ಬೆಂಗಳೂರಿನಿಂದ ಬಂದವರಿಗೆ ಹಳ್ಳಿಗೆ ನೋ ಎಂಟ್ರಿ: ಶಾಸಕರ ಊರೇ ಸ್ವಯಂ ಸೀಲ್‍ಡೌನ್

Public TV
1 Min Read

ಚಾಮರಾಜನಗರ: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಳದಿಂದ ಜನ ಭಯಭೀತರಾಗಿದ್ದು, ಸ್ವಂತ ಊರುಗಳಿಗೆ ಗುಳೆ ಹೋಗುತ್ತಿದ್ದಾರೆ. ಆದರೆ ಬೆಂಗಳೂರು ಸೇರಿದಂತೆ ವಿವಿಧ ಊರುಗಳಿಂದ ಬರುವವರಿಗೆ ಚಾಮರಾಜನಗರ ಜಿಲ್ಲೆಯ ಹತ್ತಾರು ಹಳ್ಳಿಗಳಲ್ಲಿ ಪ್ರವೇಶ ನಿರ್ಬಂಧಿಸಿ ಗ್ರಾಮಸ್ಥರೇ ಸ್ವಯಂ ನಿರ್ಧಾರ ಕೈಗೊಂಡಿದ್ದಾರೆ.

ಒಂದು ವೇಳೆ ಚಾಮರಾಜನಗರ ಜಿಲ್ಲೆಯ ತಮ್ಮ ಊರಿಗೆ ಬರಲೇ ಬೇಕೆಂದರೆ ಗ್ರಾಮಸ್ಥರಿಗೆ ಮೊದಲೇ ತಿಳಿಸಬೇಕು, ಕೊರೊನಾ ಪರೀಕ್ಷಾ ವರದಿ ತರಬೇಕು. ಅಂದರೆ ಮಾತ್ರ ಗ್ರಾಮದೊಳಗೆ ಬಿಟ್ಟುಕೊಳ್ಳುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಈ ನಿಯಮಗಳನ್ನು ಉಲ್ಲಂಘಿಸಿ ಗ್ರಾಮದೊಳಕ್ಕೆ ಬಂದವರಿಗೆ 5 ರಿಂದ 10 ಸಾವಿರ ರೂ. ದಂಡ ವಿಧಿಸಲಾಗುವುದು, ಅಲ್ಲದೆ ಅಂತಹವರ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಕ್ವಾರಂಟೈನ್‍ಗೆ ಕಳುಹಿಸಲು ತೀರ್ಮಾನಿಸಿದ್ದಾರೆ.

ಚಾಮರಾಜನಗರ ತಾಲೂಕಿನ ಬಂಡಿಗೆರೆ, ಬ್ಯಾಡಮೂಡ್ಲು, ನಲ್ಲೂರು ಮೋಳೆ. ಕೊಳ್ಳೇಗಾಲ ತಾಲೂಕಿನ ಮುಳ್ಳೂರು, ಬಸ್ತೀಪುರ, ಕುಣಗಳ್ಳಿ, ಹಂಪಾಪುರ, ಹರಳೇ ದಾಸನಪುರ. ಹನೂರು ತಾಲೂಕಿನ ಲೊಕ್ಕನಹಳ್ಳಿ, ದೊಡ್ಡಿಂದುವಾಡಿ. ಯಳಂದೂರು ತಾಲೂಕಿನ ಉಪ್ಪಿನಮೋಳೆ, ವೈಕೆ ಮೋಳೆ, ಕೃಷ್ಣಾಪುರ ಶಿವಕಳ್ಳಿ, ಅವಲ್ ಕಂದಹಳ್ಳಿ ಹೀಗೆ ಹತ್ತಾರು ಗ್ರಾಮಗಳಲ್ಲಿ ನಿಯಮಗಳನ್ನು ರೂಪಿಸಲಾಗಿದೆ.

ಕೊರೊನಾ ಎಲ್ಲಿ ತಮ್ಮ ಗ್ರಾಮಕ್ಕೆ ವಕ್ಕರಿಸಿಬಿಡುತ್ತೋ ಎಂಬ ಭಯದಿಂದ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ. ಕೆಲವೆಡೆ ಪ್ರವೇಶ ದ್ವಾರದಲ್ಲೇ ಹೊರಗಿನವರಿಗೆ ಪ್ರವೇಶ ಇಲ್ಲ ಎಂದು ನಾಮಫಲಕಗಳನ್ನು ಹಾಕಲಾಗಿದೆ. ಇನ್ನೂ ಕೆಲವೆಡೆ ಗ್ರಾಮಕ್ಕೆ ಪ್ರವೇಶ ಕಲ್ಪಿಸುವ ರಸ್ತೆಗೆ ಬೇಲಿ ಹಾಕಲಾಗಿದೆ. ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಸ್ವಗ್ರಾಮ ಉಪ್ಪಿನಮೋಳೆ ಗ್ರಾಮದಲ್ಲೂ ಇದೇ ನಿರ್ಧಾರ ಕೈಗೊಂಡಿರುವುದು ಗಮನಾರ್ಹವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *