ಬೆಂಗಳೂರು ಗಲಭೆ – ಟಿಪ್ಪು ಆರ್ಮಿ ಸಂಘಟನೆಯ ಮುಖಂಡ ಅರೆಸ್ಟ್‌

Public TV
1 Min Read

ಬೆಂಗಳೂರು: ಗಲಭೆಯಲ್ಲಿ ಎಸ್‍ಡಿಪಿಐ ಜೊತೆಗೆ ಮತ್ತೊಂದು ಸಂಘಟನೆ ಕೂಡ ಸಾಥ್ ನೀಡಿರುವ ವಿಚಾರ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಗಲಭೆಯ ಮಾಸ್ಟರ್ ಮೈಂಡ್ ಎನ್ನಲಾದ ಟಿಪ್ಪು ಆರ್ಮಿ ಸಂಘಟನೆಯ ಮುಖಂಡ ಫೈರೋಜ್ ಖಾನ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ನೇರವಾಗಿ ಎಲ್ಲೂ ಗಲಭೆಯಲ್ಲಿ ಕಾಣಿಸಿಕೊಳ್ಳದ ಆರ್‌ಟಿ ನಗರದದ ನಿವಾಸಿ ಫೈರೋಜ್, ತೆರೆ ಹಿಂದಿದ್ದು ಮುಜಾಮಿಲ್ ಪಾಷಾ ಮೂಲಕವಾಗಿ ರಕ್ತದೋಕುಳಿಗೆ ಸ್ಕೆಚ್ ಹಾಕಿಕೊಟ್ಟಿದ್ದ ಎಂದು ತಿಳಿದುಬಂದಿದೆ.

ಗಲಭೆ ನಡೆದ ದಿನ ಅಂದರೆ ಮಂಗಳವಾರ ಸಂಜೆ ಆರರಿಂದಲೇ ಫೈರೋಜ್ ಎಲ್ಲರಿಗೂ ಮೆಸೇಜ್ ಶೇರ್ ಮಾಡಿದ್ದ. ಯಾರ್ಯಾರು ಎಲ್ಲಿಗೆ ಹೋಗಿ ಏನೇನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದ. ಅಲ್ಲದೇ ವಾಟ್ಸಪ್ ಸಂದೇಶಗಳ ಮೂಲಕ ಗಲಾಟೆ ಮಾಡಬೇಕೆಂದು ಕೆಲವೊಂದು ಮೌಲ್ವಿಗಳಿಗೆ ಹೇಳಿಕೊಟ್ಟಿದ್ದ. ತಾಂತ್ರಿಕ ಸಾಕ್ಷ್ಯದ ಆಧಾರದ ಮೇಲೆ ಫೈರೋಜ್‍ನನ್ನು ಬಂಧಿಸಿರುವ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದಾರೆ.

ಮೊಬೈಲ್ ವಶಕ್ಕೆ ತೆಗೆದುಕೊಂಡಿದ್ದಾರೆ. ಗಲಭೆ ಸಂಬಂಧ ಇದುವರೆಗೂ 151 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಮುಖ ಆರೋಪಿ ಮುಜಾಮಿಲ್‍ನನ್ನು ಐದು ದಿನ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಕೋವಿಡ್ ಪರೀಕ್ಷೆಗೆ ಒಳಪಟ್ಟ 40 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮೂವರಿಗೆ ಕೊರೋನಾ ಬಂದಿದೆ. ಉಳಿದ ಆರೋಪಿಗಳ ಟೆಸ್ಟ್ ವರದಿ ಬಂದ ಬಳಿಕ ಕೋರ್ಟ್‍ಗೆ ಹಾಜರುಪಡಿಸಲಾಗುತ್ತದೆ. ತನಿಖೆ ಹಂತದಲ್ಲಿ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಾವೇ ಮಾಹಿತಿ ನೀಡುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *