ಬೈಕ್‍ನಲ್ಲಿ ಶಾಸಕ, ಅಧಿಕಾರಿಗಳ ಯೋಗಕ್ಷೇಮ ಯಾತ್ರೆ

Public TV
1 Min Read

ಮೈಸೂರು: ಕೊರೊನಾ ವೈರಸ್ ನಡುವೆ ತತ್ತರಿಸಿ ಹೋದ ಜನರ ಸಮಸ್ಯೆಗಳನ್ನು ಜನಪ್ರತಿನಿಧಿಗಳಿಗೆ ಕೇಳಲು ಹಲವು ಅಡೆತಡೆ ಇವೆ. ಇದಕ್ಕೆ ಮಾಜಿ ಸಚಿವ, ಎಸ್.ಎ.ರಾಮದಾಸ್ ಪರ್ಯಾಯ ಮಾರ್ಗ ಹುಡುಕಿ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಜನಪ್ರತಿನಿಧಿ ಮತ್ತು ಅಧಿಕಾರಿಗಳು ದ್ವಿಚಕ್ರ ವಾಹನದಲ್ಲೇ ಕ್ಷೇತ್ರ ಸುತ್ತಿ ಜನರ ಸಮಸ್ಯೆ ಕೇಳಿ ಅಲ್ಲೆ ಅದಕ್ಕೆ ಪರಿಹಾರ ಕೊಡಿಸುವ ಯಾತ್ರೆ ಶುರು ಮಾಡಿದ್ದಾರೆ. ಇದಕ್ಕೆ ಯೋಗಕ್ಷೇಮ ಯಾತ್ರೆ ಅಂತಾ ಹೆಸರಿಡಲಾಗಿದೆ.

ಮೈಸೂರಿನ ಕೆ.ಆರ್ ಕ್ಷೇತ್ರದಲ್ಲೀಗ ಯೋಗಕ್ಷೇಮ ಯಾತ್ರೆ ನಡೆಯುತ್ತಿದೆ. ಕ್ಷೇತ್ರದ ಪ್ರತಿ ವಾರ್ಡ್ ಗಳಿಗೆ 23 ಇಲಾಖೆಯ ಅಧಿಕಾರಿಗಳ ಜೊತೆ ದ್ವಿಚಕ್ರ ವಾಹನದಲ್ಲೇ ಸಾಗಿ ಸಾರ್ವಜನಿಕರ ಸಮಸ್ಯೆ ಆಲಿಸಿ ಸ್ಥಳದಲ್ಲೇ ಅದನ್ನ ಪರಿಹರಿಸುವ ಕೆಲಸ ನಡೆಯುತ್ತಿದೆ. ಮೂಲಭೂತ ಸೌಕರ್ಯ ಹಾಗೂ ಉದ್ಯೋಗ ಸೇರಿದಂತೆ ಕೊರೋನಾ ವೈದ್ಯಕೀಯ ವೆಚ್ಚದ ಬಿಲ್ ಪಾವತಿಯ ಸಮಸ್ಯೆಯೆ ಹೆಚ್ಚಾಗಿ ಕೇಳಿ ಬಂದಿದೆ.

ಶಾಸಕರು ಸಂಚಾರಿ ನಿಯಮದ ಜೊತೆಗೆ ಮಾಸ್ಕ್ ಧರಿಸಿ ಬೈಕ್‍ನಲ್ಲಿ ಕ್ಷೇತ್ರ ಸಂಚಾರ ಮಾಡುತ್ತಿದ್ದಾರೆ. ಈ ವೇಳೆ ಕ್ಷೇತ್ರದ ವಾರ್ಡ್‍ನಲ್ಲಿ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯ ಹೇಗಿದೆ ಎಂಬುದನ್ನು ಗಮನಿಸುತ್ತಿದ್ದಾರೆ. ಈ ವೇಳೆ ಕೆಲಸ ಆಗದ ಬಗ್ಗೆ ಮಾಹಿತಿ ಪಡೆದು ಎಷ್ಟು ಸಮಯದಲ್ಲಿ ಈ ಕೆಲಸ ಆಗಲಿದೆ ಎಂದು ಮಾಹಿತಿ ಕಲೆ ಹಾಕಿ ಅದನ್ನ ಫಾಲೋಪ್ ಮಾಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಯಾತ್ರೆ ಒಂದು ವಾರ ನಡೆಯಲಿದೆ. ಸಮಸ್ಯೆ ಗಮನಿಸಿದ ಬಳಿಕ ಒಂದು ವಾರ್ಡ್‍ನ ಸಮುದಾಯ ಭವನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ಮಾಡಿ ಅಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಲಾಗ್ತಿದೆ. ಕೊರೊನಾ ನಡುವೆ ಮೂಲಭೂತ ಸೌಕರ್ಯದ ಪರಿಹಾರಕ್ಕೆ ಜನ ಪರದಾಡುತ್ತಿರುವಾಗ ಅವರ ಸಮಸ್ಯೆ ನಿವಾರಿಸಲು ಕೊರೊನಾ ನಡುವೆ ಹೊಸ ಐಡಿಯಾ ಮಾಡಿರೋದು ಮಾದರಿ ಎನ್ನಬಹುದು.

Share This Article
Leave a Comment

Leave a Reply

Your email address will not be published. Required fields are marked *