ಭಾರತದ ಸೈನಿಕರೇ ಮೊದಲು ದಾಳಿ ಮಾಡಿದರು ಎಂದ ಚೀನಾ

Public TV
0 Min Read

– ಪರಿಸ್ಥಿತಿ ಉದ್ವಿಗ್ನವಾದ ಮೇಲೆ ನಾವು ದಾಳಿ ಮಾಡಿದೆವು
– ಭಾರತದ ಮೇಲೆ ಗೂಬೆ ಕೂರಿಸಲು ಯತ್ನಿಸಿದ ಚೀನಾ

ನವದೆಹಲಿ: ಪೂರ್ವ ಲಡಾಖ್‍ನ ಗಾಲ್ವಾನ್ ಗಡಿ ಪ್ರದೇಶದಲ್ಲಿ ಚೀನಾ ಭಾರತ ಸೈನಿಕರ ನಡುವೆ ನಡೆದ ಘರ್ಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ಮತ್ತೆ ಭಾರತದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದೆ.

ಘಟನೆ ಸಂಬಂಧ ಇಂದು ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನೈಂಗ್, ಭಾರತೀಯ ಸೇನೆಯೇ ಮೊದಲು ಗಡಿ ನಿಯಮ ಉಲ್ಲಂಘಿಸಿದೆ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. ಭಾರತ ಮೊದಲು ಎಲ್‍ಎಸಿ ದಾಟಿ ಚೀನಾ ಗಡಿ ಪ್ರವೇಶಿಸಿದೆ. ಬಳಿಕ ಚೀನಾ ಸೇನೆಯನ್ನು ಭಾರತದ ಸೈನಿಕರು ಪ್ರಚೋದಿಸಿದ್ದಾರೆ. ಉದ್ದೇಶಪೂರ್ವಕವಾಗಿ ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡು ಚೀನಾ ಸೈನಿಕರು ಪ್ರತಿ ದಾಳಿ ನಡೆಸಿದ್ದು, ನಂತರ ಎರಡು ಸೇನೆಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ಹೀಗಾಗಿ ಸಾವು- ನೋವು ಸಂಭವಿಸಿದೆ ಎಂದು ಹೇಳಿದ್ದಾರೆ.

ಭಾರತ ಪರಿಸ್ಥಿತಿಯನ್ನು ತಪ್ಪಾಗಿ ಪರಿಗಣಿಸಬಾರದು. ಭಾರತದಂತೆ ಚೀನಾ ಸಾರ್ವಭೌಮತ್ವ ಕಾಪಾಡುವಲ್ಲಿ ಧೃಡವಾಗಿದೆ ಎನ್ನುವ ಮೂಲಕ ಪರೋಕ್ಷವಾಗಿ ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದ್ದಾರೆ.

ಭಾರತ-ಚೀನಾದ ಸೈನಿಕರ ನಡುವೆ ಸೋಮವಾರ ರಾತ್ರಿ ಲಡಾಖ್‍ನ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ನಮ್ಮ ಸೇನೆಯ 20 ಯೋಧರು ಹುತಾತ್ಮರಾಗಿದ್ದಾರೆ. ಸುಮಾರು ಐದು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಚೀನಾದೊಂದಿಗಿನ ನಿಯಂತ್ರಣ ರೇಖೆಯಲ್ಲಿ ಸಾವುನೋವುಗಳು ವರದಿಯಾಗಿವೆ. ಚೀನಾದ ಆಕ್ರಮಣಕಾರಿ ನೀತಿಯ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಚೀನಾದ ವಸ್ತುಗಳನ್ನು ಬಳಸದಂತೆ ಒತ್ತಾಯಿಸಲಾಗುತ್ತಿದೆ. ಕರ್ನಾಟಕ ಅಷ್ಟೇ ಅಲ್ಲದೆ ದೇಶದ ವಿವಿಧ ಮೂಲೆಯಲ್ಲಿ ಚೀನಾ ವಸ್ತು, ಸೇವೆಗಳ ಬಳಕೆ ನಿಷೇಧಕ್ಕೆ ಕೂಗು ಕೇಳಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *