ಬಿಸಿ ಪಾಟೀಲ್ ನಡೆ ವಿಚಾರಕ್ಕೆ ನೆಹರೂ ಸಿಗರೇಟ್ ಪ್ರೇಮದ ವಿಚಾರ ಎಳೆತಂದ ಬಿಜೆಪಿ

Public TV
2 Min Read

ಹಾವೇರಿ: ಸಚಿವ ಬಿ.ಸಿ.ಪಾಟೀಲ್ ಆಸ್ಪತ್ರೆಯ ಸಿಬ್ಬಂದಿಯನ್ನ ಕರೆಸಿ ಪತ್ನಿ ಜೊತೆ ಲಸಿಕೆ ಪಡೆದಿದ್ದಾರೆ ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ, ಕಾಂಗ್ರೆಸ್ ಟ್ವಿಟ್ಟರ್ ವಾರ್ ಪ್ರಾರಂಭವಾಗಿದೆ.

ಬಿ.ಸಿ ಪಾಟೀಲ್ ಅವರು ಮನೆಯಲ್ಲೇ ಕರೆಸಿಕೊಂಡು ಲಸಿಕೆ ಪಡೆಯುತ್ತಿದ್ದಾರೆ, ಆರೋಗ್ಯ ಇಲಾಖೆ ಸಿಬ್ಬಂದಿ ಏನು ನಿಮ್ಮ ಮನೆಯ ಆಳುಗಳೇ? ಅಧಿಕಾರವಿರುವುದು ಜನಸೇವೆ ಮಾಡಲು ಹೊರತು ಜನರಿಂದ ಸೇವೆ ಮಾಡಿಸಿಕೊಳ್ಳಲಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿತ್ತು.

ಬಿ.ಸಿ ಪಾಟೀಲ್ ನಡೆ ಖಂಡಿಸಿ ಕಾಂಗ್ರೆಸ್ ಮಾಡಿದ್ದ ಟ್ವೀಟ್‍ಗೆ ಬಿಜೆಪಿ ಬಿಸಿ ಪಾಟೀಲ್ ವಿಚಾರಕ್ಕೆ ನೆಹರೂರವರ ಸಿಗರೇಟ್ ವಿಚಾರವನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿದೆ.

ನೆಹರೂ ಅವರು ತನ್ನಿಷ್ಟದ 555 ಸಿಗರೇಟ್ ಪ್ಯಾಕ್ ಸಿಗಲಿಲ್ಲವೆಂದು ಭೋಪಾಲ್‍ನಿಂದ ಇಂಧೋರಿಗೆ ವಿಮಾನವನ್ನೇ ಕಳುಹಿಸಿದ್ದು ಯಾವ ರೀತಿಯ ಜನ ಸೇವೆ ಕಾಂಗ್ರೆಸ್? ನೆಹರೂ ಅವರೇನು ಮಹಾರಾಜರಾಗಿದ್ದರೆ ಅಥವಾ ಅವರಿಗೆ ಪ್ರಜಾಪ್ರಭುತ್ವ ಅನ್ವಯಿಸುತ್ತಿರಲಿಲ್ಲವೇ? ಸಿಗರೇಟ್ ಸೇದುವುದಕ್ಕೂ ಲಸಿಕೆ ಪಡೆಯುವುದಕ್ಕೂ ತುಂಬಾ ವ್ಯತ್ಯಾಸವಿದೆ ಎಂದು ಟ್ವೀಟ್ ಮಡುವ ಮೂಲಕವಾಗಿ ಬಿಜೆಪಿ ತಿರುಗೇಟು ನೀಡಿದೆ.

ಮನೆಯಲ್ಲಿ ಲಸಿಕೆ ಪಡೆದ ವಿವಿಐಪಿ ಸಂಸ್ಕøತಿಯ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ಇವತ್ತು ನನ್ನನ್ನು ಭೇಟಿಯಾಗಲು ಹಲವು ಜನರು ಬಂದಿದ್ದರು. ಆಸ್ಪತ್ರೆಗೆ ಹೋದ್ರೆ ಅರ್ಧ ಗಂಟೆ ಕಾಯಬೇಕಾಗಿತ್ತು. ಸ್ವಾಮಿ ಕಾರ್ಯದ ಜೊತೆಗೆ ಸ್ವ ಕಾರ್ಯ ಸಹ ಅಗಬೇಕು. ಆದರೆ ಇದನ್ನು ವಿವಾದ ಅಂತ ಹೇಳಿದ್ರೆ ಏನು ಮಾಡಲು ಸಾಧ್ಯ? ವಿವಾದ ಅಂತ ಮಾಧ್ಯಮದವರು ಹೇಳಿದ್ರೆ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಳ್ಳುತ್ತಿದ್ದೆ ಎಂದು ತಮ್ಮ ನಡೆಯನ್ನ ಸಮರ್ಥಿಸಿಕೊಂಡು ಹಾರಿಕೆಯ ಉತ್ತರ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *