ಭಗವಾನ್ ಮುಖಕ್ಕೆ ಮಸಿ ಪ್ರಕರಣ- ಮೀರಾಗೆ ಜಾಮೀನು ನೀಡಲು ಮುಂದಾದ ಬಿಜೆಪಿ ಕಾರ್ಯಕರ್ತ

Public TV
2 Min Read

ಮಂಡ್ಯ: ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್ ಭಗವಾನ್ ಮುಖಕ್ಕೆ ವಕೀಲೆ ಮೀರಾ ರಾಘವೇಂದ್ರ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಕೀಲೆ ಮೀರಾ ರಾಘವೇಂದ್ರ ಅವರಿಗೆ ಜಾಮೀನು ನೀಡಲು ಬಿಜೆಪಿ ಕಾರ್ಯಕರ್ತರೊಬ್ಬರು ಮುಂದಾಗಿದ್ದಾರೆ.

ಶಿವಕುಮಾರ್ ಆರಾಧ್ಯ, ಜಾಮೀನು ನೀಡಲು ಮುಂದಾದ ಬಿಜೆಪಿ ಕಾರ್ಯಕರ್ತ. ಪದೇ ಪದೇ ಪ್ರೊ.ಕೆ.ಎಸ್.ಭಗವಾನ್ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಲೆ ಬರುತ್ತಿದ್ದಾರೆ. ಇದುವರೆಗೂ ಭಗವಾನ್ ಅವರಿಗೆ ಯಾರು ಕೂಡ ತಕ್ಕ ಶಾಸ್ತಿ ಮಾಡಿರಲಿಲ್ಲ. ಇದೀಗ ವಕೀಲೆ ಮೀರಾ ರಾಘವೇಂದ್ರ ಅವರು ಮಸಿ ಬಳಿಯುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಇದಕ್ಕೆ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದು ಶಿವಕುಮಾರ್ ಆರಾಧ್ಯ ಹೇಳಿದ್ದಾರೆ.

ಭಗವಾನ್‍ಗೆ ಮಸಿ ಬಳಿದಿರುವ ಕಾರಣದಿಂದ ಪೊಲೀಸ್ ಠಾಣೆಯಲ್ಲಿ ಮೀರಾ ರಾಘವೇಂದ್ರ ಅವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಹೀಗಾಗಿ ನಾನು ಮೀರಾ ರಾಘವೇಂದ್ರ ಅವರಿಗೆ ನನ್ನ ಸ್ವತಃ ಜಮೀನಿನ ಆರ್‍ಟಿಸಿಯನ್ನು ನೀಡುವ ಮೂಲಕ ಜಾಮೀನು ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಹಿಂದೂ ಧರ್ಮವೆಂಬುದೆ ಇಲ್ಲ. ಹಿಂದೂ ಧರ್ಮ ಅವಮಾನಕಾರ. ಮಾನ ಮರ್ಯಾದೆ ಇದ್ದವರು ಹಿಂದೂ ಧರ್ಮ ಬಳಸಬಾರದು ಎಂದು ಭಗವಾನ್ ಹೇಳಿಕೆ ನೀಡಿದ್ದರು. ಈ ಸಂಬಂಧ 2020ರ ಅಕ್ಟೋಬರ್ 10 ರಂದು ಭಗವಾನ್ ವಿರುದ್ಧ ಮೀರಾ ರಾಘವೇಂದ್ರ ಕ್ರಿಮಿನಲ್ ಕೇಸ್ ಹೂಡಿದ್ದರು. ಈ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಭಗವಾನ್‍ಗೆ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು.

ಗುರುವಾರ ಈ ಪ್ರಕರಣ ಸಂಬಂಧ ಜಾಮೀನು ವಿಚಾರಣೆಗೆ ಭಗವಾನ್ ಕೋರ್ಟಿಗೆ ಆಗಮಿಸಿದ್ದರು. ಈ ವೇಳೆ ಮೀರಾ ರಾಘವೇಂದ್ರ ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ. ಇಷ್ಟು ವಯಸ್ಸು ಆಗಿದೆ. ಇನ್ನು ನಾಚಿಕೆಯಾಗಲ್ವಾ? ರಾಮನ ಬಗ್ಗೆ ಧರ್ಮದ ಬಗ್ಗೆ ಮಾತಾನಾಡ್ತೀರಾ ಅಂತಾ ಮಸಿ ಬಳಿದು ಮೀರಾ ಅವಾಜ್ ಹಾಕಿದ್ದಾರೆ. ನಾನು ಏನೇ ಬಂದ್ರೂ ಎದುರಿಸಲು ರೆಡಿ ಎಂದು ಮೀರಾ ಹೇಳಿದ್ದರು.

ಬುದ್ಧಿಜೀವಿ, ಧರ್ಮ ವಿರೋಧಿ ಪ್ರೊ ಭಗವಾನ್ ಇಂದು ಕೋರ್ಟ್ ಕಟಕಟೆಗೆ ಹಾಜರಾಗಿ ಜಾಮೀನು ಪಡೆದುಕೊಂಡರು. ಅವರಿಗೆ ಮಸಿ ಬಳಿದು ತಕ್ಕ ಶಾಸ್ತಿ ಮಾಡಿದ್ದೇನೆ. ಜೈಶ್ರೀರಾಮ್ ಎಂದು ಮೀರಾ ರಾಘವೇಂದ್ರ ಟ್ವೀಟ್ ಮಾಡಿ ವೀಡಿಯೋ ಅಪ್ಲೋಡ್ ಮಾಡಿದ್ದರು.

ಇತ್ತ ಘಟನೆ ಸಂಬಂಧ ಮೀರಾ ವಿರುದ್ಧ ಸಾಹಿತಿ ಭಗವಾನ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‍ಐಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 341(ಅಕ್ರಮವಾಗಿ ತಡೆಯವುದು), 504(ಅವಾಚ್ಯವಾಗಿ ನಿಂದನೆ)ಅಡಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *