ಮಂತ್ರಿಯಾಗುವ ಹಳ್ಳಿಹಕ್ಕಿ ಕನಸು ಭಗ್ನ!

Public TV
2 Min Read

ನವದೆಹಲಿ: ಮೇಲ್ಮನೆ ಸದಸ್ಯ ವಿಶ್ವನಾಥ್‍ಗೆ ಬಿಗ್ ಶಾಕ್ ಸಿಕ್ಕಿದೆ. ವಿಶ್ವನಾಥ್ ಮಂತ್ರಿಯಾಗುವ ಆಸೆಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ತಣ್ಣೀರೆರಚಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದ ವಿಶ್ವನಾಥ್‍ಗೆ ಇದೀಗ ಆಘಾತ ಉಂಟಾಗಿದೆ. ನಾಮನಿರ್ದೆಶನದ ಆಧಾರದ ಮೇಲೆ ಸಚಿವರಾಗುವಂತಿಲ್ಲ ಎಂದು ರಾಜ್ಯ ಹೈಕೋರ್ಟ್ ಹೇಳಿತ್ತು. ಈ ಆದೇಶ ಪ್ರಶ್ನಿಸಿ ಎಚ್.ವಿಶ್ವನಾಥ್ ಅವರು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ಸುಪ್ರೀಂಕೋರ್ಟಿನಲ್ಲಿ ವಿಶ್ವನಾಥ್ ಅರ್ಜಿ ವಜಾ ಆಗಿದ್ದು, ನಾಮ ನಿರ್ದೇಶಿತರು ಸಚಿವರಾಗಲು ಸಾಧ್ಯವಿಲ್ಲ ಎಂದು ಹೇಳಿದೆ.

ವಿಶ್ವನಾಥ್ ಅವರನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿತ್ತು. ನಾಮ ನಿರ್ದೇಶನವಾದ ಬಳಿಕ ವಿಶ್ವನಾಥ್ ಸಚಿವರಾಗಲು ಪ್ರಯತ್ನಿಸಿದ್ದರು. ವಿಶ್ವನಾಥ್‍ಗೆ ಸಚಿವ ಸ್ಥಾನ ನೀಡದಂತೆ ರಾಜ್ಯ ಹೈಕೋರ್ಟಿನಲ್ಲಿ ದೂರು ದಾಖಲು ಮಾಡಲಾಗಿತ್ತು. ವಿಚಾರಣೆ ನಡೆಸಿದ್ದ ಪೀಠ ಸಚಿವರಾಗುವಂತಿಲ್ಲ ಎಂದು ಹೈಕೋರ್ಟ್ ಹೇಳಿತ್ತು.

ಸಚಿವ ಸ್ಥಾನದ ಬದಲು ಮೇಲ್ಮನೆ ಸಭಾಪತಿ ಸ್ಥಾನದ ಮೇಲೆ ವಿಶ್ವನಾಥ್ ಕಣ್ಣಿಟ್ಟಿದ್ದರು. ಹುಣಸೂರಿಗೆ ತೆರಳಿದ್ದಾಗ ಆಪ್ತರ ಬಳಿ ಮಾತುಕತೆ ವೇಳೆ ಸಭಾಪತಿ ಆಸೆಯನ್ನು ವ್ಯಕ್ತಪಡಿಸಿದ್ದರು. ಸಿಎಂ, ಪಕ್ಷ ಸಭಾಪತಿ ಸ್ಥಾನ ಕೊಟ್ಟರೆ ನೋಡೋಣ ಎಂದು ಹೇಳಿದ್ದರು. ಅಲ್ಲದೆ ಮಿತ್ರ ಮಂಡಳಿಯ ಬಗ್ಗೆ ಸಿಡಿಮಿಡಿಗೊಂಡಿದ್ದರು. ಮಿತ್ರ ಮಂಡಳಿಯ ಸಹಾನುಭೂತಿ ಯಾರಿಗೆ ಬೇಕು. 17 ಮಂದಿ ಸಿಎಂ ಜೊತೆ ಮಾತನಾಡಬೇಕಿತ್ತು ಎಂದು ಗರಂ ಆಗಿದ್ದರು.

ಈ ಹಿಂದೆ ಹೈಕೋರ್ಟ್ ಹೇಳಿದ್ದೇನು..?
ವಿಶ್ವನಾಥ್ ಅವರನ್ನು ಸಾಹಿತ್ಯ ಕ್ಷೇತ್ರದಿಂದ ನಾಮನಿರ್ದೇಶನ ಮಾಡಲಾಗಿದ್ದರೆ, ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಎಂಟಿಬಿ, ಶಂಕರ್ ಆಯ್ಕೆ ಆಗಿದ್ದರು. ವಿಶ್ವನಾಥ್ ಯಾವುದೇ ಚುನಾವಣೆ ನಡೆಯದೇ ಅವಿರೋಧವಾಗಿ ಪರಿಷತ್ ಮೆಟ್ಟಿಲು ಹತ್ತಿದ ಕಾರಣ ಮಂತ್ರಿ ಸ್ಥಾನ ಮಾಡಲು ಬರುವುದಿಲ್ಲ ಎಂದು ಕೋರ್ಟ್ ಹೇಳಿತ್ತು.

ಏನಿದು ಪ್ರಕರಣ?
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಲಿ ವಿಧಾನಸಭೆ ಮುಗಿಯುವವರೆಗೆ 17 ಶಾಸಕರನ್ನು ಅನರ್ಹಗೊಳಿಸಿ ಆದೇಶ ಪ್ರಕಟಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅನರ್ಹತೆ ಆದೇಶವನ್ನು ಎತ್ತಿ ಹಿಡಿದಿತ್ತು. ಆದರೆ ವಿಧಾನಸಭೆ ಮುಗಿಯುವವರೆಗೂ ಅನರ್ಹತೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಬಹುದು ಎಂದು ಮಹತ್ವದ ಆದೇಶವನ್ನು ಪ್ರಕಟಿಸಿತ್ತು.

ಈ ಕಾರಣಕ್ಕೆ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಹುಣಸೂರು ಮತ್ತು ಹೊಸಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಸೋತ ಹಿನ್ನೆಲೆಯಲ್ಲಿ ಇಬ್ಬರನ್ನು ಬಿಜೆಪಿ ಪರಿಷತ್‍ಗೆ ಆಯ್ಕೆ ಮಾಡಿ ಮಂತ್ರಿ ಮಾಡಲು ಮುಂದಾಗಿತ್ತು. ಈ ನಡುವೆ ಹೈಕೋರ್ಟ್‍ನಲ್ಲಿ ಅನರ್ಹರಾದವರಿಗೆ ಪರಿಷತ್ ಮೂಲಕ ಮಂತ್ರಿಯಾಗಲು ನಿರ್ಬಂಧಿಸಿ ಕೋರಿ ಪಿಐಎಲ್ ಸಲ್ಲಿಕೆಯಾಗಿತ್ತು. ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದಿಂದ ವಿಶ್ವನಾಥ್‍ಗೆ ಮಂತ್ರಿ ಸ್ಥಾನ ಕೈ ತಪ್ಪಿದರೆ ಎಂಟಿಬಿಗೆ ಮಂತ್ರಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *