ಬೆಂಗ್ಳೂರಿನಲ್ಲಿ ಹೇಯ ಕೃತ್ಯ- ಡ್ರಗ್ಸ್ ಕೊಟ್ಟು ಮಗಳ ಮೇಲೆ ನಿರಂತರ ಅತ್ಯಾಚಾರ

Public TV
2 Min Read

– ಆಹಾರ ಪದಾರ್ಥದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಡ್ತಿದ್ದ ತಾಯಿ
– ಹೈದರಾಬಾದ್ ಹೋಟೆಲಿನಲ್ಲಿ ಮದ್ಯ ಕುಡಿಸಿ ಅತ್ಯಾಚಾರ
– ನಗ್ನ ಫೋಟೋ ತೆಗೆಸಿ, ಲೈಂಗಿಕ ಚಟುವಟಿಕೆಗಳಿಗೆ ಒತ್ತಾಯ

ಬೆಂಗಳೂರು: ಪಾಪಿ ಮಲತಂದೆಯೊಬ್ಬ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಆರೋಪಿಯನ್ನು ಅರಕೆರೆಯ ಸಾಮ್ರಾಟ್ ಲೇಔಟ್ ನಿವಾಸಿ ಅಲೆಗ್ಸಾಂಡರ್ ದಾಸ್ ಎಂದು ಗುರುತಿಸಲಾಗಿದೆ. ಆರೋಪಿ ತಂದೆ 20 ವರ್ಷದ ಮಗಳಿಗೆ ಡ್ರಗ್ಸ್ ಮತ್ತು ಮದ್ಯವನ್ನು ಕೊಟ್ಟು ಪ್ರಜ್ಞೆ ತಪ್ಪಿಸಿ ನಂತರ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದನು. ಅಲ್ಲದೇ ಈ ಹೇಯ ಕೃತ್ಯಕ್ಕೆ ತಾಯಿ ಕೂಡ ಸಹಕರಿಸಿದ್ದಾಳೆ ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಕಾಲೇಜು ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಏನಿದು ಪ್ರಕರಣ?
ಸಂತ್ರಸ್ತೆ ತಾಯಿ ಹಲವು ವರ್ಷಗಳ ಹಿಂದೆ ಪತಿಯಿಂದ ವಿಚ್ಛೇದನ ಪಡೆದಿದ್ದಳು. ನಂತರ ಆರೋಪಿ ಅಲೆಗ್ಸಾಂಡರ್ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದಾಳೆ. ಆರೋಪಿ ನಿರ್ಮಾಣ ಕಂಪನಿಯ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದನು. ಸಂತ್ರಸ್ತೆ ತಾಯಿ ಮತ್ತು ಆರೋಪಿ ತಂದೆಯ ಜೊತೆ ಅರಕೆರೆಯಲ್ಲಿ ಬಾಡಿಯ ಮನೆಯಲ್ಲಿ ವಾಸ ಮಾಡುತ್ತಿದ್ದು, ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ದೂರಿನಲ್ಲಿ ಏನಿದೆ?
“ತಾಯಿ ನನಗೆ ಆಹಾರ ಪದಾರ್ಥದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಡುತ್ತಿದ್ದರು. ಅದನ್ನು ತಿಂದು ನನಗೆ ಪ್ರಜ್ಞೆ ತಪ್ಪುತ್ತಿತ್ತು. ಆಗ ಮಲತಂದೆ ನನ್ನ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಒಂದು ವರ್ಷದ ಹಿಂದೆ ಮಲತಂದೆ ಕೆಲಸದ ನಿಮಿತ್ತ ನನ್ನನ್ನು ಹೈದರಾಬಾದ್‍ಗೆ ಕರೆದುಕೊಂಡು ಹೋಗಿದ್ದನು. ಈ ವೇಳೆ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದೆವು. ಆಗ ನನಗೆ ಬಲವಂತವಾಗಿ ಮದ್ಯ ಕುಡಿಸಿದ್ದನು. ನಾನು ಪ್ರಜ್ಞೆ ತಪ್ಪಿದ ನಂತರ ಅತ್ಯಾಚಾರ ಎಸಗಿದ್ದಾನೆ. ಬೆಳಗ್ಗೆ ಎಚ್ಚರಗೊಂಡಾಗ ಬಟ್ಟೆ ಇರುತ್ತಿರಲಿಲ್ಲ” ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಅಷ್ಟೇ ಅಲ್ಲದೇ ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿ ಮಾಡೆಲಿಂಗ್ ಮಾಡು, ನಗ್ನ ಫೋಟೋಗಳ್ನು ತೆಗೆಸಿಕೊಂಡು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಒತ್ತಾಯಿಸಿದ್ದಾನೆ. ಜೊತೆಗೆ ಪ್ರತಿದಿನ ಮಾದಕ ವಸ್ತು ಮತ್ತು ಮದ್ಯ ಸೇವನೆ ಮಾಡುವಂತೆ ಮಲತಂದೆ ಪೀಡಿಸಿದ್ದಾನೆ. ಅನೇಕ ಬಾರಿ ನನಗೆ ತಿಳಿಯದಂತೆ ಆಹಾರ ಪದಾರ್ಥದಲ್ಲಿ ಮಾದಕ ವಸ್ತು ಬೆರೆಸಿ ನೀಡಿದ್ದಾನೆ. ಈ ಕೃತ್ಯಕ್ಕೆ ತಾಯಿಯೂ ಸಹಕರಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಇದೇ ರೀತಿ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. ಒಂದು ವೇಳೆ ನಾನು ಪ್ರಶ್ನೆ ಮಾಡಿದರೆ, ನನ್ನ ಮೊಬೈಲ್ ಫೋನ್ ಕಿತ್ತುಕೊಂಡು ಕಾಲೇಜಿಗೆ ಹೋಗಬೇಡ ಎನ್ನುತ್ತಿದ್ದರು. ಬೇರೆ ಯಾರಿಗಾದರೂ ಈ ಬಗ್ಗೆ ಹೇಳಿದರೆ ನಾನು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದನು. ಕೊನೆಗೆ ಇದರಿಂದ ನೊಂದು ನಾನು ಮನೆ ಬಿಟ್ಟು ಹೋಗಿದ್ದೆ. ಹೀಗಾಗಿ ನನಗೆ ಜೀವ ಭಯವಿದೆ. ನನಗೆ ರಕ್ಷಣೆ ಕೊಡಿ ಎಂದು ಸಂತ್ರಸ್ತೆ ಪೋಸರಿಗೆ ಮನವಿ ಮಾಡಿಕೊಂಡಿದ್ದಾಳೆ.

ಅಲ್ಲದೇ ನನ್ನ ಮೇಲೆ ಅತ್ಯಾಚಾರ ನಡೆಸಿ, ಮಾನಸಿಕ, ದೈಹಿಕವಾಗಿ ಕಿರುಕುಳ ನೀಡಿರುವ ಆರೋಪಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ. ಸದ್ಯಕ್ಕೆ ಹುಳಿಮಾವು ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ಆರೋಪಿ ಮಲತಂದೆಗಾಗಿ ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *