ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮನಮಿಡಿಯುವ ದೃಶ್ಯಗಳು- ಮಗನನ್ನು ನೋಡಿ ಕಣ್ಣೀರಿಟ್ಟ ತಾಯಿ

Public TV
2 Min Read

ಬೆಂಗಳೂರು: ಲಾಕ್‍ಡೌನ್ ಕಾರಣದಿಂದ ಸ್ಥಗಿತಗೊಂಡಿದ್ದ ದೇಶೀಯ ವಿಮಾನ ಹಾರಾಟ ಆರಂಭವಾಗಿದೆ. ಇತ್ತ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕೇಂದ್ರ ಸರ್ಕಾರ ಮರಳಿ ಕರೆತರುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣ ಹಲವು ಮನಮಿಡಿಯುವ ದೃಶ್ಯಗಳಿಗೆ ಸಾಕ್ಷಿಯಾಗಿದೆ.

ಮೆಡಿಕಲ್ ಶಿಕ್ಷಣ ಪಡೆಯಲು ಫಿಲಿಫೈನ್ಸ್ ತೆರಳಿದ್ದ ಮಗ 6 ತಿಂಗಳ ಬಳಿಕ ಇಂದು ಮತ್ತೆ ವಾಪಸ್ ಆಗಿದ್ದ. ಬಹು ಸಮಯದ ಬಳಿಕ ಮಗನನ್ನು ನೋಡಿದ್ದ ಯುವಕನ ತಾಯಿಯ ಕಣ್ಣಲ್ಲಿ ಆನಂದ ಬಾಷ್ಪ ಮೂಡಿತ್ತು. ಇತ್ತ ಮಗ ಆರೋಗ್ಯವಾಗಿ ಹಿಂದಿರುಗಿದರೇ ತಿರುಪತಿಗೆ ಭೇಟಿ ನೀಡಿ ಕೂದಲು ನೀಡುವುದಾಗಿ ಕುಟುಂಬಸ್ಥರು ಹರಕೆ ಹೊತ್ತಿದ್ದರು. ಮಗ ಹಿಂದಿರುಗಿದ್ದನ್ನು ನೋಡಿದರೂ ತಾಯಿ ಆತನೊಂದಿಗೆ ಹತ್ತಿರದಿಂದ ಮಾತನಾಡಿಸಲು ಸಾಧ್ಯವಾಗಿರಲಿಲ್ಲ. ದೂರದಿಂದಲೇ ಮಗನನ್ನು ಕಣ್ತುಂಬಿಕೊಂಡ ತಾಯಿ ಮಗನನ್ನು ಕ್ವಾರಂಟೈನ್‍ಗೆ ಕಳುಹಿಸಿಕೊಟ್ಟರು.

ಜೈಪುರದಿಂದ ಆಗಿಸಿದ್ದ ಪತ್ನಿ ಹಾಗೂ ಮಗನನ್ನು ನೋಡಿ ವ್ಯಕ್ತಿಯೊಬ್ಬರು ಖುಷಿ ಹಂಚಿಕೊಂಡರು. ಕಳೆದ 3 ತಿಂಗಳಿನಿಂದ ಇಬ್ಬರು ಜೈಪುರದಲ್ಲಿ ಸಿಲುಕಿದ್ದರು. ಇಂದು ಪತ್ನಿ, ಮಗಳು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದಂತೆ ಸಂತಸಗೊಂಡಿದ್ದ ವ್ಯಕ್ತಿ ಮಗಳಿಗೆ ಸಿಹಿ ತಿಂಡಿ ನೀಡಿ ಹರ್ಷ ವ್ಯಕ್ತಪಡಿಸಿದ್ದರು. ಸದ್ಯ ಬಾಲಕ ಜೊತೆಗಿರುವ ಕಾರಣ ಇಬ್ಬರಿಗೂ ಗಂಟಲು ದ್ರವ ಪರೀಕ್ಷೆ ನಡೆಸಿ ವರದಿ ನೆಗೆಟಿವ್ ಬಂದರೇ ಹೋಂ ಕ್ವಾರಂಟೈನ್ ಮಾಡಲು ಅವಕಾಶ ನೀಡಲಾಗಿದೆ.

ಮುಂಬೈಯಿಂದ 3 ವರ್ಷಗಳ ಬಳಿಕ ಆಗಮಿಸಿದ್ದ ಮಗಳನ್ನು ಕಂಡ ಅಪ್ಪ ಸಂತಸಗೊಂಡಿದ್ದರು. ಫೋನ್ ಮೂಲಕ ಮಗಳನ್ನು ದೂರದಿಂದಲೇ ಮಾತನಾಡಿಸಿ ಬಳಿಕ ಮಗಳನ್ನು ಕ್ವಾರಂಟೈನ್‍ಗೆ ಕಳುಹಿಸಿಕೊಟ್ಟರು.

ವಿವಿಧ ಪ್ರದೇಶಗಳಿಂದ ಪ್ರಯಾಣಿಕರು ಆಗಮಿಸುತ್ತಿರುವ ಕುರಿತು ಮಾಹಿತಿ ನೀಡಿದ ಡಿಸಿಪಿ ಭೀಮಾಶಂಕರ ಅವರು, ಈಗಾಗಲೇ 2 ಅಂತಾರಾಷ್ಟ್ರೀಯ ವಿಮಾನಗಳು ಈಗಾಗಲೇ ಬಂದಿವೆ. ವಿದೇಶದಿಂದ ಆಗಮಿಸಿದ್ದ ಒಟ್ಟು 177 ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಉಳಿದಂತೆ 18 ದೇಶೀಯ ವಿಮಾನಗಳು ಆಗಮಿಸಿದ್ದು, ಇವುಗಳಲ್ಲಿ ಸುಮಾರು 750 ಪ್ರಯಾಣಿಕರು ಆಗಮಿಸಿದ್ದಾರೆ. ಎಲ್ಲರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡುತ್ತಿರುವುದಾಗಿ ಹಾಗೂ ಕೆಲವರು ಇಲ್ಲಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದರು. ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸದ್ಯ 80 ದೇಶೀಯ ವಿಮಾನಗಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲು ಬುಕ್ ಆಗಿವೆ. ಆದರೆ ಕ್ವಾರಂಟೈನ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಪ್ರಯಾಣಿಕರು ವಿಮಾನ ಟಿಕೆಟ್ ಕ್ಯಾನ್ಸಲ್ ಮಾಡುತ್ತಿದ್ದಾರೆ. ನಿನ್ನೆಯೂ ಕೂಡ ಅನೇಕ ವಿಮಾನಗಳು ಕ್ಯಾನ್ಸಲ್ ಆಗಿವೆ. ಹೀಗಾಗಿ ಎಷ್ಟು ಜನ ಆಗಮಿಸುತ್ತಾರೆ ಎಂಬ ಮಾಹಿತಿಯನ್ನು ಸಂಗ್ರಹ ಮಾಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ ದೆಹಲಿಯಿಂದ ಬರುವ ಪ್ರಯಾಣಿಕರನ್ನು 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್. ಈ ಆರು ರಾಜ್ಯಗಳನ್ನ ಹೊರತುಪಡಿಸಿ ಬೇರೆ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ 14 ದಿನ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *