ಭಾಗಮಂಡಲದಲ್ಲಿ ದಾಖಲೆ 48 ಸೆಂ.ಮೀ.ಮಳೆ – ಕಳೆದ ವರ್ಷ ಈ ದಿನ ಎಷ್ಟು ಮಳೆಯಾಗಿತ್ತು?

Public TV
4 Min Read

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಮಳೆ ಸುರಿಯುತ್ತಿದೆ. ಜಿಲ್ಲೆಯ ಭಾಗಮಂಡಲದಲ್ಲಿ ದಾಖಲೆಯ 48 ಸೆಂ.ಮೀ. ಮಳೆಯಾಗಿದೆ. ಗುರುವಾರ ಬೆಳಗ್ಗೆ ಸ್ವಲ್ಪ ಮಟ್ಟಿಗೆ ಕಡಿಮೆಯಾದಂತೆ ಕಂಡುಬಂದರೂ ಸಹ, ಮಧ್ಯಾಹ್ನದ ನಂತರ ಬಿರುಗಾಳಿ ಸಹಿತ ಮಳೆ ಮುಂದುವರಿದಿದೆ.

ಕೊಡಗು ಜಿಲ್ಲೆಯ ಮಳೆ ವಿವರ: ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ ಮಳೆ 177.07 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 76.97 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1298.78 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1016.13 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 238.75 ಮಿ.ಮೀ. ಕಳೆದ ವರ್ಷ ಇದೇ ದಿನ 95.10 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1841.30 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1388.45 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 157.25 ಮಿ.ಮೀ. ಕಳೆದ ವರ್ಷ ಇದೇ ದಿನ 77.92 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1169.39 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1036.12 ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 135.20 ಮಿ.ಮೀ. ಕಳೆದ ವರ್ಷ ಇದೇ ದಿನ 57.89 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 885.65 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 623.83 ಮಿ.ಮೀ. ಮಳೆಯಾಗಿತ್ತು. ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಮಡಿಕೇರಿ ಕಸಬಾ 176, ನಾಪೋಕ್ಲು 214.20, ಸಂಪಾಜೆ 78.20, ಭಾಗಮಂಡಲ 486, ವಿರಾಜಪೇಟೆ ಕಸಬಾ 140, ಹುದಿಕೇರಿ 165, ಶ್ರೀಮಂಗಲ 142, ಪೊನ್ನಂಪೇಟೆ 245, ಅಮ್ಮತ್ತಿ 61.50, ಬಾಳೆಲೆ 190, ಸೋಮವಾರಪೇಟೆ ಕಸಬಾ 140.60, ಶನಿವಾರಸಂತೆ 120, ಶಾಂತಳ್ಳಿ 255.20, ಕೊಡ್ಲಿಪೇಟೆ 165.80, ಕುಶಾಲನಗರ 46.60, ಸುಂಟಿಕೊಪ್ಪ 83 ಮಿ.ಮೀ. ಮಳೆಯಾಗಿದೆ.

ಹಾರಂಗಿ: ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಇಂದಿನ ನೀರಿನ ಮಟ್ಟ 2855.16 ಅಡಿಗಳು, ಕಳೆದ ವರ್ಷ ಇದೇ ದಿನ 2835.16 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 38.20 ಮಿ.ಮೀ., ಕಳೆದ ವರ್ಷ ಇದೇ ದಿನ 16.80 ಮಿ.ಮೀ. ಇಂದಿನ ನೀರಿನ ಒಳಹರಿವು 9081 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 2559 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 11811, ನಾಲೆಗೆ 300. ಕಳೆದ ವರ್ಷ ಇದೇ ದಿನ ನದಿಗೆ 1400, ನಾಲೆಗೆ 700 ಕ್ಯುಸೆಕ್.

ಕಳೆದ ಐದು ದಿನಗಳಿಂದ ಸುರಿದ ಬಿರುಗಾಳಿ ಸಹಿತ ಮಳೆಗೆ ಸಾಕಷ್ಟು ಹಾನಿ ಉಂಟಾಗಿದೆ. ಜಿಲ್ಲೆಯ ಹಲವು ಕಡೆ ರಸ್ತೆಗೆ ಮತ್ತು ವಿದ್ಯುತ್ ಕಂಬಕ್ಕೆ ಮರಗಳು ಬಿದ್ದು ತೆರವುಗೊಳಿಸಿ ಸಾರಿಗೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಹಾಗೆಯೇ ಹೆದ್ದಾರಿಗಳಲ್ಲಿ ಬರೆ ಕುಸಿದಿರುವುದನ್ನು ತೆರವುಗೊಳಿಸಿ, ಸುಗಮ ಸಾರಿಗೆ ಸಂಚಾರಕ್ಕೆ ವ್ಯತ್ಯಯ ಉಂಟಾಗದಂತೆ ಜಿಲ್ಲಾಡಳಿತ ನೋಡಿಕೊಂಡಿದೆ. ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು, ಗುಹ್ಯ, ನೆಲ್ಯಹುದಿಕೇರಿ ಹಾಗೆಯೇ ವಿರಾಜಪೇಟೆಯ ನೆಹರು ನಗರ, ಅಯ್ಯಪ್ಪ ಸ್ವಾಮಿ ಬಡಾವಣೆ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಹೀಗೆ ಹಲವು ರಕ್ಷಣಾ ಕಾರ್ಯಗಳಲ್ಲಿ ಜಿಲ್ಲಾಡಳಿತ, ಪೊಲೀಸ್, ಅರಣ್ಯ, ಸೆಸ್ಕ್, ಅಗ್ನಿ ಶಾಮಕ, ಎನ್‍ಡಿಆರೆಫ್ ತಂಡಗಳು ಕಾರ್ಯ ಪ್ರವೃತ್ತವಾಗಿವೆ.

