ಬ್ಲೇಡ್‍ನಿಂದ ಕೊಯ್ದು ಕರುಳ ಕುಡಿಯನ್ನೇ ಹತ್ಯೆ ಮಾಡಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Public TV
1 Min Read

ಚಾಮರಾಜನಗರ: ಕರುಣೆ ಇಲ್ಲದೆ ಕರುಳ ಕುಡಿಯನ್ನೇ ಬ್ಲೇಡ್ ನಿಂದ ಕೊಯ್ದು ಕೊಲೆ ಮಾಡಿದ್ದ ತಾಯಿಗೆ ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಹನೂರು ತಾಲೂಕಿನ ಚಿಕ್ಕಮಾಲಾಪುರದ ಚಂದ್ರಮ್ಮ ತನ್ನ ನವಜಾತ ಶಿಶುವನ್ನು ಕೊಂದ ಅಪರಾಧಕ್ಕೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಕಳೆದ ಐದು ವರ್ಷಗಳಿಂದ ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿನಯ್ ಅವರು ಅಪರಾಧಿ ಚಂದ್ರಮ್ಮಳಿಗೆ ಜೀವಾವಧಿ ಶಿಕ್ಷೆ ಜೊತೆಗೆ 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಉಷಾ ವಾದ ಮಂಡಿಸಿದ್ದರು. ಚಂದ್ರಮ್ಮಳ ಹಿರಿಯ ಮಗಳೇ ತಾಯಿಯ ವಿರುದ್ಧ ಸಾಕ್ಷ್ಯ ಹೇಳಿದ್ದಳು. ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದ ಚಿಕ್ಕಮಾಲಾಪುರದ ಚಂದ್ರಮ್ಮ, ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಳು. 2015ರ ಮೇ 10 ರಂದು ಈಕೆಗೆ ಗಂಡು ಮಗು ಜನಿಸಿತ್ತು. ಅದರೆ ಅಂದೇ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪರಾರಿಯಾಗಿದ್ದ ಚಂದ್ರಮ್ಮ ತನ್ನ ನವಜಾತ ಶಿಶುವನ್ನು ಚಿಕ್ಕಮಾಲಾಪುರಕ್ಕೆ ತೆಗೆದುಕೊಂಡು ಹೋಗಲು ಹೆದರಿ, ಕರುಳಬಳ್ಳಿ ಕತ್ತರಿಸುವ ಬ್ಲೇಡ್‍ನಿಂದ ಮಗುವನ್ನು ಕೊಲೆ ಮಾಡಿ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆ ಎದುರಿನ ಪೂವಿನಕಟ್ಟೆ ಕೆರೆಗೆ ಎಸೆದು ಪರಾರಿಯಾಗಿದ್ದಳು.

ಮಗು ಕೆರೆಯಲ್ಲಿ ಸತ್ತು ಬಿದ್ದಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು, ಮಗುವಿನ ತಾಯಿ ಚಂದ್ರಮ್ಮಳನ್ನು ಪತ್ತೆ ಹಚ್ಚಿದ್ದರು. ಚಂದ್ರಮ್ಮಳ ವಿರುದ್ಧ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದ ಅಂದಿನ ಸರ್ಕಲ್ ಇನ್‍ಸ್ಪೆಕ್ಟರ್ ಸಿದ್ದಯ್ಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿನಯ್ ಅವರು, ಆರೋಪ ಸಾಬೀತಾದ ಹಿನ್ನಲೆಯಲ್ಲಿ ಚಂದ್ರಮ್ಮಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *