ಬೆಂಗಳೂರಿನ ನೀರು ಕಾರಣ – ರಾಹುಲ್ ಅದ್ಭುತ ಆಟದ ಸೀಕ್ರೆಟ್ ಬಿಚ್ಚಿಟ್ಟ ಗವಾಸ್ಕರ್

Public TV
2 Min Read

– ಬೆಂಗ್ಳೂರು ವಾಟರ್ ಹಲವಾರು ಉತ್ತಮ ಕ್ರೀಡಾಪಟುಗಳನ್ನು ಹುಟ್ಟಿಹಾಕಿದೆ

ಅಬುಧಾಬಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕನ್ನಡಿಗ ಕೆಎಲ್ ರಾಹುಲ್ ಅವರ ಅದ್ಭುತ ಆಟಕ್ಕೆ ಬೆಂಗಳೂರಿನ ನೀರು ಕಾರಣ ಎಂದು ಹೇಳುವ ಮೂಲಕ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅವರು ಸಿಲಿಕಾನ್ ಸಿಟಿಯನ್ನು ಹಾಡಿಹೊಗಳಿದ್ದಾರೆ.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕನ್ನಡಿಗರು ಬಹಳ ಚೆನ್ನಾಗಿ ಆಡುತ್ತಿದ್ದಾರೆ. ಅದರಲ್ಲೂ ಕೆಎಲ್ ರಾಹುಲ್ ಅವರು ಭರ್ಜರಿ ಫಾರ್ಮ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಐಪಿಎಲ್‍ನಲ್ಲಿ ಅವರು ಮೊದಲ ಬಾರಿಗೆ ಪಂಜಾಬ್ ತಂಡವನ್ನು ನಾಯಕನಾಗಿ ಮುನ್ನಡೆಸುವುದರ ಜೊತೆಗೆ, ಐಪಿಎಲ್-2020ಯಲ್ಲಿ ಅತೀ ಹೆಚ್ಚು ರನ್ ಬಾರಿಸಿ ಆರೆಂಜ್ ಕ್ಯಾಪ್ ತೊಟ್ಟು ಆಡುತ್ತಿದ್ದಾರೆ.

ಕೆಎಲ್ ರಾಹುಲ್ ವಿಚಾರವಾಗಿ ಕಮೆಂಟರಿ ವೇಳೆ ಮಾತನಾಡಿರುವ ಸುನಿಲ್ ಗವಾಸ್ಕರ್ ಅವರು, ಅದು ಬೆಂಗಳೂರು ನೀರು. ಬೆಂಗಳೂರು ಹಲವಾರು ವಿಶ್ವ ಪ್ರಸಿದ್ಧ ಕ್ರೀಡಾಪಟುಗಳನ್ನು ನೀಡಿದೆ. ಕೇವಲ ಕ್ರಿಕೆಟ್ ಮಾತ್ರವಲ್ಲ, ಎಲ್ಲ ಕ್ರೀಡೆಯಲ್ಲು ಉತ್ತಮ ಆಟಗಾರರಿದ್ದಾರೆ. ಬೆಂಗಳೂರಿನ ಪ್ರಕಾಶ್ ಪಡುಕೋಣೆ ನನ್ನ ಮೆಚ್ಚಿನ ಕ್ರೀಡಾಪಟು. ಗುಂಡಪ್ಪ ವಿಶ್ವನಾಥ್, ಎರಪಲ್ಲಿ ಪ್ರಸನ್ನ, ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ರೀತಿಯ ವಿಶ್ವಮಟ್ಟದ ಕ್ರೀಡಾಪಟುಗಳನ್ನು ಬೆಂಗಳೂರು ಹುಟ್ಟುಹಾಕಿದೆ ಎಂದು ಬೆಂಗಳೂರನ್ನು ಪ್ರಶಂಸಿಸಿದ್ದಾರೆ.

ಇದೇ ವೇಳೆ ರಾಹುಲ್ ಬಗ್ಗೆ ಮಾತನಾಡಿ, ರಾಹುಲ್ ಉತ್ತಮವಾಗಿ ಆಡಿಕೊಂಡು ಬಂದಿದ್ದಾರೆ. ಇದಕ್ಕೆ ಬೆಂಗಳೂರಿನ ನೀರೇ ಕಾರಣವಿರಬಹುದು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಕೆಎಲ್ ರಾಹುಲ್ ಅವರು ಈಗಾಗಲೇ 10 ಪಂದ್ಯಗಳಲ್ಲಿ ಐದು ಅರ್ಧಶತಕ ಮತ್ತು ಒಂದು ಶತಕದ ನೆರವಿನಿಂದ 540 ರನ್ ಗಳಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ.

ರಾಹುಲ್ ದಾಖಲೆ
ಸತತ ಮೂರು ಐಪಿಎಲ್‍ನಲ್ಲಿ 500ಕ್ಕೂ ಅಧಿಕ ರನ್‍ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‍ಮನ್ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರವಾಗಿದ್ದಾರೆ. 2019ರಲ್ಲಿ ರಾಹುಲ್ 14 ಪಂದ್ಯಗಳಿಂದ 593 ರನ್ ಹೊಡೆಯುವ ಮೂಲಕ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. 2018ರಲ್ಲಿ ರಾಹುಲ್ 14 ಪಂದ್ಯಗಳನ್ನು ಆಡುವ ಮೂಲಕ 659 ರನ್ ಹೊಡೆದು ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದರು.

ಸದ್ಯ ಐಪಿಎಲ್‍ನಲ್ಲಿ ರಾಹುಲ್ ನಾಯಕತ್ವದ ಪಂಜಾಬ್ ತಂಡ 10 ಪಂದ್ಯಗಳನ್ನು ಆಡಿ ಅದರಲ್ಲಿ ನಾಲ್ಕರಲ್ಲಿ ಗೆದ್ದು, ಆರರಲ್ಲಿ ಸೋತು ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಪ್ಲೇ ಆಫ್‍ಗೆ ಎಂಟ್ರಿ ಕೊಡಲು ಮುಂದಿನ ನಾಲ್ಕು ಪಂದ್ಯವನ್ನು ಒಳ್ಳೆಯ ರನ್‍ರೇಟಿನಲ್ಲಿ ಪಂಜಾಬ್ ಗೆಲ್ಲಬೇಕಿದೆ. ಆದರೆ ನಾಯಕ ಕೆಎಲ್ ರಾಹುಲ್ ಉತ್ತಮ ಫಾರ್ಮ್‍ನಲ್ಲಿ ಇದ್ದಾರೆ. ಜೊತೆಗೆ ಕ್ರಿಸ್ ಗೇಲ್ ಕೂಡ ವಾಪಸ್ ಆಗಿದ್ದಾರೆ. ಇದರ ಜೊತೆಗೆ ಕಳೆದ ಮೂರು ಪಂದ್ಯಗಳಲ್ಲಿ ಪಂಜಾಬ್ ಭರ್ಜರಿ ಗೆಲುವು ಸಾಧಿಸಿದೆ.

Share This Article
Leave a Comment

Leave a Reply

Your email address will not be published. Required fields are marked *