ನಾಡಿನ ಜೀವನದಿ ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿವೆ. ಬಲಮುರಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರವಾಹ ಉಂಟಾಗಿದೆ. ಮಲ್ಲಳ್ಳಿ, ಅಬ್ಬಿ, ಇರ್ಪು, ಚೇಲಾವರ ಸೇರಿದಂತೆ ಹಲವು ಜಲಪಾತಗಳು ಭೋರ್ಗರೆಯುತ್ತಿವೆ. ಜಿಲ್ಲೆಯಾದ್ಯಂತ ಮುಂಗಾರು ಚುರುಕಾಗಿದೆ. ಜುಲೈ ತಿಂಗಳ ಅಂತ್ಯದ ವೇಳೆಗೆ ಕೊಂಚ ವಿರಾಮ ನೀಡಿದ್ದ ಮಳೆ, ಆಗಸ್ಟ್ ಮೊದಲನೆಯ ವಾರದಲ್ಲಿ ಮತ್ತಷ್ಟು ಬಿರುಸುಗೊಂಡಿದೆ. ಈ ಮೂಲಕ ಜಿಲ್ಲೆಯ ಕೆರೆ ಕಟ್ಟೆ ಮತ್ತು ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಕರುನಾಡ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ.

ಆಗಸ್ಟ್ 1 ರ ಶನಿವಾರ ದಂದು 15.51 ಮಿ.ಮೀ ಇದ್ದ ಜಿಲ್ಲಾ ಸರಾಸರಿ ಮಳೆ, ಆಗಸ್ಟ್ 2 ರ ಭಾನುವಾರದಂದು 11.53 ಮಿ.ಮೀಗೆ ಇಳಿಕೆ ಕಂಡಿತು. ಆದರೆ ಸೋಮವಾರದ ವೇಳೆಗೆ ಮುಂಗಾರು ಬಿರುಸುಗೊಂಡಿದ್ದರಿಂದ ಆಗಸ್ಟ್ 3 ರಂದು ಜಿಲ್ಲಾ ಸರಾಸರಿ ಮಳೆ 50.92 ಮಿ.ಮೀ ಗೆ ಏರಿಕೆ ಕಂಡಿತು. ಬಳಿಕ ಮತ್ತಷ್ಟು ಚುರುಕಾದ ಮುಂಗಾರಿನಿಂದಾಗಿ ಆಗಸ್ಟ್ 4 ರಂದು ಜಿಲ್ಲಾ ಸರಾಸರಿ 106.12 ಮಿ.ಮೀಗೆ ಏರಿತು. ಆಗಸ್ಟ್ 5 ರ ಬುಧವಾರದಂದು ಜಿಲ್ಲಾ ಸರಾಸರಿ ಮಳೆಯು 142.59 ಮಿ.ಮೀ ದಾಖಲಾಯಿತು. ಆಗಸ್ಟ್ 6 ರ ಗುರುವಾರದ ವೇಳೆಗೆ ಜಿಲ್ಲಾ ಸರಾಸರಿ ಮಳೆಯು 162.4 ಮಿ.ಮೀಗೆ ಏರಿಕೆ ಕಂಡಿತು.

ಭಾಗಮಂಡಲ ಹೋಬಳಿಯಲ್ಲಿ ಗುರುವಾರ ಬೆಳಗ್ಗೆ 8:30 ರ ವೇಳೆಗೆ ಸುರಿದ ಮಳೆಯ ಪ್ರಮಾಣ 486.6 ಮಿ.ಮೀ ಆಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ದಾಖಲೆಯ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ತಲಕಾವೇರಿಯ ದೇವಸ್ಥಾನದ ಅರ್ಚಕರುಗಳ ಎರಡು ಮನೆ ಮೇಲೆ ಬಿದ್ದಿದೆ. ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ತಂಡ ತಕ್ಷಣ ಕಾರ್ಯಾಚರಣೆ ತಂಡವು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿದ್ದು, ಅವರು ನೀಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಎರಡು ಮನೆಗಳ ಪೈಕಿ ಒಬ್ಬರು ಅರ್ಚಕರು ಹೊಸ ಮನೆ ನಿರ್ಮಿಸಿಕೊಂಡು ಕುಟುಂಬದೊಂದಿಗೆ ಭಾಗಮಂಡಲದಲ್ಲಿ ನೆಲೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *