ಬೆಳೆ ಹಾಳಾಗಬಾರದೆಂದು ಪ್ರಾಣ ಒತ್ತೆಯಿಟ್ಟು ಸಾಗಿಸಿದ ರೈತರು- ಎದೆ ಜಲ್ ಎನ್ನಿಸುತ್ತೆ ದೃಶ್ಯ

Public TV
1 Min Read

ಕೊಪ್ಪಳ: ರೈತರು ತಾವು ಬೆಳೆದ ಬೆಳೆ ಹಾಳಾಗಬಾರದೆಂದು ಪ್ರಾಣವನ್ನೇ ಒತ್ತೆಯಿಟ್ಟು, ಹರಸಾಹಸ ಪಟ್ಟು ಬೆಳೆ ಸಾಗಿಸುತ್ತಿದ್ದಾರೆ. ಪ್ರವಾಹದ ನೀರಿನ ಮಧ್ಯೆ ಬೆಳೆ ಸಾಗಿಸುತ್ತಿರುವ ದೃಶ್ಯ ಎದೆ ಜೆಲ್ ಎನಿಸುತ್ತದೆ.

ಕೊಪ್ಪಳ ತಾಲೂಕಿನ ಕಾತರಕಿ-ಗುಡ್ಲಾನೂರ ಗ್ರಾಮದ ಬಳಿ ಹಿನ್ನೀರ ಪ್ರದೇಶದಲ್ಲಿ ನೀರು ಆವರಿಸಿದ್ದು ಬೆಳೆದ ಬೆಳೆಯನ್ನು ಸಾಗಿಸಲು ರೈತರು ಹರಸಾಹಸ ಪಡುವಂತಾಗಿದೆ. ತುಂಗಾಭದ್ರಾ ಜಲಾಶಯ ಹಿನ್ನೀರಿನ ಅಚ್ಚುಕಟ್ಟು ಪ್ರದೇಶದಲ್ಲಿ ನೀರು ತುಂಬಿದೆ. ರಸ್ತೆ ಸಂಪೂರ್ಣ ಜಲಾವೃತವಾಗಿರುವುದರಿಂದ ನೀರಿನಲ್ಲೆ ಹರಸಾಹಸ ಪಟ್ಟು ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ತಮ್ಮ ಎತ್ತಿನ ಬಂಡಿಯಲ್ಲೆ ರೈತರು ಬೆಳೆಸಾಗಿಸುತ್ತಿದ್ದು, ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹ ಅಪಾಯದ ಮಧ್ಯೆಯೂ ಬೆಳೆದ ಬೆಳೆ ಹಾಳಾಗುವ ಭೀತಿಯಿಂದ ಎತ್ತಿನ ಬಂಡಿಯಲ್ಲಿ ಸಾಗಿಸುತ್ತಿದ್ದಾರೆ. ನೂರಾರು ಎಕರೆ ಭೂಮಿ ನೀರಿನಿಂದ ಆವರಿಸಿದ್ದು, ಬೆಳೆದ ಬೆಳೆ ಸಾಗಿಸಲಾಗದೆ ಕೆಲ ರೈತರು ಕಂಗಾಲಾಗಿದ್ದಾರೆ. ಇನ್ನೂ ಕೆಲ ರೈತರು ಜೀವದ ಹಂಗು ತೊರೆದು ಸಾಗಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿಕೊಡಿ ಎಂದು ಸಾಕಷ್ಟು ಬಾರಿ ಶಾಸಕರ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *