ಬಿ.ಎಲ್.ಸಂತೋಷ್ ರಕ್ಷಣಾ ಸಚಿವರೇ, ಸೇನಾ ಮುಖ್ಯಸ್ಥರೇ?- ಸಿದ್ದರಾಮಯ್ಯ

Public TV
1 Min Read

– ಚೀನಾ ಒಳ ನುಸುಳಿಲ್ಲ ಎಂದಾದ್ರೆ, ಹಿಂದೆ ಸರಿದದ್ದು ಎಲ್ಲಿಂದ?
– ‘ಪಿಎಂ ಕೇರ್ಸ್’ ನಿಧಿಯ ಲೆಕ್ಕಕೊಡಿ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೇನು ರಕ್ಷಣಾ ಸಚಿವರೇ, ಇಲ್ಲವೇ ಸೇನಾ ಮುಖ್ಯಸ್ಥರೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಸಾಲು ಸಾಲು ಟ್ವೀಟ್ ಮಾಡಿರುವ ಮಾಜಿ ಸಿಎಂ ಬಿ.ಎಲ್.ಸಂತೋಷ್ ಅವರ ಮುಂದೆ ಕೆಲ ಪ್ರಶ್ನೆಗಳನ್ನಿಟ್ಟಿದ್ದಾರೆ

ಟ್ವೀಟ್ 1: ಚೀನಾ ಸೇನೆ ಎರಡು ಕಿ.ಮೀ.ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಲು ಬಿ.ಎಲ್.ಸಂತೋಷ್ ಅವರೇನು ರಕ್ಷಣಾ ಸಚಿವರೇ, ಇಲ್ಲವೇ ಸೇನಾ ಮುಖ್ಯಸ್ಥರೇ? ಈ ಹೇಳಿಕೆ ನೀಡಬೇಕಾಗಿರುವುದು ಪ್ರಧಾನಿಗಳು ಅವರಿಂದ ಹೇಳಿಕೆ ಕೊಡಿಸಿ. ಚೀನಾ ಒಳ ನುಸುಳಿಲ್ಲ ಎಂದಾದರೆ, ಹಿಂದೆ ಸರಿದದ್ದು ಎಲ್ಲಿಂದ ಎನ್ನುವುದನ್ನೂ ತಿಳಿಸಲಿ.

ಟ್ವೀಟ್ 2: ಕಾಂಗ್ರೆಸ್ ನೀಡಿದ್ದ ಒಂದು ಕೋಟಿ ರೂಪಾಯಿ ಪರಿಹಾರದ ಲೆಕ್ಕವನ್ನು ಬಿ.ಎಲ್.ಸಂತೋಷ್ ಕೇಳಿದ್ದಾರೆ, ಅದನ್ನು ಕೊಡೋಣ. ಮೊದಲು ಪ್ರತಿಯೊಬ್ಬ ಭಾರತೀಯನ ಖಾತೆಗೆ ನರೇಂದ್ರ ಮೋದಿ ಜಮೆ ಮಾಡಿರುವ 15 ಲಕ್ಷ ರೂಪಾಯಿಯ ಲೆಕ್ಕ ಕೊಡಿ, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿರುವ ‘ಪಿಎಂ ಕೇರ್ಸ್’ ನಿಧಿಯ ಲೆಕ್ಕಕೊಡಿ.

ಟ್ವೀಟ್ 3: ಪ್ರತಿಪಕ್ಷ ನಾಯಕರಾಗಿ ಅಧಿಕಾರಿಗಳ ಸಭೆಯನ್ನೇ ನಡೆಸಿಲ್ಲ ಎಂದು ಆರ್‍ಎಸ್‍ಎಸ್ ನಾಯಕ ಬಿ.ಎಲ್.ಸಂತೋಷ್ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ಬಂದರೆ ನಾನು ನಡೆಸಿದ್ದ ಅಧಿಕಾರಿಗಳ ಸಭೆಯ ವಿವರವೂ ಸೇರಿದಂತೆ ನಿಮ್ಮ ಸರ್ಕಾರಕ್ಕೆ ಬುದ್ದಿ ಹೇಳಿ ತಿದ್ದಲು ಏನೆಲ್ಲ ಮಾಡಿದ್ದೇನೆ ಎಂಬ ವಿವರ ನೀಡುವೆ.

ಟ್ವೀಟ್ 4: ಬಿ.ಎಲ್.ಸಂತೋಷ್ ಅವರೇ, ಬಿ.ಎಸ್.ಯಡಿಯೂರಪ್ಪ ಅವರಿಗೆ ನೀವು ನೀಡಿರುವ ಶಹಭಾಸ್ ಗಿರಿ ಮನಸ್ಸಿನಿಂದ ಬಂದದ್ದೋ, ನಾಲಿಗೆಯಿಂದಲೋ? ನೀವು ಆಗಾಗ ಕರ್ನಾಟಕಕ್ಕೆ ಬಂದು ಅವರ ವಿರುದ್ಧ ಸಹದ್ಯೋಗಿಗಳನ್ನು ಎತ್ತಿಕಟ್ಟುವುದನ್ನು ನಿಲ್ಲಿಸಿದರೆ ಅವರು ನಿಮಗೆ ಶಹಭಾಸ್‍ಗಿರಿ ಕೊಡಬಹುದೇನೋ?

Share This Article
Leave a Comment

Leave a Reply

Your email address will not be published. Required fields are marked *