ಮಗಳನ್ನು ಪ್ರೀತಿ ಮಾಡಿದ್ದಕ್ಕೆ ಅಪ್ರಾಪ್ತನ ಮರ್ಡರ್

Public TV
2 Min Read

– ಮಂಡ್ಯದ ಕೌನ್ಸಿಲರ್ ಮೇಲೆ ಗಂಭೀರ ಆರೋಪ

ಮಂಡ್ಯ: ಮಗಳನ್ನು ಪ್ರೀತಿಸಿದ ಪ್ರಿಯಕರನನ್ನು ತಂದೆ ಮಧ್ಯರಾತ್ರಿ ಮನೆಗೆ ಕರೆಸಿಕೊಂಡು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಹುಡುಗನ ಸಂಬಂಧಿಕರು ಆರೋಪ ಮಾಡುತ್ತಿರುವ ಘಟನೆ ಮಂಡ್ಯ ನಗರದ ಕಲ್ಲಹಳ್ಳಿಯಲ್ಲಿ ನಡೆದಿದೆ.

ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದಿದ್ದ 17 ವರ್ಷದ ಬಾಲಕ ಮೃತಪಟ್ಟಿದ್ದು, ಬಾಲಕಿಯ ತಂದೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗು ಹಾಗೂ ಕುಟುಂಬಸ್ಥರ ಮೇಲೆ ಕೊಲೆ ಆರೋಪ ಕೇಳಿಬಂದಿದೆ.

ಅಂದಹಾಗೇ ಒಂದೇ ಏರಿಯಾದವರಾಗಿದ್ದ ಇಬ್ಬರು ಅಪ್ರಾಪ್ತರು, ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬಾಲಕನ ತಂದೆ ಗಾರೆ ಕೆಲಸ ಮಾಡಿ ಸಂಸಾರದೂಗಿಸಿದರೆ, ತಾಯಿ ಪವಿತ್ರ ಚಿಲ್ಲರೆ ಅಂಗಡಿ ವ್ಯಾಪಾರ ಮಾಡುತ್ತಿದ್ದರು. ಬಾಲಕನ ಕುಟುಂಬಸ್ಥರು ಆರ್ಥಿಕವಾಗಿ ಹಿಂದುಳಿದಿದ್ದರಿಂದ ಹಾಗೂ ಜಾತಿ ಬೇರೆಯಾಗಿದ್ದರಿಂದ ಅಪ್ರಾಪ್ತರ ಪ್ರೀತಿ ಒಪ್ಪದ ಹುಡುಗಿ ತಂದೆ ಶಿವಲಿಂಗೂ ಒಂದೆರೆಡು ಬಾರಿ ಮಗಳ ಸಹವಾಸಕ್ಕೆ ಬರದಂತೆ ಎಚ್ಚರಿಕೆ ನೀಡಿದ್ದರಂತೆ. ಆದರೆ ಇಬ್ಬರೂ ಕೂಡ ಪ್ರೀತಿ ಮುಂದುವರಿಸಿದ್ದರು. ಜೆಡಿಎಸ್‍ನಿಂದ ನಗರಸಭೆ ಸದಸ್ಯರಾಗಿದ್ದ ಶಿವಲಿಂಗೂ ಮಗಳ ಪ್ರೀತಿಯಿಂದ ತನ್ನ ಮರ್ಯಾದೆಗೆ ಧಕ್ಕೆ ಆಗುಬಹುದೆಂದು ಭಾವಿಸಿ ಬಾಲಕನ್ನ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದರು ಅಂತ ಹೇಳಲಾಗುತ್ತಿದೆ.

ಮರ್ಡರ್ ಮಾಡಲು ಪ್ರೀ ಪ್ಲಾನ್ ಮಾಡಿದ್ದ ಹುಡುಗಿ ಕುಟುಂಬಸ್ಥರು ಮಗಳ ಮೂಲಕ ಆತನಿಗೆ ಮನೆಬರುವಂತೆ ಮೆಸೆಜ್ ಕಳುಹಿಸಿದ್ದಾರೆ. ಪ್ರೇಯಸಿ ಮಾತು ನಂಬಿ ಮಧ್ಯರಾತ್ರಿ ಮನೆಗೆ ಬಂದಿದ್ದ ಪ್ರಿಯಕರನಿಗೆ ಚಪ್ಪಲಿ ಹೊರಗೆ ಬಿಟ್ಟು ಶಬ್ಧ ಮಾಡದಂತೆ ಒಳಗೆ ಬರಲು ಆಕೆ ತಿಳಿಸಿದ್ದಳು. ಬಳಿಕ ಕುಟುಂಬಸ್ಥರೆಲ್ಲಾ ಸೇರಿ ಬಾಲಕನ ಮೇಲೆ ಹಲ್ಲೆ ನಡೆಸಿದ್ದು. ಗಲಾಟೆ ಸೌಂಡ್ ಕೇಳಿದ ಸ್ಥಳೀಯರು ಬಾಲಕನ ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಆತನನ್ನ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೀಗ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಬಾಲಕ ಕೊನೆಯುಸಿರೆಳೆದಿದ್ದಾನೆ. ಆತನ ಸಾವಿನಿಂದ ಪೋಷಕರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದ್ದು, ಪ್ರಿ ಪ್ಲಾನ್ ಮಾಡಿ ಈ ಕೊಲೆ ಮಾಡಲಾಗಿದೆ. ಬುದ್ದಿ ಮಾತು ಹೇಳಿದರೆ ಆತ ಕೇಳುತ್ತಿದ್ದ. ತಪ್ಪಿತಸ್ಥರನ್ನ ಬಂಧಿಸಿ ಅಂತ ಸ್ನೇಹಿತರು ಆಗ್ರಹಿಸಿದ್ದಾರೆ.

ಮೀಸೆ ಚಿಗುರದ ವಯಸ್ಸಿನಲ್ಲಿ ಆರಂಭವಾದ ಮೂರು ವರ್ಷದ ಪ್ರೀತಿ ಬೆಳೆದು ಹೆಮ್ಮರವಾಗುವ ಮೊದಲೇ ಪ್ರಿಯಕರನ ಸಾವಿನ ಮೂಲಕ ಅಂತ್ಯವಾಗಿದೆ. ಈ ಪ್ರಕರಣ ಸತ್ಯಾಸತ್ಯತೆಯನ್ನು ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *