ಉಡುಪಿ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಐದು ಮೇಳಗಳ ಪ್ರಥಮ ಸೇವೆ ಆಟದೊಂದಿಗೆ ಯಕ್ಷಗಾನ ತಿರುಗಾಟಕ್ಕೆ ಚಾಲನೆ ದೊರೆಯಿತು. ಕೋವಿಡ್ ಕಾಲದಲ್ಲಿ ದೇಗುಲದಲ್ಲೇ ಹರಕೆ ಆಟಗಳು ನಡೆಯುತ್ತಿತ್ತು. ಇನ್ಮುಂದೆ ಭಕ್ತರ ಮನೆಗಳಲ್ಲಿ ಚೆಂಡೆ ನಾದ, ಬಣ್ಣದ ಸೇವೆ ನಡೆಯಲಿದೆ.
ಬೆಳಗ್ಗೆ ಬಾರಾಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗಣಹೋಮ, ಮಧ್ಯಾಹ್ನ ಶ್ರೀ ಕ್ಷೇತ್ರದಲ್ಲಿ ಗಣಹೋಮ, ಐದು ಮೇಳಗಳ ಶ್ರೀ ಮಹಾಗಣಪತಿ ಪೂಜೆ ಹಾಗೂ ರಾತ್ರಿ ಪ್ರಥಮ ದೇವರ ಸೇವೆ ನಡೆಯಿತು. ಐದು ಮೇಳದ ಚೌಕಿಗಳಿಗೆ ಸಾಲಾಗಿ ಪೂಜೆ ಸಲ್ಲಿಸಲಾಯ್ತು.
ಸಂಪ್ರದಾಯದಂತೆ ರಾತ್ರಿ ಬಾರಾಳಿ ದೇವಾಲಯದಲ್ಲಿ ಗೆಜ್ಜೆ ಕಟ್ಟಿ, ವೇಷ ಹಾಕಿಕೊಂಡು ಬಂದು ಮಂದಾರ್ತಿಯಲ್ಲಿ ಸೇವೆ ಸಮರ್ಪಣೆಗೊಂಡಿತು. ನೂರಾರು ಜನ ಭಕ್ತರು, ಯಕ್ಷ ಪ್ರೇಮಿಗಳು ತಿರುಗಾಟದ ಮೊದಲ ಸೇವೆಯಲ್ಲಿ ಪಾಲ್ಗೊಂಡರು.
ಕೊರೋನ ಇದ್ದ ಕಾರಣ ಹರಕೆ ಆಟಗಳು ದೇಗುಲದ ಸಭಾಂಗಣದಲ್ಲಿ ನಡೆಯುತ್ತಿತ್ತು. ಜಿಲ್ಲಾಡಳಿತ ತಿರುಗಾಟಕ್ಕೆ ಅವಕಾಶ ಕೊಟ್ಟಿರೋದ್ರಿಂದ ಇಂದಿನಿಂದ ಐದು ಕಡೆ ಆಟ ನಡೆಯಲಿದೆ. ಸಾಮಾಜಿಕ ಅಂತರ, ಸರ್ಕಾರದ ನಿಯಮ ಪಾಲಿಸಿಕೊಂಡು ಸೇವೆ ಮಾಡುತ್ತೇವೆ ಎಂದು ಅನುವಂಶಿಕ ಮೊಕ್ತೇಸರ ಧನಂಜಯ ಶೆಟ್ಟಿ ಹೇಳಿದ್ದಾರೆ.
ಪೂಜಾ ವಿಧಿ, ಸೇವೆಗಳ ಸಂದರ್ಭ ಕಾರ್ಯನಿರ್ವಹಣಾಧಿಕಾರಿ ಎಸ್ ಪಿ ಬಿ ಮಹೇಶ್, ಸುರೇಂದ್ರ ಶೆಟ್ಟಿ ಎಚ್., ಪ್ರಭಾಕರ ಶೆಟ್ಟಿ ಎಚ್., ಶಂಭು ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಅರ್ಚಕ ವೃಂದ, ದೇಗುಲ ಸಿಬ್ಬಂದಿ, ಭಕ್ತರು ಹಾಗೂ ಮೇಳದ ಕಲಾವಿದರು ಉಪಸ್ಥಿತರಿದ್ದರು.