ಬೆಂಗಳೂರು ದಕ್ಷಿಣ ವಲಯದಲ್ಲಿ ಸೋಂಕು ಕೈ ಮೀರಿ ಹೆಚ್ಚಾಗುತ್ತಿದೆ: ಸುಧಾಕರ್

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಸರ್ಕಾರ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕಿದೆ. ಆಗ ಮಾತ್ರ ಸೋಂಕಿನ ಸಂಖ್ಯೆ ಇಳಿಮುಖವಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಡಾ.ಕೆ ಸುಧಾಕರ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರು ದಕ್ಷಿಣ ವಲಯದಲ್ಲಿ ಸೋಂಕು ಹೆಚ್ಚಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಅಲ್ಲಿನ ಅಧಿಕಾರಿಗಳು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಸೋಂಕು ಕೈ ಮೀರಿ ಹೆಚ್ಚಾಗುತ್ತಿದೆ. ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮಕೈಗೊಂಡರೂ ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಿ ಮಾಸ್ಕ್ ಧರಿಸುವುದು ಸೇರಿದಂತೆ ಸೂಚನೆಗಳನ್ನು ಪಾಲಿಸಿದರೆ ಮಾತ್ರ ಇದಕ್ಕೆ ತಡೆಹಾಕಬಹುದು. ಕೇವಲ ಸರ್ಕಾರದಿಂದ ಮಾತ್ರ ಇದು ಆಗೋಲ್ಲ, ಜನರ ಸಹಭಾಗಿತ್ವ ಇರಬೇಕು ಎಂದರು.

ಸೆಪ್ಟೆಂಬರ್ ನಲ್ಲಿ ಹೆಚ್ಚು ಸೋಂಕು ಸಾಧ್ಯತೆ ವಿಚಾರವಾಗಿ ಮಾತನಾಡಿದ ಸುಧಾಕರ್ ಅವರು, ರಾಜ್ಯದಲ್ಲಿ ಸದ್ಯ ಶೇ.70 ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಶೇ.30 ರಷ್ಟು ಸಕ್ರಿಯ ಪ್ರಕರಣಗಳಿದ್ದು, ಸೋಂಕು ಬಗ್ಗೆ ಆತಂಕ ಅಗತ್ಯ ಇಲ್ಲ. ಸರ್ಕಾರದ ಮಾರ್ಗಸೂಚಿಯನ್ನ ಜನ ಅನುಸರಿಸಿದರೆ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತದೆ. ಮೇ ತಿಂಗಳಿನಲ್ಲಿ ಸಾವಿನ ಪ್ರಮಾಣ ಶೇ.3.5 ಇತ್ತು. ಆದರೆ ಈಗ ಸಾವಿನ ಪ್ರಮಾಣ ಶೇ.1.5 ಇದೆ. ಇದು ಈ ಸರ್ಕಾರದ ಸಾಧನೆಯಾಗಿದೆ ಎಂದರು.

ಸೆಪ್ಟೆಂಬರ್ ನಲ್ಲಿ ಮತ್ತಷ್ಟು ಕೊರೊನಾ ರಿಲೀಫ್ ಸಿಗುವ ಕುರಿತು ಮಾಹಿತಿ ನೀಡಿದ ಸಚಿವರು, ಇದುವರೆಗೂ ಕೇಂದ್ರದ ಮಾರ್ಗಸೂಚಿಗಳನ್ನೇ ಎಲ್ಲಾ ರಾಜ್ಯಗಳು ಅನುಸರಿಸಿಕೊಂಡು ಬಂದಿವೆ. ಈ ಬಾರಿಯೂ ಕೇಂದ್ರವೇ ಮಾರ್ಗಸೂಚಿಗಳನ್ನು ನೀಡುತ್ತದೆ. ಈ ತಿಂಗಳಾಂತ್ಯಕ್ಕೆ ಪ್ರಧಾನಿಯವರು ಸಭೆ ಸೇರಿಸಿ ಸೂಕ್ತ ಮಾರ್ಗಸೂಚಿ ನೀಡುತ್ತಾರೆ. ಅದನ್ನೇ ಪಾಲಿಸುತ್ತೇವೆ. ನಮ್ಮ ಮೆಟ್ರೋ ಆರಂಭವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಾಡುವ ಕುರಿತು ವಿನಯ್ ಗುರೂಜಿ ಅವರು ಸಿಎಂ ಭೇಟಿ ಮಾಡಿದ್ದು, ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಒಳ್ಳೆಯ ಆಲೋಚನೆ. ಕಾಯ್ದೆ ಜಾರಿ ಬಗ್ಗೆ ನಮ್ಮ ಸರ್ಕಾರ, ನಮ್ಮ ಪಕ್ಷ ಪೂರಕವಾಗಿಯೇ ಇದೆ. ಮುಖ್ಯಮಂತ್ರಿಗಳು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಈ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *