ಬೆಳಗಾವಿಯ ಇಂಚಲ ಗ್ರಾಮದ ಪ್ರತಿ ಮನೆಯಲ್ಲಿಯೂ ಓರ್ವ ಶಿಕ್ಷಕ

Public TV
1 Min Read

-ಗ್ರಾಮದ 300ಕ್ಕೂ ಹೆಚ್ಚು ಯುವಕರು ಸೇನೆ ಸೇರ್ಪಡೆ

ಬೆಳಗಾವಿ: ಹಿಂದುಳಿದ ತಾಲೂಕಿನಲ್ಲಿ ಅದೊಂದು ಕುಗ್ರಾಮ. ಶಿಕ್ಷಣದ ಬದಲು ಈ ಗ್ರಾಮದಲ್ಲಿ ಕೊಲೆ ಸುಲಿಗೆ, ಮಚ್ಚುಲಾಂಗು ಅಬ್ಬರ ಜಾಸ್ತಿಯಾಗಿತ್ತು. ಹೀಗಿದ್ದ ಗ್ರಾಮದಲ್ಲಿ ಇದೀಗ ಶಿಕ್ಷಣದ ಕಂಪು ಪಸರಿಸಿ ಮನಗೊಬ್ಬರಂತೆ ಶಿಕ್ಷಕರಿದ್ದಾರೆ. ಸ್ವಾಮೀಜಿಯವರ ನಿಸ್ವಾರ್ಥ ಸೇವೆಯಿಂದ ಗ್ರಾಮದ ಮನೆಯಲ್ಲೊಬ್ಬರು ಶಿಕ್ಷಕರಿದ್ದಾರೆ. ಗ್ರಾಮವನ್ನ ಇದೀಗ ರಾಜ್ಯದಲ್ಲಿ ಶಿಕ್ಷಕರ ತವರೂರು ಎಂದೇ ಗುರುತಿಸಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮ ಇದೀಗ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಗ್ರಾಮ. ಈ ಗ್ರಾಮದಲ್ಲಿ ಮನಗೆ ಒಬ್ಬರಂತೆ ಶಿಕ್ಷರಿದ್ದಾರೆ ಅಂದ್ರೆ ನೀವು ನಂಬಲೇಬೇಕು. ನಲತ್ತೈದು ವರ್ಷದ ಹಿಂದೆ ಇಂಚಲ ಗ್ರಾಮದಲ್ಲಿ ಕೊಲೆ ಸುಲಿಗೆ ಅಕ್ರಮ ಚಟುವಟಿಕೆಗಳೇ ಹೆಚ್ಚಾಗಿತ್ತು. ಇದನ್ನ ಕಂಡ ಅದೇ ಗ್ರಾಮದಲ್ಲಿರುವ ಇಂಚಲ ಮಠದ ಶಿವಾನಂದ ಭಾರತಿ ಮಹಾಸ್ವಾಮಿಗಳು ಎಲ್ಲರೂ ವಿದ್ಯಾವಂತರಾದರೆ ನೆಮ್ಮದಿ ನೆಲಸಬಹುದು ಅಂದುಕೊಂಡು ಶಾಲೆಯನ್ನ ಪ್ರಾರಂಭಿಸುತ್ತಾರೆ.

1975ರಲ್ಲಿ ಪ್ರೌಢ ಶಿಕ್ಷಣ, 1982ರಲ್ಲಿ ಪಿಯು ಕಾಲೇಜು, 1985ರಲ್ಲಿ ಡಿಎಡ್ ಕಾಲೇಜು ಆರಂಭ ಮಾಡ್ತಾರೆ. ಹೀಗೆ ಆರಂಭದಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿದ್ದರು. ಇದೀಗ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ. ಇಂಚಲ ಗ್ರಾಮದಲ್ಲಿ ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದು, ಸುಮಾರು ಒಂದು ಸಾವಿರಕ್ಕೂ ಅಧಿಕ ಮನೆಗಳಿವೆ. ಗ್ರಾಮದಲ್ಲಿ ಇಲ್ಲಿವರೆಗೂ ಸುಮಾರು ಒಂಬತ್ತನೂರಕ್ಕೂ ಅಧಿಕ ಶಿಕ್ಷಕರಿದ್ದು, ಎಲ್ಲರೂ ಸರ್ಕಾರಿ ಶಿಕ್ಷರೇ ಎಂಬುದು ವಿಶೇಷ. ಕೆಲವು ಮನೆಗಳಲ್ಲಿ ಮೂರು ನಾಲ್ಕರಿಂದ ಹನ್ನೆರಡು ಜನರವರೆಗೂ ಶಿಕ್ಷಕರಿದ್ದಾರೆ. ಸತಾರ್ ಇಸ್ಮಾಯಿಲ್ ಸಾಬ್ ಎಂಬವರ ಮನೆಯಲ್ಲೇ ಹನ್ನೆರಡು ಜನ ಶಿಕ್ಷರಿದ್ದಾರೆ.

ಕೇವಲ ಶಿಕ್ಷಣ ಇಲಾಖೆಯಲ್ಲಿ ಮಾತ್ರ ಸೇವೆ ಸಲ್ಲಿಸುತ್ತಿಲ್ಲ, 300ಕ್ಕೂ ಹೆಚ್ಚು ಯುವಕರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ 70ಕ್ಕೂ ಹೆಚ್ಚು ಸೈನಿಕರು ನಿವೃತ್ತರಾಗಿ ಗ್ರಾಮಕ್ಕೆ ಮರಳಿದ್ದಾರೆ. ಇದಲ್ಲದೇ ಡಾಕ್ಟರ್, ಇಂಜಿನಿಯರ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *