ಬೆಂಗಳೂರಿನಲ್ಲಿ ತಪ್ಪಿದ ಭಾರೀ ಅನಾಹುತ – ಕೊಂಚ ಯಾಮಾರಿದ್ರೂ ರಣ ಭೀಕರ ದುರಂತ!

Public TV
1 Min Read

– ಹಾರಿಹೋಗ್ತಿತ್ತು  ಸೋಂಕಿತರ ಜೀವ
– ರಾತ್ರೋರಾತ್ರಿ ಕಾರ್ಯಾಚರಣೆ

ಬೆಂಗಳೂರು: ಆಕ್ಸಿಜನ್ ಅಭಾವದಿಂದ ರಾತ್ರಿ ಕೆಸಿಜನರಲ್ ಆಸ್ಪತ್ರೆಯಲ್ಲಿ ನಡೆಯಬಹುದಾಗಿದ್ದ ಭಾರೀ ಅನಾಹುತ ಡಿಸಿಎಂ ಅಶ್ವತ್ಥ ನಾರಾಯಣ ಮತ್ತು ಪೊಲೀಸರ ಪ್ರಯತ್ನದಿಂದ ತಪ್ಪಿದೆ.

ಒಟ್ಟು 150 ಮಂದಿ ಆಕ್ಸಿಜನ್ ಬೆಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಕ್ಸಿಜನ್ ಟ್ಯಾಂಕ್ ಖಾಲಿಯಾಗುತ್ತಿದ್ದರೂ ಬರಬೇಕಾಗಿದ್ದ ಟ್ಯಾಂಕರ್ ಬಾರದೇ ಇದ್ದ ಕಾರಣ ವೈದ್ಯಧಿಕಾರಿಗಳಿಗೆ ಆತಂಕ ಎದುರಾಗಿತ್ತು. ಮಧ್ಯರಾತ್ರಿ ಡಿಸಿಎಂ ಅಶ್ವತ್ಥ ನಾರಾಯಣ ಮಧ್ಯಪ್ರವೇಶದಿಂದ ಬಿಕ್ಕಟ್ಟು ಬಗೆ ಹರಿದಿದ್ದು ವೈದ್ಯಾಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಮಧ್ಯರಾತ್ರಿ 3 ಗಂಟೆಗಳ ಕಾಲ ವೈದ್ಯಾಧಿಕಾರಿಗಳು ಮತ್ತು ತಾಂತ್ರಿಕ ತಂಡ ಕಾರ್ಯಾಚರಣೆ ಆಕ್ಸಿಜನ್ ಮೇಲೆ ನಿಗಾ ಇಟ್ಟು ಸಮಸ್ಯೆಯನ್ನು ಪರಿಹರಿಸಿದ್ದಾರೆ.

ನಡೆದಿದ್ದು ಏನು?
ಬಳ್ಳಾರಿಯಿಂದ ಹೊರಟಿದ್ದ ಆಕ್ಸಿಜನ್ ಟ್ಯಾಂಕರ್ ರಾತ್ರಿ 11ಕ್ಕೆ ಬರಬೇಕಿತ್ತು. ರಾತ್ರಿ 11:30 ಆದರೂ ಟ್ಯಾಂಕರ್ ಬಾರದೇ ಇದ್ದ ವಿಚಾರ ಆಕ್ಸಿಜನ್ ನಿರ್ವಹಣೆ ಹೊಣೆ ಹೊತ್ತಿದ್ದ ವೈದ್ಯಾಧಿಕಾರಿ ಡಾ. ವೆಂಕಟೇಶ್ ಪ್ರಸಾದ್ ಗಮನಕ್ಕೆ ಬಂದಿದೆ.

ಯಾಕೆ ಬಂದಿಲ್ಲ ಎಂದು ವಿಚಾರಿಸಿದಾಗ ಟ್ಯಾಂಕರ್ ಸಕ್ರಾ ಆಸ್ಪತ್ರೆಗೆ ಹೋಗಿರುವ ವಿಚಾರ ಗೊತ್ತಾಗಿದೆ. ತಕ್ಷಣ ಕಾರ್ಯೋನ್ಮುಖರಾದ ವೈದ್ಯರು ಎಮರ್ಜೆನ್ಸಿ ಮತ್ತು ಇತರ ವಾರ್ಡ್‍ಗಳ ಆಕ್ಸಿಜನ್ ಮರುಹಂಚಿಕೆ ಮಾಡಿ ನಿಗಾ ಇಟ್ಟಿದ್ದರು.

ಕೂಡಲೇ ಆಸ್ಪತ್ರೆಯ ವೈದ್ಯರು ನೇರವಾಗಿ ಡಿಸಿಎಂ ಅಶ್ವತ್ಥ ನಾರಾಯಣ ಮತ್ತು ಪೊಲೀಸರ ಮೊರೆ ಹೋಗುತ್ತಾರೆ. ಬೆಳಗಿನ ಜಾವ 5 ಗಂಟೆಯಷ್ಟೊತ್ತಿಗೆ ಆಕ್ಸಿಜನ್ ಪ್ಲಾಂಟ್ ನಿಂದ ಪೊಲೀಸ್ ಎಸ್ಕಾರ್ಟ್‍ನಲ್ಲಿ ಆಸ್ಪತ್ರೆಗೆ ಆಕ್ಸಿಜನ್ ಟ್ಯಾಂಕರ್ ಬರುತ್ತದೆ.

ಕಡಿಮೆ ಹೇಗಾಯ್ತು?
ಬೆಳಗ್ಗೆ ಮತ್ತು ಸಂಜೆ ಎರಡು ಗಂಟೆ ಟ್ಯಾಂಕ್‍ಗೆ ಆಕ್ಸಿಜನ್ ಭರ್ತಿ ಮಾಡಲಾಗುತ್ತದೆ. ಆಕ್ಸಿಜನ್ ನೋಡಿಕೊಳ್ಳುವ ತಂಡಕ್ಕೆ ಸಂಜೆ 6 ಗಂಟೆಗೆ ಟ್ಯಾಂಕ್ ಖಾಲಿಯಾಗುತ್ತಿರುವುದು ಗಮನಕ್ಕೆ ಬಂದಿದೆ. 8 ಟನ್ ಸಾಮರ್ಥ್ಯದ ಟ್ಯಾಂಕ್ ನಲ್ಲಿ ರಾತ್ರಿ 9 ಗಂಟೆಯ ವೇಳೆ ಇದು 3 ಟನ್‍ಗೆ ಕುಸಿದಿರುವುದನ್ನು ನೋಡಿ ಗಾಬರಿಗೊಂಡಿದ್ದಾರೆ. ಕೊನೆಗೆ ಇತರ ವಾರ್ಡ್‍ಗಳಿಗೆ ಮೀಸಲಾಗಿದ್ದ ಆಕ್ಸಿಜನ್ ಬಳಕೆ ಮಾಡಿ ತಾತ್ಕಾಲಿಕವಾಗಿ ಸಮಸ್ಯೆಯನ್ನು ಬಗೆ ಹರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *