ಮಗನ ಫೋಟೋ ಹಾಕ್ಕೊಂಡ್ರೆ ಬೆಂಕಿ ಹಚ್ಚಿಸ್ತೀನಿ: ಸೊಸೆ ವಿರುದ್ಧ ರವಿ ತಾಯಿ ಆಕ್ರೋಶ

Public TV
1 Min Read

– ನನ್ನ ಮಗನ ದುಡ್ಡೆಲ್ಲ ನುಂಗಿ ನೀರು ಕುಡಿದ್ಳು

ತುಮಕೂರು: ಆರ್‌ಆರ್‌ನಗರ ಉಪಾಚುನಾವಣೆಯಲ್ಲಿ ಡಿಕೆ ರವಿ ಪತ್ನಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ಲಾನ್ ಮಾಡಿಕೊಂಡಿವೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಸೊಸೆ ವಿರುದ್ಧ ರವಿ ತಾಯಿ ಗೌರಮ್ಮ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಕುಣಿಗಲ್‍ನ ದೊಡ್ಡಕೊಪ್ಪಲಿನಲ್ಲಿ ಮಾತನಾಡಿರುವ ಅವರು, ನನ್ನ ಮಗನ ಜೊತೆ ಅವಳೂ ಹೋಗಿ ಬಿಟ್ಲು ಅಂತ ತಿಳಿಕೊಂಡಿದ್ದೇನೆ. ನನ್ನ ಮಗನ ದುಡ್ಡಲ್ಲಿ ಒಂದು ರೂಪಾಯಿ ನಮ್ಮ ಕಷ್ಟಕ್ಕೆ ಕೊಡಲಿಲ್ಲ. ಲೋಫರ್ ಅವ್ಳು, ನನ್ನ ಮಗನ ಹೇಸರೇಳಿಕೊಂಡು ಯಾಕೆ ಚುನಾವಣೆಗೆ ನಿಂತ್ಕೋಬೇಕು ಎಂದು ಕಿಡಿಕಾರಿದ್ದಾರೆ.

ಮಗ ಸಾವನ್ನಪ್ಪಿದ ಸಂದರ್ಭದಲ್ಲಿ ಮಣ್ಣು ಬಿಸಾಕಿ ಹೋದವಳು ಇಂದಿನವರೆಗೂ ಬಂದಿಲ್ಲ. ಡಿ.ಕೆ ರವಿ ಹೆಂಡ್ತಿ ಅನ್ನೋ ಯೋಗ್ಯತೆ 6 ವರ್ಷದಲ್ಲೇ ಕಳೆದುಕೊಂಡಳು. ನನ್ನ ಕಣ್ಣೆದುರೇ ಅವರ ಅಪ್ಪ-ಅಮ್ಮನೂ ನನ್ನ ಹಾಗೆಯೇ ಆಗ್ತಾರೆ ಕಾಯ್ತಾ ಇದ್ದೀನಿ ಎಂದು ಹಿಡಿಶಾಪ ಹಾಕಿದ್ದಾರೆ. ಇದನ್ನೂ ಓದಿ: ಉಪ ಚುನಾವಣೆ: RR ‌ನಗರದಲ್ಲಿ ಡಿ.ಕೆ ರವಿ ಪತ್ನಿ ಕಣಕ್ಕಿಳಿಸಲು ಜೆಡಿಎಸ್, ಕಾಂಗ್ರೆಸ್ ಪ್ಲಾನ್?

ಚುನಾವಣೆ ನಿಂತುಕೊಂಡರೂ ನನ್ನ ಮಗನ ಹೆಸರು ಹಾಗೂ ಫೋಟೋ ಹಾಕಬಾರದು. ಒಂದು ವೇಳೆ ಹಾಕಿಕೊಂಡರೆ ನಾನೇ ಹುಡುಗನ್ನ ಕರೆದುಕೊಂಡು ಹೋಗಿ ಬೆಂಕಿ ಹಚ್ಚಿಸ್ತೀನಿ. ನಾನು ಕಷ್ಟಪಟ್ಟು ಓದಿಸಿದ್ರೆ, ನನ್ನ ಮಗನ ದುಡ್ಡೆಲ್ಲ ನುಂಗಿ ನೀರು ಕುಡಿದ್ಳು ಎಂದು ಕುಸುಮಾ ವಿರುದ್ಧ ಡಿಕೆ ರವಿ ತಾಯಿ ಗೌರಮ್ಮ ವಾಗ್ದಾಳಿ ನಡೆಸಿದ್ದಾರೆ.

ಒಟ್ಟಿನಲ್ಲಿ ಆರ್.ಆರ್.ನಗರದ ಉಪಸಮರದಲ್ಲಿ ಡಿಕೆ ರವಿ ಪತ್ನಿಗೆ ಟಿಕೆಟ್ ಸಾಧ್ಯತೆ ಇದ್ದು, ಇದಕ್ಕೆ ಡಿಕೆ ರವಿ ತಾಯಿ ಕುಟುಂಬಸ್ಥರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *