ಮಗನಿಂದಲೇ ಯಡಿಯೂರಪ್ಪಗೆ ಈ ಸ್ಥಿತಿ ಬಂತು: ಎಚ್.ವಿಶ್ವನಾಥ್

Public TV
2 Min Read

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ 17 ಜನ ಶಾಸಕರು ಬೇಸತ್ತಿದ್ದೆವು. 17 ಜನ ಪಕ್ಷ ತೊರೆದು ಬಿಜೆಪಿಗೆ ಬಂದೆವು. ಇವರು ಚೆನ್ನಾಗಿ ಆಡಳಿತ ಮಾಡಬಹುದು ಎಂದು ಭಾವಿಸಿದ್ದೆವು. ಯಡಿಯೂರಪ್ಪ ಮೇಲೆ ವಿಶ್ವಾಸ ಇತ್ತು. ಹೀಗಾಗಿ ನಾವೆಲ್ಲ ಯಡಿಯೂರಪ್ಪಗೆ ಅವಕಾಶ ಕೊಟ್ಟೆವು. ಯಡಿಯೂರಪ್ಪ ಬಗ್ಗೆ ಈಗಲೂ ನಮಗೆ ಅಷ್ಟೇ ಗೌರವ ಇದೆ. ಯಡಿಯೂರಪ್ಪ ಕುಟುಂಬದ ಹಸ್ತಕ್ಷೇಪ, ಎಲ್ಲ ಇಲಾಖೆಗಳಲ್ಲಿ ಹಸ್ತಕ್ಷೇಪ ಇತ್ತು. ಪುತ್ರ ವಿಜಯೇಂದ್ರ ಹಸ್ತಕ್ಷೇಪದಿಂದ ಸಾಕಾಗಿತ್ತು ಎಂದು ಎಚ್ ವಿಶ್ವನಾಥ್ ಗುಡುಗಿದ್ದಾರೆ.

ಯಡಿಯೂರಪ್ಪ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ವಿಶ್ವನಾಥ್, ಯಡಿಯೂರಪ್ಪ ಪುತ್ರ ವಿಜಯೇಂದ್ರ ಎಲ್ಲವನ್ನು ನುಚ್ಚುನೂರು ಮಾಡಿದರು. ನಾವೇನಾದರೂ ಹೋದರೆ ವಿಜಯೇಂದ್ರ ಭೇಟಿಯಾಗಿ ಎನ್ನುತ್ತಿದ್ದರು. ನಾನು ವಿಜಯೇಂದ್ರನ ಮುಂದೆ ನಿಲ್ಲಬೇಕೆ? ನಾನು ದೊಡ್ಡವರ ಜೊತೆ ಕೆಲಸ ಮಾಡಿದವನು. ನಾನು ವಿಜಯೇಂದ್ರ ಮುಂದೆ ನಿಲ್ಲಲು ಸಾಧ್ಯವಿಲ್ಲ. ಯಾರಿಗೂ ಗೌರವ ಇಲ್ಲದ ಪರಿಸ್ಥಿತಿ ನಿರ್ಮಾಣ ಮಾಡಿದರು. ಮನೆಯಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ನಾವೆಲ್ಲ ಹೇಳಿದ್ದೆವು. ಅನೇಕರು ರಾಜೀನಾಮೆ ನೀಡುವುದಾಗಿ ಹೇಳಿದ್ದರು. ತಂದೆಯ ಇಂದಿನ ಸ್ಥಿತಿಗೆ ವಿಜಯೇಂದ್ರನೇ ಕಾರಣ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಭ್ರಷ್ಟ ಮುಖ್ಯಮಂತ್ರಿ ತೆಗೆದು ಭ್ರಷ್ಟನನ್ನು ಮಾಡಿದರೆ ಸಾಮಾನ್ಯ ಜನರಿಗೇನು ಲಾಭ: ಸಿದ್ದರಾಮಯ್ಯ

ಮಗನ ದುರಹಂಕಾರವೇ ಇದಕ್ಕೆ ಕಾರಣ. ಅಸಂವಿಧಾನಿಕ ವ್ಯಕ್ತಿಯಾದರೂ ಆಡಳಿತ ನಡೆಸಿದ್ದಾನೆ. ಅವನ ಬಳಿಯೇ ಎಲ್ಲ ಫೈಲ್ ಬರುತ್ತಿತ್ತು. ನಾನು ಬಹಿರಂಗವಾಗಿಯೇ ಧ್ವನಿ ಎತ್ತಿದ್ದೆ. ಇಂದು ರಾಜೀನಾಮೆಗೂ ವಿಜಯೇಂದ್ರ ಕಾರಣ. ಎಲ್ಲ ಇಲಾಖೆಯಲ್ಲಿ ವಿಜಯೇಂದ್ರನ ಹಸ್ತಕ್ಷೇಪ ಇತ್ತು. ಅಧಿಕಾರಿಗಳ ವರ್ಗಾವಣೆ, ಟೆಂಡರ್, ನಿಗಮ ಮಂಡಳಿಗೆ ನೇಮಕ ಮಾಡಿದ್ಯಾರು? ಮಂತ್ರಿಗಳು ವಿಜಯೇಂದ್ರ ಎದುರು ನಿಲ್ಲಬೇಕಿತ್ತು. ವಿಜಯೇಂದ್ರ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ಅವಕಾಶ ಕೊಡಲಿಲ್ಲ. ಯಡಿಯೂರಪ್ಪ ಮಗನ ಮಾತು ಕೇಳಿ ಕೆಟ್ಟರು ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ 17 ಜನ ಅತಂತ್ರರಾಗುವ ಪ್ರಶ್ನೆಯೇ ಇಲ್ಲ. ನಾವು ಯಾವುದೇ ಸಭೆಗಳನ್ನೂ ಮಾಡಲ್ಲ. 17 ಮಂದಿಗೆ ಅನ್ಯಾಯವೂ ಆಗಲ್ಲ. ಮಂತ್ರಿಗಳಾಗೇ ಮುಂದುವರಿಯುತ್ತಾರೆ. ಪುತ್ರ ವ್ಯಾಮೋಹ, ಮನೆಯವರ ಭ್ರಷ್ಟಾಚಾರ ಯಡಿಯೂರಪ್ಪರ ಈ ಸ್ಥಿತಿಗೆ ಕಾರಣ. ಮುಂದೆ ಪಂಚಮಸಾಲಿ ಲಿಂಗಾಯಿತ ನಾಯಕ ಸಿಎಂ ಆದರೆ ಒಳ್ಳೆಯದು ನನ್ನ ಹಾಗೂ ಪ್ರತಾಪ್ ಸಿಂಹ ಪಾಟೀಲ್ ಸೋಲಿಸಿದ್ದು ವಿಜಯೇಂದ್ರ. ಮಗನಿಂದ ಈಗ ತಂದೆ ರಾಜೀನಾಮೆ ಕೊಡುವಂತಾಗಿದೆ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *