೇಕು. ಇದು ನಗರ ಪ್ರದೇಶ ಮಾತ್ರವಲ್ಲ. ಹಳ್ಳಿಯಲ್ಲೂ ಜಾರಿಗೆ ತರಬೇಕು ಎಂದು ತಿಳಿಸಿದರು.