ಮಡಿಕೇರಿ: ಕೊಡಗು ಜಿಲ್ಲೆಯ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿದು ಐವರು ಕಾಣೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರ ಮೃತದೇಹ ಪತ್ತೆಯಾಗಿದ್ದು, ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
ಬೆಳಗ್ಗೆಯಿಂದ ಕೊಂಚ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಗಿದ್ದು, ಜಿಟಿಜಿಟಿ ಮಳೆ ನಡುವೆಯೂ ನಾರಾಯಣ ಆಚಾರ್ ಮತ್ತು ಕುಟುಂಬದವರಿಗಾಗಿ ಹುಡುಕಾಟ ಆರಂಭವಾಗಿದೆ. ಜೆಸಿಬಿ ಬಳಸಿ ಎನ್ಡಿಆರ್ಎಫ್ ತಂಡ ಕಾರ್ಯಚರಣೆ ನಡೆಸುತ್ತಿದ್ದು, ಘಟನೆ ನಡೆದು ಮೂರು ದಿನಗಳ ಬಳಿಕ ಹುಡುಕಾಟ ಆರಂಭವಾಗಿದೆ. ನಾರಾಯಣ ಆಚಾರ್ ಸೇರಿ ಐವರು ಭೂಕುಸಿತದಲ್ಲಿ ಕಣ್ಮರೆಯಾಗಿದ್ದರು.
ಇದೀಗ ಎನ್ಡಿಆರ್ಎಫ್ ತಂಡ ಕಾರ್ಯಾಚರಣೆ ಪ್ರಾರಂಭಿಸಿದ್ದು, ನಾರಾಯಣಚಾರ್ ಅಣ್ಣ ಆನಂದತೀರ್ಥರ ಮೃತದೇಹ ಪತ್ತೆಯಾಗಿದೆ. ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇದೀಗ ಹಗ್ಗ ಬಳಸಿ ಎನ್ಡಿಆರ್ಎಫ್ ತಂಡ ಶೋಧ ಕಾರ್ಯ ನಡೆಸುತ್ತಿದೆ. ಅವಶೇಷಗಳು ಇರುವ ಜಾಗದಲ್ಲಿ ದೊಣ್ಣೆ ಬಳಸಲಾಗುತ್ತಿದೆ. ಮಳೆ ನಡುವೆಯೇ ಕಾರ್ಯಾಚರಣೆ ನಡೆಯುತ್ತಿದ್ದು, ಎನ್ಡಿಆರ್ಎಫ್ ಸಿಬ್ಬಂದಿ ಹರಸಾಹಸಪಟ್ಟು ನಾಪತ್ತೆಯಾದವರ ಹುಡುಕಾಟದಲ್ಲಿ ತೊಡಗಿದೆ.
ಆಗಸ್ಟ್ 6ರಂದು ದುರ್ಘಟನೆ ಸಂಭವಿಸಿತ್ತು. ಅರ್ಚಕರ ಎರಡು ಮನೆಗಳ ಮೇಲೆ ಬ್ರಹ್ಮಗಿರಿ ಬೆಟ್ಟ ಕುಸಿದಿತ್ತು. ಘಟನೆ ಸಂಭವಿಸುತ್ತಿದ್ದಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಎಚ್ಚೆತ್ತುಕೊಂಡು ಎನ್ಡಿಆರ್ಎಫ್ ಸಿಬ್ಬಂದಿ ಮೂಲಕ ಪರಿಹಾರ ಕೈಗೊಂಡಳ್ಳುವಂತೆ ಸೂಚಿಸಿದ್ದರು. ಭಾರೀ ಮಳೆ ಹಿನ್ನೆಲೆ ಕಾರ್ಯಾಚರಣೆ ಕಷ್ಟಸಾಧ್ಯವಾಗಿತ್ತು. ಇಂದು ಮಳೆ ಸ್ವಲ್ಪ ಬಿಡುವು ನೀಡಿದ್ದರಿಂದ ಎನ್ಡಿಆರ್ಎಫ್ ತಂಡ ಮತ್ತೆ ಕಾರ್ಯಾಚರಣೆ ಆರಂಭಿಸಿದೆ. ಈ ವೇಳೆ ಒಬ್ಬರ ಮೃತದೇಹ ಪತ್ತೆಯಾಗಿದೆ. ಇಡೀ ಕುಟುಂಬಸ್ಥರ ಆಸೆಯನ್ನು ತೊರೆದಿರುವ ಸಂಬಂಧಿಕರು ಮೃತದೇಹಗಳನ್ನಾದರೂ ತೆಗೆದುಕೊಡಿ ಎಂದು ಗೋಗರೆಯುತ್ತಿದ್ದಾರೆ.