ಬಿಜೆಪಿ ಸೇರುತ್ತಾರಾ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್?

Public TV
2 Min Read

ಶಬ್ಬೀರ್ ನಿಡಗುಂದಿ
ನವದೆಹಲಿ: ಅಣ್ಣಾಮಲೈ ಬಳಿಕ ರಾಜ್ಯದ ಮತ್ತೊಬ್ಬ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಶೀಘ್ರದಲ್ಲಿ ಬಿಜೆಪಿ ಸೇರುವ ತಯಾರಿಯಲ್ಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

ಹೌದು. ಉನ್ನತ ಹುದ್ದೆಯ ಕನಸು ಕಂಡು ಹಗಲಿರುಳು ಓದಿ ದಕ್ಕಿಸಿಕೊಂಡ ಐಎಎಸ್, ಐಪಿಎಸ್ ನಂತಹ ಉನ್ನತ ಸ್ಥಾನಗಳನ್ನು ತೊರೆದು ರಾಜಕೀಯಕ್ಕೆ ಎಂಟ್ರಿ ಕೊಡುವ ಅಧಿಕಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಂತಹದೊಂದು ಟ್ರೆಂಡ್ ಶುರುವಾಗಿದ್ದು ಯುವ ಅಧಿಕಾರಿಗಳು ರಾಜಕೀಯದತ್ತ ಮುಖ ಮಾಡಿದ್ದು ಈಗ ಚನ್ನಣ್ಣನವರ್ ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂಬ ವಿಚಾರವನ್ನು  ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ರಾಜ್ಯದಲ್ಲಿ ಸೂಪರ್ ಕಾಪ್ ಎಂದೇ ಫೇಮಸ್ ಆಗಿರುವ ರವಿ ಡಿ ಚನ್ನಣ್ಣನವರ್‍ರನ್ನ ಬಿಜೆಪಿ ಸೆಳೆಯಲು ಮುಂದಾಗಿದೆಯಂತೆ. ಈ ಬಗ್ಗೆ ಪ್ರಾಥಮಿಕ ಮಾತುಕತೆಗಳು ನಡೆಯುತ್ತಿದ್ದು ರವಿ ಡಿ ಚನ್ನಣ್ಣನವರ್ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

ಕಳೆದ ಮಂಗಳವಾರ ದೆಹಲಿಯಲ್ಲಿ ರವಿ ಚನ್ನಣ್ಣನವರ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿದ್ದಾರೆ. ಕೊಳ್ಳೇಗಾಲದ ಶಾಸಕ ಎನ್ ಮಹೇಶ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸೇರ್ಪಡೆಗೂ ಮುನ್ನ ಮಹೇಶ್ ಸಂತೋಷ್ ಅವರನ್ನು ಭೇಟಿಯಾಗಿದ್ದರು. ಇದೇ ಸಂದರ್ಭದಲ್ಲಿ ರವಿ ಚನ್ನಣ್ಣನವರ್ ಕೂಡಾ ಇದ್ದರು ಎಂದು ಮೂಲಗಳು ಹೇಳಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮ್ಮುಖದಲ್ಲಿ ಸಭೆ ಕೂಡಾ ನಡೆದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಜೋಗ ವೀಕ್ಷಣೆಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ

 

ಅಣ್ಣಾಮಲೈ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ರವಿ ಚನ್ನಣ್ಣನವರ್ ಕೂಡಾ ರಾಜಕೀಯಕ್ಕೆ ಸೇರಲು ಉತ್ಸುಕರಾಗಿದ್ದು ಮುಂದಿನ ದಿನಗಳಲ್ಲಿ ಅಣ್ಣಾಮಲೈ ದಾರಿ ಹಿಡಿಯಬಹುದು ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲೂ ಜನಪ್ರಿಯ ಅಧಿಕಾರಿಗಳಿಗೆ ಆದ್ಯತೆ ನೀಡಲು ಬಿಜೆಪಿ ಪ್ಲ್ಯಾನ್ ಮಾಡಿದ್ದು ವರ್ಚಸ್ಸು ಹೆಚ್ಚಿಸುವ ಲೆಕ್ಕ ಲೆಕ್ಕಚಾರದಲ್ಲಿ ಇದೆಯಂತೆ.

ರಾಜ್ಯದ ಮಟ್ಟಿಗೆ ರವಿ ಡಿ ಚನ್ನಣ್ಣನವರ್ ಪ್ರಖ್ಯಾತಿ ಪಡೆದಿದ್ದು ಸಿಂಗಂ ಎಂದು ಕರೆಸಿಕೊಳ್ಳುತ್ತಿದ್ದಾರೆ. ಗದಗ ಮೂಲದ ಈ ಐಪಿಎಸ್ ಅಧಿಕಾರಿಯನ್ನು ರಾಜ್ಯದ ದೊಡ್ಡ ಪ್ರಮಾಣದ ಯುವ ಸಮುದಾಯದ ಸ್ಫೂರ್ತಿಯಾಗಿಸಿಕೊಂಡಿದ್ದು ಮುಂದಿನ ಚುನಾವಣೆಗೆ ಇವರನ್ನು ಚುನಾವಣಾ ಅಖಾಡಕ್ಕೆ ಇಳಿಸುವ ಲೆಕ್ಕಚಾರದಲ್ಲಿ ಬಿಜೆಪಿ ಇದೆ ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *