ಬೈಂದೂರಲ್ಲಿ 550 ಕೋಟಿ ಕುಡಿಯುವ ನೀರಿನ ಯೋಜನೆ- ಬಿ.ವೈ ರಾಘವೇಂದ್ರ, ಸುಕುಮಾರ ಶೆಟ್ಟಿ ನೇತೃತ್ವದಲ್ಲಿ ಸಭೆ

Public TV
2 Min Read

ಉಡುಪಿ: ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕುಡಿಯುವ ನೀರಿನ ಯೋಜನೆಗೆ ಸಂಬಂಧಪಟ್ಟಂತೆ ಅಧಿಕಾರಿಗಳ ಸಭೆ ಮಂಗಳವಾರ ಹೆಮ್ಮಾಡಿಯಲ್ಲಿ ನಡೆಯಿತು. 550 ಕೋಟಿ ರುಪಾಯಿ ವೆಚ್ಚದಲ್ಲಿ 2 ಕ್ಲಸ್ಟರ್ ಮಾಡಲಾಗಿದ್ದು, ಆರಂಭದಲ್ಲಿ 60 ಸಾವಿರ ಮನೆಗಳಿಗೆ ಕುಡಿಯುವ ನೀರು ತಲುಪಿಸುವ ಯೋಜನೆ ಇದಾಗಿದೆ.

ಬಹು ನೀರಿನ ಕುಡಿಯುವ ಯೋಜನೆ ಪ್ರಕಾರ ಭವಿಷ್ಯದ ದೃಷ್ಟಿಯಿಂದ 71 ಸಾವಿರ ಮನೆಗಳಿಗೆ ನೀರು ಒದಗಿಸುವ ಯೋಜನೆ ಇದಾಗಿದ್ದು, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಸುಕುಮಾರ ಶೆಟ್ಟಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಹೆಮ್ಮಾಡಿಯಲ್ಲಿ ನಡೆದ ಸಭೆಯಲ್ಲಿ ಮೊದಲ ಹಂತದ ಚರ್ಚೆ ಅಭಿಪ್ರಾಯ ಸಂಗ್ರಹ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ವರಾಹಿ ಡ್ಯಾಂ ಮತ್ತು ಗುಲ್ವಾಡಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ನೀರು ಪೂರೈಸಲಾಗುವುದು. ವಿಧಾನಸಭಾ ಕ್ಷೇತ್ರದಲ್ಲಿ 220 ಟ್ಯಾಂಕ್ ನಿರ್ಮಾಣವಾಗಲಿದೆ. 2 ವರ್ಷದಲ್ಲಿ ಕೆಲಸ ಪೂರ್ಣ ಮಾಡ್ತೇವೆ ಎಂದರು. ಸಿಎಂ ಯಡಿಯೂರಪ್ಪ ಪ್ರತಿನಿಧಿಸಿದ ಕ್ಷೇತ್ರ ಇದಾಗಿದ್ದು ಆದ್ಯತೆ ಮೇರೆಗೆ ಕೆಲಸ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರ ಇಚ್ಛೆಯಂತೆ ದೇಶದ ಪ್ರತಿ ಗ್ರಾಮಕ್ಕೂ, ಪ್ರತಿ ಮನೆಗೂ ನೀರು ತಪುಪಿಸುತ್ತೇವೆ ಎಂದರು.

ಶಾಸಕ ಸುಕುಮಾರ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಐದು ನದಿಗಳು ಹರಿದು ಸಮುದ್ರ ಸೇರಿದರೂ ಬೇಸಿಗೆಯಲ್ಲಿ ಟ್ಯಾಂಕರ್ ನೀರು ಕುಡಿಯುವ ಸ್ಥಿತಿ ಇದೆ. ಆದ್ಯತೆ ಮೇರೆಗೆ ಬೈಂದೂರಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಯೋಜನೆ ರೂಪಿಸಿ ಹಣ ಬಿಡುಗಡೆ ಮಾಡಿದೆ. ತಾಲೂಕಿನಲ್ಲಿ ಉಪ್ಪು ನೀರಿಗೆ ತಡೆಯೊಡ್ಡುವ ಉದ್ದೇಶದಿಂದ ಅಲ್ಲಲ್ಲಿ 110 ಕೋಟಿ ವೆಚ್ಚದಲ್ಲಿ ವೆಂಟೆಂಡ್ ಡ್ಯಾಂ ನಿರ್ಮಿಸುತ್ತೇವೆ. ಮೀನುಗಾರಿಕಾ ಬಂದರು, ಜಟ್ಟಿ, ರಸ್ತೆಗಳು ಹೀಗೆ ಅಭಿವೃದ್ಧಿ ಸಮಾರೋಪಾದಿಯಲ್ಲಿ ನಡೆಯುತ್ತಿದೆ. ಈಗಾಗಲೇ ಜಿಲ್ಲೆಗೆ 1,350 ಕೋಟಿ ರುಪಾಯಿಯ ವಿವಿಧ ಯೋಜನೆ ತಂದಿದ್ದೇವೆ. ಸಮಗ್ರ ತಾಲೂಕು ಅಭಿವೃದ್ಧಿ ಪಣ ತೊಟ್ಟು ಕೆಲಸ ಮಾಡುತ್ತಿದ್ದೇನೆ ಎಂದರು.

ಜಿಲ್ಲಾ ಪಂಚಾಯತ್ ಸಿಇಒ ನವೀನ್ ಭಟ್, ಎಸಿ ಕೆ, ರಾಜು, ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರ್, ದೀಪಕ್ ಕುಮಾರ್ ಶೆಟ್ಟಿ, ಕುಂದಾಪುರ ತಾ.ಪಂ ಇಒ ಕೇಶವ ಶೆಟ್ಟಿಗಾರ್, ಜಿ.ಪಂ, ತಾಲೂಕು ಪಂಚಾಯತ್ ಸದಸ್ಯರು ಮತ್ತಿತರರು ಸಭೆಯಲ್ಲಿ ಪಾಲ್ಗೊಂಡರು.

Share This Article
Leave a Comment

Leave a Reply

Your email address will not be published. Required fields are marked *