ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯಾಟದ ನಾಲ್ಕನೇ ದಿನದಾಟದಲ್ಲೂ ಆಸ್ಟ್ರೇಲಿಯಾ ಅಭಿಮಾನಿಯ ಹುಚ್ಚಾಟ ಮುಂದುವರಿದಿದೆ. ಭಾರತೀಯ ಆಟಗಾರರಿಗೆ ಮೂರನೇ ದಿನದಾಟದಲ್ಲಿ ಜನಾಂಗೀಯ ನಿಂದನೆ ಮಾಡಿದ್ದ ಪ್ರೇಕ್ಷಕವರ್ಗ ಇಂದು ಮತ್ತೆ ಸಿರಾಜ್ಗೆ ನಿಂದನೆ ಮಾಡಿ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದೆ.
ಪ್ರೇಕ್ಷಕರಿಂದ ಮತ್ತೆ ನಿಂದನೆ ಕೇಳಿ ಬರುತ್ತಿದ್ದಂತೆ ಭಾರತೀಯ ಆಟಗಾರರೊಂದಿಗೆ ಸಿಡ್ನಿ ಕ್ರಿಕೆಟ್ ಮಂಡಳಿ ಕ್ಷಮೆ ಕೇಳಿದೆ ಮತ್ತು ಪ್ರೇಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ಮೂರನೇ ಟೆಸ್ಟ್ನ ನಾಲ್ಕನೇ ದಿನದಾಟ ಮುಂದುವರಿಸಿದ ಆಸ್ಟ್ರೇಲಿಯಾ ಮಾರ್ನಸ್ ಲಬುಶೇನ್ 73ರನ್ (118 ಎಸೆತ, 4 ಬೌಂಡರಿ) ಸ್ಟೀವನ್ ಸ್ಮಿತ್ 81ರನ್ (167 ಎಸೆತ, 8 ಬೌಂಡರಿ, 1 ಸಿಕ್ಸರ್) ಮತ್ತು ಕ್ಯಾಮರಾನ್ ಗ್ರೀನ್ 84 ರನ್(132 ಎಸೆತ, 8 ಬೌಂಡರಿ, 4 ಸಿಕ್ಸರ್) ರನ್ಗಳ ನೆರವಿನಿಂದ ಎರಡನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡ 406 ರನ್ ಮುನ್ನಡೆ ಸಾಧಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
407 ರನ್ಗಳ ಗೆಲುವಿನ ಗುರಿ ಪಡೆದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ರೋಹಿತ್ ಶರ್ಮಾ ಅವರ 52 ರನ್(98 ಎಸೆತ, 4 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನೆರವಿನಿಂದ 98 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಗೆಲುವಿಗಾಗಿ ಇನ್ನೂ 309 ರನ್ ಬೇಕಾಗಿದ್ದು ಐದನೇ ದಿನದಾಟಕ್ಕಾಗಿ ಚೇತೇಶ್ವರ್ ಪೂಜಾರ 9 ರನ್ (29 ಎಸೆತ) ಮತ್ತು ಅಜಿಂಕ್ಯ ರಹಾನೆ 4 ರನ್(14 ಎಸೆತ) ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.