ಭಾರೀ ಮಳೆಗೆ ಕುಸಿದು ಬಿದ್ದ ಕಾಂಪೌಂಡ್- ವ್ಯಕ್ತಿ ಜೀವಂತ ಸಮಾಧಿ

Public TV
1 Min Read

ಮಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಮತ್ತೆ ಮುಂದುವರಿದಿದ್ದು, ಉತ್ತರ ಕರ್ನಾಟ, ಕರಾವಳಿ, ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಮಂಗಳೂರಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾಂಪೌಂಡ್ ಕುಸಿದು ವ್ಯಕ್ತಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

ಮಂಗಳೂರಿನ ಬಂಗ್ರಕೂಳೂರು ಬಳಿ ಮನೆಯೊಂದರ ಕೂಲಿ ಕೆಲಸ ಮಾಡುತ್ತಿದ್ದ ನೀರುಮಾರ್ಗ ನಿವಾಸಿ 38 ವರ್ಷದ ಉಮೇಶ್ ಮೃತಪಟ್ಟ ದುರ್ದೈವಿ. ಮನೆಯೊಂದರ ತೋಟದ ಕೆಲಸ ಮಾಡುತ್ತಿದ್ದ ವೇಳೆ ಪಕ್ಕದ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಈ ವೇಳೆ ಅಲ್ಲೇ ಇದ್ದ ಮೂವರೂ ಕಾರ್ಮಿಕರು ಓಡಿ ಪಾರಾಗಲು ಯತ್ನಿಸಿದ್ದರು. ಇಬ್ಬರು ತಪ್ಪಿಸಿಕೊಂಡಿದ್ದು, ಉಮೇಶ್ ಅವರು ಅಲ್ಲೇ ತೆಗೆದಿದ್ದ ಶೌಚಾಲಯ ಗುಂಡಿಗೆ ಬಿದ್ದಿದ್ದು, ಅವರ ಮೇಲೆ ಕುಸಿದ ಮಣ್ಣು ಬಿದ್ದಿದೆ.

ಗುಂಡಿಯಲ್ಲಿ ಬಿದ್ದ ಬಳಿಕ ಅವರ ಮೇಲೆ ಕಾಂಪೌಂಡ್ ಗೋಡೆಯ ಮಣ್ಣು ಬಿದ್ದಿದ್ದು, ಮಣ್ಣಿನಡಿಯಲ್ಲೇ ಜೀವಂತ ಸಮಾಧಿಯಾಗಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಉಮೇಶ್ ಮೃತದೇಹ ಮೇಲಕ್ಕೆತ್ತಲಾಗಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯಾದ್ಯಂತ ಇನ್ನೂ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕೊಡಗು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *