ಮದುವೆಯಾದ 2 ದಿನಕ್ಕೆ ಕೊರೊನಾ ಸೋಂಕಿನಿಂದ ಟೆಕ್ಕಿ ಸಾವು

Public TV
2 Min Read

– ಸಮಾರಂಭಕ್ಕೆ ಹಾಜರಾಗಿದ್ದ 95 ಮಂದಿಗೆ ಪಾಸಿಟಿವ್
– ಸೋಂಕಿನ ಲಕ್ಷಣ ಕಂಡು ಬಂದರೂ ನಿರ್ಲಕ್ಷ್ಯ

ಪಾಟ್ನಾ: ಕೊರೊನಾ ವೈರಸ್ ಮದುವೆ ಮಾಡಿಕೊಳ್ಳುತ್ತಿರುವ ಕುಟುಂಬಗಳಲ್ಲಿ ತೀವ್ರ ದುಃಖಕ್ಕೆ ಕಾರಣವಾಗುತ್ತಿದೆ. ಮದುವೆ ಸಮಾರಂಭದಲ್ಲಿ ಭಾಗವಹಿಸಲು 50 ಮಂದಿಗೆ ಮಾತ್ರ ಅವಕಾಶ ನೀಡಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆಯೇ ಮದುವೆಯಾದ ಎರಡು ದಿನದಲ್ಲೇ ವರ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಘಟನೆ ಬಿಹಾರದ ಪಾಟ್ನಾ ಗ್ರಾಮಾಂತರ ಪ್ರದೇಶದ ಪಾಲಿಗಂಜ್ ಗ್ರಾಮದಲ್ಲಿ ನಡೆದಿದೆ.

ಪಾಲಿಗಂಜ್ ಗ್ರಾಮದ 30 ವರ್ಷದ ಟೆಕ್ಕಿ ಸಾವನ್ನಪ್ಪಿದ್ದು, ಮದುವೆ ಹಿನ್ನೆಲೆಯಲ್ಲಿ ಗುರುಗ್ರಾಮದಿಂದ ಜೂನ್ 12 ರಂದು ತನ್ನ ಸ್ವಗ್ರಾಮಕ್ಕೆ ವಾಪಸ್ ಆಗಿದ್ದ. ಜೂನ್ 15 ರಂದು ಟೆಕ್ಕಿ ವಿವಾಹ ಕುಟುಂಬಸ್ಥರು ನಿಗದಿ ಪಡಿಸಿದ್ದ ಯುವತಿಯೊಂದಿಗೆ ಜರುಗಿತ್ತು. ಆದರೆ ಮದುವೆಯಾದ 2 ದಿನಕ್ಕೆ (ಜೂನ್ 17) ಆತನ ಆರೋಗ್ಯದಲ್ಲಿ ಏರುಪೇರು ಕಂಡಬಂದ ಹಿನ್ನೆಲೆಯಲ್ಲಿ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಲಾಗಿತ್ತು. ಆದರೆ ಆಸ್ಪತ್ರೆಗೆ ಕರೆಕೊಂಡು ಹೋಗುವ ಮಾರ್ಗ ನಡುವೆ ಆತ ಸಾವನ್ನಪ್ಪಿದ್ದ.

ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಕೇವಲ 50 ಮಂದಿಗೆ ಮಾತ್ರ ಅವಕಾಶ ಎಂದು ಸರ್ಕಾರ ನಿಯಂತ್ರಣ ವಿಧಿಸಿದ್ದರು ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚು ಮಂದಿ ಹಾಜರಾಗಿದ್ದರು. ಯುವಕ ಸಾವನ್ನಪ್ಪಿದ ಕಾರಣ ಸಮಾರಂಭಕ್ಕೆ ಹಾಜರಾಗಿದ್ದ ಅಷ್ಟು ಮಂದಿಗೆ ಕೊರೊನಾ ಟೆಸ್ಟ್ ನಡೆಸಿದ ಪರಿಣಾಮ 95 ಜನರಿಗೆ ಸೋಂಕು ದೃಢವಾಗಿತ್ತು. ಆದರೆ ವಧುವಿನ ವರದಿ ಮಾತ್ರ ನೆಗೆಟಿವ್ ಬಂದಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲರನ್ನು ಕ್ವಾರಂಟೈನ್ ಮಾಡಿದ್ದ ಪರಿಣಾಮ ಹೆಚ್ಚು ಜನರಿಗೆ ಸೋಂಕು ಹರಡುವುದನ್ನು ತಪ್ಪಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಘಟನೆ ಕುರಿತು ಮಾಹಿತಿ ನೀಡಿರುವ ಪಟ್ನಾ ಡಿಎಂ ಕುಮಾರ್ ರವಿ, ಟೆಕ್ಕಿ ಸಾವನ್ನಪ್ಪಿದ ಬಳಿಕ ಘಟನೆ ಕುರಿತು ಸ್ಥಳೀಯರು ಕರೆ ಮಾಡಿ ಮಾಹಿತಿ ನೀಡಿದ್ದರು. ಗುರುಗ್ರಾಮದಿಂದ ವಾಪಸ್ ಆಗಿದ್ದ ಆತನಿಗೆ ಕೊರೊನಾ ಲಕ್ಷಣಗಳಿದ್ದರೂ ಕೂಡ ಕುಟುಂಬ ಸದಸ್ಯರು ನಿರ್ಲಕ್ಷ್ಯ ವಹಿಸಿ ಮದುವೆ ಕಾರ್ಯ ಮಾಡಿದ್ದರು. ಆದರೆ ಆತ ತೀರ ಅಸ್ವಸ್ತನಾದ ಸಮಯದಲ್ಲಿ ಪಾಟ್ನಾ ಏಮ್ಸ್ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಆಸ್ಪತ್ರೆ ಕರೆತರುವ ಮುನ್ನವೇ ಆತ ಸಾವನ್ನಪ್ಪಿದ. ಆತನ ಕುಟುಂಬಸ್ಥರು ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಅಂತ್ಯ ಕ್ರಿಯೆಯನ್ನು ನಡೆದಿದ್ದರು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ವಧು-ವರ ಇಬ್ಬರ ಪೋಷಕರು ಶಿಕ್ಷಕರಾಗಿದ್ದು, ವಧು ಸಿವಿಲ್ ಎಂಜಿನಿಯರ್ ಆಗಿದ್ದಾರೆ. ಮದುವೆ ಕಾರ್ಯಕ್ರಮಗಳು ಜೂನ್ 8 ರಂದು ಆರಂಭವಾಗಿದ್ದು, ವರನಿಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಆತನನ್ನು ಆಸ್ಪತ್ರೆಗೆ ಕಳುಹಿಸುವ ಬದಲು ಕ್ವಾರಂಟೈನ್ ಮಾಡಲಾಗಿತ್ತು. ಮದುವೆ ಮುನ್ನ ದಿನವೂ ಆತ ಕುಸಿದು ಬಿದ್ದಿದ್ದ. ವಧು-ವರ ಕುಟುಂಬ ಸದಸ್ಯರು ಶಿಕ್ಷಿತರಾಗಿದ್ದರೂ ಕೊರೊನಾ ಲಕ್ಷಣ ಕುರಿತು ನಿರ್ಲಕ್ಷ್ಯ ವಹಿಸಿದ್ದು ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *