ಬೆಂಗ್ಳೂರು ಜನತೆಗೆ ಧನ್ಯವಾದ ಅರ್ಪಿಸಿದ ಭಾಸ್ಕರ್ ರಾವ್

Public TV
1 Min Read

– ಏನೇ ಸಮಸ್ಯೆಯಾದಲ್ಲಿ 100ಕ್ಕೆ ಕರೆ ಮಾಡಿ

ಬೆಂಗಳೂರು: ರಾಜ್ಯದಲ್ಲಿ ಮೊದಲ ಸಂಡೇ ಲಾಕ್‍ಡೌನ್ ಯಶಸ್ವಿಯಾಗಿ ಅಂತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಬೆಂಗಳೂರು ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.

ಭಾಸ್ಕರ್ ರಾವ್ ಅವರು ಟ್ವೀಟ್ ಮಾಡುವ ಮೂಲಕ ಸಂಡೇ ಲಾಕ್‍ಡೌನ್ ಅನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಜನರಿಗೆ ಧನ್ಯವಾದ ತಿಳಿಸಿದ್ದಾರೆ. “36 ಗಂಟೆಗಳ ಲಾಕ್‍ಡೌನ್ ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದೀರಿ. ನಿಮಗೆಲ್ಲಾ ಹೃತ್ಪೂರ್ವಕ ಧನ್ಯವಾದಗಳು” ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ “ಇನ್ನು ಮುಂದೆ ಮಾಸ್ಕ್ ಧರಿಸಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ನಮಗೆ ನಾವೇ ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕು. ನಿಮಗೆ ಏನೇ ಸಮಸ್ಯೆಯಾದಲ್ಲಿ 100 ನಂಬರಿಗೆ ಫೋನ್ ಮಾಡಿ. ತಕ್ಷಣ ನಿಮ್ಮ ಪಕ್ಕದಲ್ಲಿರುವ ಹೊಯ್ಸಳ ಅವರು ಬಂದು ಸ್ಪಂದಿಸುತ್ತಾರೆ” ಎಂದು ಜನತೆಗೆ ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸುನಾಮಿ ಸ್ಫೋಟಕ್ಕೆ ಬ್ರೇಕ್ ಹಾಕಲು ಸಂಡೇ ಲಾಕ್‍ಡೌನ್ ಅಸ್ತ್ರಕ್ಕೆ ಜನರಿಂದ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ಹಂತದಲ್ಲಿ ಮಹಾಮಾರಿ ಕೊರೊನಾ ಕಂಟ್ರೋಲ್‍ಗೆ ಸರ್ಕಾರ ಆದೇಶಿಸಿದ್ದ ಫಸ್ಟ್ ಸಂಡೇ ಲಾಕ್‍ಡೌನ್ ಇಂದು ಬೆಳಗ್ಗೆ 5 ಗಂಟೆಗೆ ಯಶಸ್ವಿಯಾಗಿ ಅಂತ್ಯವಾಗಿದೆ. ಈ ಹಿಂದಿನ ಲಾಕ್‍ಡೌನ್‍ಗಳಿಗೆ ಹೋಲಿಸಿದರೆ 33 ಗಂಟೆಗಳ ಸಂಡೇ ಲಾಕ್‍ಡೌನ್‍ಗೆ ಜನ ಸಹಕರಿಸಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರು ಬಹುತೇಕ ಸ್ತಬ್ಧವಾಗಿತ್ತು. ಜನರ ಓಡಾಟ ಭಾರೀ ವಿರಳವಾಗಿತ್ತು. ಮನೆಯಲ್ಲೇ ಇದ್ದ ಬೆಂಗಳೂರಿಗರು ಸಂಡೇ ಲಾಕ್‍ಡೌನ್‍ಗೆ ಬೆಂಬಲ ಸೂಚಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *