ಬೆಂಗ್ಳೂರು, ಉಡುಪಿಯಲ್ಲಿ ಗಾಳಿ ಸಹಿತ ಜೋರು ಮಳೆ

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು, ಉಡುಪಿ, ಕೋಲಾರ ಸೇರಿದಂತೆ ರಾಜ್ಯದ ವಿವಿಧೆಡೆ ಇಂದು ಮಳೆಯಾಗಿದೆ.

ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವರುಣ ಅಬ್ಬರಿಸಲಿದ್ದಾನೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ವರುಣನ ಆರ್ಭಟ ಜೋರಾಗಿಯೇ ಇತ್ತು. ವಿಧಾನಸೌಧ, ಕಬ್ಬನ್ ಪಾರ್ಕ್, ಶಿವಾಜಿನಗರ, ರಾಜಭವನ್, ಯಶವಂತಪುರ ಸುತ್ತಮುತ್ತ ಮಳೆಯಾಗಿದೆ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ವರುಣನ ಅಬ್ಬರಕ್ಕೆ ತತ್ತರಿಸಿ ಹೋಗಿದ್ದಾರೆ.

ಮಳೆಯಿಂದಾಗಿ ಸಮಸ್ಯೆ ನಗರದ ಬಹತೇಕ ರಸ್ತೆಗಳು ಕೆರೆಯಂತಾಗಿದ್ದು, ನೀರು ನಿಂತ ರಸ್ತೆಯಲ್ಲಿ ವಾಹನ ಸವಾರರು ಪರದಾಡಿದರು. ಕೆ.ಆರ್ ಸರ್ಕಲ್‍ನ ರಸ್ತೆಯಲ್ಲಿ ಎರಡು ಅಡಿವರೆಗೂ ಮಳೆ ನೀರು ನಿಂತಿತ್ತು.

ಉಡುಪಿ: ಜಿಲ್ಲೆಯಲ್ಲಿ ಭಾರೀ ಗಾಳಿ ಸಹಿತ ವರ್ಷಧಾರೆಯಾಗಿದೆ. ಹವಾಮಾನ ಇಲಾಖೆಯು ಧಾರಾಕಾರ ಮಳೆ ಮುನ್ಸೂಚನೆ ನೀಡಿತ್ತು. ಹೀಗಾಗಿ ಜಿಲ್ಲೆಯ ಜನರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಇತ್ತ ಕುಂದಾಪುರ, ಕಾಪು ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದೆ.

ಕೋಲಾರ: ಜಿಲ್ಲೆಯಾದ್ಯಂತ ಬೆಳಗಿನಿಂದಲೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ತುಂತುರು ಮಳೆಯಾಗಿದೆ. ಜಿಲ್ಲೆಯ ಹಲವೆಡೆ ನೆಲಗಡಲೆ ಹಾಗೂ ತೊಗರೆ ನಾಟಿಗೆ ಅನಕೂಲವಾಗಲಿದ್ದು, ತುಂತುರು ಮಳೆಗೆ ಜಿಲ್ಲೆಯ ರೈತರು ಫುಲ್ ಖುಷ್ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *