ಮಗಳ ಕತ್ತು ಹಿಸುಕಿ, ಇನ್ನಿಬ್ಬರನ್ನು ನೀರಿನಲ್ಲಿ ಮುಳುಗಿಸಿ ಕೊಂದು ತಾನೂ ಆತ್ಮಹತ್ಯೆ ಮಾಡ್ಕೊಂಡ!

Public TV
2 Min Read

ಚೆನ್ನೈ: ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ತಮಿಳುನಾಡಿನಲ್ಲಿ ನಡೆದಿದೆ.

ಈ ಘಟನೆ ಸೋಮವಾರ ಶ್ರೀಪೆರಂಬದೂರ್ ಎಂಬಲ್ಲಿ ನಡೆದಿದೆ. ಮೃತ ದುರ್ದೈವಿ ಮಕ್ಕಳನ್ನು ರಾಜೇಶ್ವರಿ, ಶಾಲಿನಿ ಹಾಗೂ ಸೇತುರಾಂ ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಆರುಮುಗಂ(37) ಎಂದು ಗುರುತಿಸಲಾಗಿದ್ದು, ಈತ ನಿರುದ್ಯೋಗಿಯಾಗಿದ್ದನು.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿದ್ದರ ಪರಿಣಾಮ ಆರುಮುಗಂಗೆ ಕೆಲಸವಿರಲಿಲ್ಲ. ಪತಿಗೆ ಕೆಲಸವಿಲ್ಲದಿದ್ದರಿಂದ ಪತ್ನಿ ಗೋಮತಿ ಅಮ್ಮಲ್ ಮನೆಯ ಜವಾಬ್ದಾರಿ ಹೊತ್ತಿದ್ದರು. ಹೀಗಾಗಿ 50 ದಿನದ ಬಳಿಕ ಅಮ್ಮಲ್ ಸೋಮವಾರ ಕೆಲಸವೊಂದಕ್ಕೆ ಸೇರಿಕೊಂಡರು.

ಕಳೆದ ಕೆಲ ವಾರಗಳಿಂದ ಪತಿ ಹಾಗೂ ಪತ್ನಿಯ ನಡುವೆ ಆಗಾಗ ಜಗಳವಾಗುತ್ತಿತ್ತು. ಮಾತಿಗೆ ಮಾತು ಬೆಳೆದಾಗ ಪತ್ನಿ, ನೀನು ಕೆಲಸ ಹುಡುಕುವ ಪ್ರಯತ್ನ ಕೂಡ ಮಾಡುತ್ತಿಲ್ಲ ಎಂದು ಪತಿಯ ವಿರುದ್ಧ ಗರಂ ಆದಳು. ಪತ್ನಿಯ ಮಾತಿನಿಂದ ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ. ಇದರಿಂದ ನೊಂದ ಆರುಮುಗಂ, ತನ್ನ 12 ವರ್ಷದ ಮಗಳು ರಾಜೇಶ್ವರಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಹಾಗೆಯೇ 10 ವರ್ಷದ ಶಾಲಿನಿ ಹಾಗೂ 8 ವರ್ಷದ ಸೇತುರಾಮ್ ನನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾನೆ. ತನ್ನ ಮೂವರು ಮಕ್ಕಳ ಕೈ-ಕಾಲು ಕಟ್ಟಿ ಹತ್ಯೆ ಮಾಡಿದ್ದಾನೆ. ಬಳಿಕ ಮನೆಯ ಹತ್ತಿರವೇ ಇರುವ ಮರಕ್ಕೆ ನೇಣುಬಿಗಿದುಕೊಂಡು ತಾನೂ ಸಾವಿಗೆ ಶರಣಾಗಿದ್ದಾನೆ.

ಪತ್ನಿ ಅಮ್ಮಲ್ ಮನೆಗೆ ವಾಪಸ್ಸಾದಾಗ ಈ ಘಟನೆ ಬೆಳಕಿಗೆ ಬಂದಿದೆ. ಅಮ್ಮಲ್ ಮನೆಗೆ ಬಂದಾಗ ಪತಿ ಹಾಗೂ ಮಕ್ಕಳು ಇರಲಿಲ್ಲ. ಹೀಗಾಗಿ ಮನೆಯಲ್ಲಿ ಹುಡುಕಾಡಿದಾಗ ದೊಡ್ಡ ಮಗಳು ರಾಜೇಶ್ವರಿಯ ಮೃತದೇಹ ಬೆಡ್ ಶೀಟ್ ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಇದನ್ನು ನೋಡಿ ದಂಗಾದ ಅಮ್ಮಲ್ ಜೋರಾಗಿ ಕಿರುಚಿಕೊಂಡಿದ್ದಾಳೆ. ಪರಿಣಾಮ ನೆರೆಹೊರೆಯವರು ಅಮ್ಮಲ್ ಮನೆಗೆ ಓಡಿ ಬಂದಿದ್ದಾರೆ.

ಕೂಡಲೇ ನೆರೆಮನೆಯವರೆಲ್ಲ ಸೇರಿ ಅರುಮುಗಂನನ್ನು ಹುಡುಕಾಡಲು ಆರಂಭಿಸಿದ್ದಾರೆ. ಈ ವೇಳೆ ಆತ ಮನೆಯ ಸಮೀಪವೇ ಮರಕ್ಕೆ ನೇಣಿ ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. ಇಬ್ಬರ ಮೃತದೇಹ ಸಿಕ್ಕಿದ ಬಳೀಕ ಉಳಿದ ಇಬ್ಬರು ಮಕ್ಕಳನ್ನು ಹುಡುಕಾಡಿದ್ದಾರೆ. ಈ ವೇಳೆ ಬಾವಿಯ ಹತ್ತಿರ ಸೇತುರಾಮ್ ಶರ್ಟ್ ಸಿಕ್ಕಿದೆ. ಹಾಗೆಯೇ ಇಬ್ಬರ ಮೃತದೇಹ ಬಾವಿಯೊಳಗಿದ್ದು, ಮೀನುಗಳು ತಿಂದಿದ್ದವು.

ಈ ಬಗ್ಗೆ ಮಾಹಿತಿ ಅರಿತ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸಿದ್ದಾರೆ. ಅಲ್ಲದೆ ಅರುಮುಗಂ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *