ಮಂಡ್ಯ: ಜಿಲ್ಲೆಯ ಜನರು ಮುಗ್ಧರು, ಹಾಗಾಗಿ ಎಲ್ಲರನ್ನು ಬಹುಬೇಗನೆ ನಂಬುತ್ತಾರೆ ಎಂದು ಹೇಳುವ ಮೂಲಕ ಪುತ್ರ ನಿಖಿಲ್ ಸೋಲಿನ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬ್ಯಾಡರಹಳ್ಳಿಯ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಭಾಗಿಯಾಗಿದ್ದರು. ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡುವಾಗ ಲೋಕಸಭೆ ಚುನಾವಣೆಯಲ್ಲಿ ಮಗನ ಸೋಲಿನ ಬಗ್ಗೆ ಬೇಸರದ ನುಡಿಗಳನ್ನಾಡಿದ್ದಾರೆ. ಹಲವರ ಒತ್ತಾಯದ ಮೇರೆಗೆ ಮಗನನ್ನು ಚುನಾವಣೆಗೆ ನಿಲ್ಲಿಸಿದೆ. ಕಾರ್ಯಕರ್ತರು ತುಂಬಾ ಕೆಲಸ ಮಾಡಿದರು. ಈ ಹಿಂದೆ ಗೆದ್ದಾಗ ಐದು ಕಾಲು ಲಕ್ಷ ಮತ ನೀಡಿದ್ದ ಜನರು ಸೋತಾಗ ಐದು ಮುಕ್ಕಾಲು ಲಕ್ಷ ಮತ ನೀಡಿದರು.
ಎಲ್ಲರೂ ಸೇರಿ ಮುಗಿಸಬೇಕು ಅಂತಾ ಮುಗಿಸಿದರು. ಆದ್ರೆ ನನಗೆ ಮಂಡ್ಯ ಜಿಲ್ಲೆಯ ಜನರ ಬಗ್ಗೆ ಬೇಸರವಿಲ್ಲ. ರಾಜಕಾರಣಕ್ಕೆ ಬಂದ ದಿನದಿಂದ ಮಂಡ್ಯ ಜನರ ಜೊತೆ ನನ್ನ ಒಡನಾಟವಿದೆ. ಜಿಲ್ಲೆಯ ಜನರು ತುಂಬಾ ಮುಗ್ಧರು, ಎಲ್ಲರನ್ನು ನಂಬುತ್ತಾರೆ. ದೇವೇಗೌಡರು ಮತ್ತು ನಮ್ಮನ್ನು ಬೆಳೆಸಿದ್ದೇ ಮಂಡ್ಯದ ಜನತೆ. ಕೆಲವರು ನಾವು ಬೇರೆ ಜಿಲ್ಲೆಯವರೆಂದು ಹೇಳ್ತಾರೆ. ಆ ಮಾತುಗಳನ್ನೆಲ್ಲ ನಂಬಬೇಡಿ ಎಂದರು.
ನಾನು ರಾಜಕೀಯದಿಂದ ನಿವೃತ್ತಿಯಾಗಬೇಕು ಎಂದು ಕೊಂಡಿದ್ದೆ. ಜನರು ತೋರಿಸುವ ಪ್ರೀತಿ ನೋಡಿದಾಗ ನಾನು ಅನ್ಯಾಯ ಮಾಡುತ್ತಿದ್ದೇನೆ ಅನ್ನಿಸಿತು. ನನಗೆ ಈ ವ್ಯವಸ್ಥೆಯಿಂದ ಆದ ಬೇಸರದಿಂದ ಹೊರಗೆ ಹೋದರೆ ಜನರಿಗೆ ಅನ್ಯಾಯ ಮಾಡಿದ ಹಾಗೆ ಆಗುತ್ತೆ. ಈ ಕಾರಣಕ್ಕೆ ನಾನು ರಾಜಕೀಯದಲ್ಲಿ ಮುಂದುವರಿದಿದ್ದೇನೆ. ವೈಯುಕ್ತಿಕವಾಗಿ ರಾಜಕೀಯದಲ್ಲಿ ಮುಂದುವರಿಯುವ ಆಸೆ ಇಲ್ಲ ಎಂದು ಹೇಳಿದರು.