ಭಾರೀ ಮಳೆ- ಹಳ್ಳದಲ್ಲಿ ಕೊಚ್ಚಿಹೋದ ದಂಪತಿ

Public TV
1 Min Read

ವಿಜಯನಗರ: ಕಳೆದ ರಾತ್ರಿ ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆ ಅವಾಂತರ ಸೃಷ್ಟಿಸಿದ್ದು, ದಂಪತಿ ಹಳ್ಳದಲ್ಲಿ ಕೊಚ್ಚಿ ಹೋದ ಧಾರುಣ ಘಟನೆ ನಡೆದಿದೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕಾಲ್ವಿ ಗ್ರಾಮದ ಮಾರ್ಗ ಮಧ್ಯದಲ್ಲಿರುವ ಹಳ್ಳದ ಸೇತುವೆಯಿಂದ ದಂಪತಿ ಕೊಚ್ಚಿ ಹೋಗಿದ್ದಾರೆ. ಹಗರಿಬೊಮ್ಮಹಳ್ಳಿ ತಾಲೂಕಿನ ತಂಬ್ರಹಳ್ಳಿ-ಮುತ್ಕೂರು ಗ್ರಾಮದ ನಿವಾಸಿಗಳಾದ ಮಲ್ಲಿಕಾರ್ಜುನ (55) ಹಾಗೂ ಸುಮಂಗಲಾ(48) ಸಾವಿಗೀಡಾದ ದಂಪತಿ.

ಮಂಗಳವಾರ ಮುಂಡರಗಿ ತಾಲೂಕಿನ ತಳಕಲ್ ಗ್ರಾಮದಿಂದ ಮುತ್ಕೂರು ಗ್ರಾಮಕ್ಕೆ ವಾಪಾಸಾಗುವ ವೇಳೆ ಈ ದುರ್ಘಟನೆ ನಡೆದಿದೆ. ತಡ ರಾತ್ರಿ ಹಳ್ಳವನ್ನು ದಾಟುವಾಗ ಬೈಕ್ ಸಮೇತ ಕೊಚ್ಚಿಹೋಗಿದ್ದು, ಬೆಳಗಿನ ಜಾವ ಪತಿಯ ಮೃತದೇಹ ಪತ್ತೆಯಾಗಿದೆ. ಪತ್ನಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಗೆ ಹಳ್ಳ ತುಂಬಿ ಹರಿದಿದ್ದು, ನೀರು ರಭಸವಾಗಿ ಹರಿಯುತ್ತಿರುವಾಗಲೇ ಬೈಕ್ ನಲ್ಲಿ ಹಳ್ಳ ದಾಟಲು ಹೋಗಿ ದಂಪತಿ ಕೊಚ್ಚಿಹೋಗಿದ್ದಾರೆ. ನೀರು ರಭಸವಾಗಿ ಹರಿಯುತ್ತಿರುವುದನ್ನು ಗಮನಿಸದೆ ಸೇತುವೆ ದಾಟಲು ಯತ್ನಿಸಿದ್ದಾರೆ. ಹೀಗಾಗಿ ಅವಘಡ ಸಂಭವಿಸಿದೆ.

Share This Article
Leave a Comment

Leave a Reply

Your email address will not be published. Required fields are marked *