ಭಾರತದಲ್ಲಿ ಬ್ಯಾನ್ ಬಳಿಕ ಟಿಕ್ ಟಾಕ್‌ಗೆ ಮತ್ತೊಂದು ಶಾಕ್

Public TV
2 Min Read

ನವದೆಹಲಿ : ಕೇಂದ್ರ ಸರ್ಕಾರದ ಬಳಿಕ ಚೀನಾ ಕಂಪನಿಗಳಿಗೆ ಭಾರತದ ವಕೀಲರಿಂದ ಬಿಗ್ ಶಾಕ್ ಎದುರಾಗಿದೆ. ಟಿಕ್ ಟಾಕ್ ಪರ ವಾದ ಮಂಡಿಸಲು‌ ಭಾರತದ ಪ್ರಮುಖ ವಕೀಲರು ನಿರಾಕರಿಸಿದ್ದಾರೆ‌.

ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಭದ್ರತೆ ಕಾರಣ ನೀಡಿ ಟಿಕ್ ಟಾಕ್ ಸೇರಿ ಭಾರತದಲ್ಲಿ 59 ಚೀನಾ ನಿರ್ಮಿತ ಮೊಬೈಲ್ ಆ್ಯಪ್ ಗಳನ್ನು ನಿರ್ಬಂಧಿಸಿರುವುದನ್ನು  ಟಿಕ್ ಟಾಕ್ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಮುಂದಾಗಿದೆ. ಈ ಕಾರಣಕ್ಕೆ ಸುಪ್ರೀಂಕೋರ್ಟ್‌ನಲ್ಲಿ ತನ್ನ ಪರ ವಾದ ಮಂಡಿಸಲು ಭಾರತದ ಪ್ರಖ್ಯಾತ ವಕೀರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದೆ.

ಈ ಪೈಕಿ ಕೇಂದ್ರ ಸರ್ಕಾರದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಅವರನ್ನ ಭೇಟಿ ಮಾಡಿ ಟಿಕ್ ಟಾಕ್ ಪ್ರತಿನಿಧಿಸಲು ಮನವಿ ಮಾಡಿದ್ದು ರೊಹ್ಟಗಿ ಮನವಿ ತಿರಸ್ಕರಿಸಿದ್ದಾರೆ. ಸರ್ಕಾರ ತೆಗೆದುಕೊಂಡ ನಿರ್ಧಾರದ ವಿರುದ್ಧವಾಗಿ ಯಾವುದೇ ಚೀನಾ ಕಂಪನಿಗಳ ಪರ ವಾದ ಮಂಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವ ಪ್ಲ್ಯಾನ್ ಗೆ ಹಿನ್ನಡೆಯಾಗಿದೆ.

ಮಂಗಳವಾರ ಟಿಕ್ ಟಾಕ್ ಬಗ್ಗೆ ನಿರ್ಬಂಧ ಬಗ್ಗೆ ಸ್ಪಷ್ಟನೆ ನೀಡಿದ್ದ ಸಂಸ್ಥೆ, ಭಾರತದ ಕಾನೂನುಗಳ ವ್ಯಾಪ್ತಿಗೆ ಒಳಪಟ್ಟು ಕಾರ್ಯನಿರ್ವಹಿಸುತ್ತಿದ್ದೇವೆ ಬಳಕೆದಾರರು ಯಾವ ಮಾಹಿತಿಯನ್ನು ಚೀನಾ ಸೇರಿದಂತೆ ಇತರೆ ದೇಶಗಳೊಂದಿಗೆ ಹಂಚಿಕೊಂಡಿಲ್ಲ‌. ಭಾರತದ ಸಮಗ್ರತೆ ಧಕ್ಕೆ ತರುವ ಕೆಲಸ ಸಂಸ್ಥೆ ಮಾಡುವುದಿಲ್ಲ ಎಂದಿತ್ತು. ಬಗ್ಗೆ ಕೇಂದ್ರ ಸರ್ಕಾರಕ್ಕೂ ಮನವರಿಕೆ ಮಾಡುವ ಪ್ರಯತ್ನ ಮಾಡುವುದಾಗಿ ಟಿಕ್ ಟಾಕ್ ಹೇಳಿತ್ತು.

ಅಪ್ಲಿಕೇಶನ್‌ಗಳ ಮೂಲಕ ಚೀನಾ ಭಾರತ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಸ್ಪೈವೇರ್‌ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿಕ್‌ಟಾಕ್‌ ಸೇರಿದಂತೆ 59 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.

ಭಯ ಯಾಕೆ?
ಅಪ್ಲಿಕೇಶನ್‌ಗಳಿಂದ ಚೀನಾ ಏನು ಮಾಡಬಹುದು ಎಂದು ಪ್ರಶ್ನೆ ಏಳುವುದು ಸಹಜ. ಸದ್ಯ ಮೊಬೈಲ್‌ ಕ್ಷೇತ್ರದಲ್ಲಿ ಚೀನಾ ಕಂಪನಿಗಳೇ ಟಾಪ್‌ ಸ್ಥಾನದಲ್ಲಿವೆ. ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಒಂದು ಬಿಟ್ಟರೆ ಫೋನಿನ ಹಾರ್ಡ್‌ ವೇರ್‌ ಮತ್ತು ಅಪ್ಲಿಕೇಶನ್‌ ಸಾಫ್ಟ್‌ವೇರ್‌ಗಳ ಸಂಪೂರ್ಣ ಹಿಡಿತ ಚೀನಾಕ್ಕಿದೆ. ಹೀಗಾಗಿ ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಇಡಿ ದೇಶದ ಪ್ರಜೆಗಳ ಸಂವಹನ ವ್ಯವಸ್ಥೆಯನ್ನು ತನ್ನತ್ತ ತೆಗೆದುಕೊಳ್ಳಬಹುದು ಎಂಬ ಆರೋಪ ಈ ಹಿಂದಿನಿಂದಲೂ ಇದೆ. ವಿಶೇಷವಾಗಿ ಯುದ್ಧದ ಸಂದರ್ಭದಲ್ಲಿ ಸಂವಹನ ವ್ಯವಸ್ಥೆಯನ್ನು ತನ್ನ ತೆಕ್ಕೆಗೆ ಪಡೆದರೆ ಯಾವ ಸರ್ಕಾರಕ್ಕೂ ಏನು ಮಾಡಲು ಸಾಧ್ಯವಿಲ್ಲ.

Share This Article
Leave a Comment

Leave a Reply

Your email address will not be published. Required fields are marked *