ಬಿಜೆಪಿ ಲಸಿಕೆಗೆ ವಿರೋಧ, ಭಾರತ ಸರ್ಕಾರದ ಲಸಿಕೆಗೆ ಸ್ವಾಗತ: ಅಖಿಲೇಶ್ ಯಾದವ್

Public TV
2 Min Read

ಲಕ್ನೋ: ಬಿಜೆಪಿ ಲಸಿಕೆಯಲ್ಲಿ ನನಗೆ ನಂಬಿಕೆ ಇಲ್ಲ. ಹೀಗಾಗಿ ನಾನು ಅನ್ನು ಪಡೆಯಲ್ಲ ಎಂದು ಹೇಳಿಕೆ ನೀಡಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಉತ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇದೀಗ ಕೊರೊನಾ ಲಸಿಕೆ ಅಭಿಯಾನಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಹೌದು. ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಸಂಜೆ ತಮ್ಮ ಭಾಷಣದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೇಂದ್ರದಿಂದಲೇ ಉಚಿತ ಲಸಿಕೆ ನೀಡಲಾಗುತ್ತದೆ ಎಂದು ಹೇಳಿದ್ದರು. ಈ ಬೆನ್ನಲ್ಲೇ ಟ್ವೀಟ್ ಮಾಡಿರುವ ಅಖಿಲೇಶ್, ಕೊರೊನಾ ಲಸಿಕೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಟ್ವೀಟ್‍ನಲ್ಲೇನಿದೆ..?
ಜನರ ಆಕ್ರೋಶಕ್ಕೆ ಮಣಿದು ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡಲು ಮುಂದಾಗಿದೆ. ಜನಸಾಮಾನ್ಯರ ಆಕ್ರೋಶದ ಹಿನ್ನೆಲೆಯಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಲಸಿಕೆಯ ಮೇಲೆ ನಿಯಂತ್ರಣ ಹೊಂದಲು ನಿರ್ಧರಿಸಿದೆ. ನಾವು ಬಿಜೆಪಿಯ ಲಸಿಕೆಗೆ ವಿರೋಧ ವ್ಯಕ್ತಪಡಿಸುತ್ತೇವೆ. ಆದರೆ ಭಾರತ ಸರ್ಕಾರದ ಲಸಿಕೆಯನ್ನು ಸ್ವಾಗತಿಸುತ್ತೇವೆ. ಹಾಗೆಯೇ ನಾವು ಕೂಡ ಲಸಿಕೆ ಪಡೆಯುತ್ತೇವೆ. ಅಲ್ಲದೆ ಜನರನ್ನು ಕುಡ ಲಸಿಕೆ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುವುದಾಗಿ ಅಖಿಲತೇಶ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿ ವ್ಯಾಕ್ಸಿನ್ ಮೇಲೆ ನಂಬಿಕೆ ಇಲ್ಲ ಎಂದಿದ್ದ ಅಖಿಲೇಶ್ ಯಾದವ್ ತಂದೆಯೇ ಲಸಿಕೆ ಪಡೆದ್ರು

ಅಖಿಲೇಶ್ ತಂದೆ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಸೋಮವಾರ ಲಸಿಕೆ ಪಡೆದಿರುವ ಫೋಟೋವನ್ನು ಪಕ್ಷದ ಅಧೀಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಆದರೆ ಅವರು ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೋ ಅಥವಾ ಎರಡನೇ ಡೋಸ್ ಪಡೆದಿದ್ದಾರೋ ಎಂಬುದರ ಕುರಿತು ಮಾಹಿತಿ ಹಂಚಿಕೊಂಡಿಲ್ಲ. 81 ವರ್ಷದ ಯಾದವ್ ಮೇದಂತ ಆಸ್ಪತ್ರೆಯಲ್ಲಿ ಲಸಿಕೆ ಪಡೆದಿದ್ದಾರೆ.

ಮುಲಾಯಂ ಸಿಂಗ್ ಯಾದವ್ ಲಸಿಕೆ ಪಡೆಯುತ್ತಿದ್ದಂತೆ ಉತ್ತರ ಪ್ರದೇಶದ ಬಿಜೆಪಿ ಅಖಿಲೇಶ್ ಯಾದವ್ ಅವರಿಗೆ ಟಾಂಗ್ ನೀಡಿದ್ದು, ಯಾದವ್ ಅವರು ಲಸಿಕೆ ಪಡೆಯುವ ಮೂಲಕ ಉತ್ತಮ ಸಂದೇಶ ರವಾನಿಸಿದ್ದಾರೆ. ಎಸ್‍ಪಿ ಅಧ್ಯಕ್ಷ ಹಾಗೂ ಕಾರ್ಯಕರ್ತರು ಇವರನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದೆ. ಇದನ್ನೂ ಓದಿ: ಜೂನ್ 21ರಿಂದ ಕೇಂದ್ರದಿಂದ ಎಲ್ಲರಿಗೂ ಉಚಿತ ಲಸಿಕೆ: ಪ್ರಧಾನಿ ಮೋದಿ ಘೋಷಣೆ

ಉತ್ತಮ ಸಂದೇಶ, ಎಸ್‍ಪಿ ಅಧ್ಯಕ್ಷ ಹಾಗೂ ಕಾರ್ಯಕರ್ತರು ತಮ್ಮ ಪಕ್ಷ ಸಂಸ್ಥಾಪಕರನ್ನು ಪ್ರೇರಣೆಯಾಗಿ ಪಡೆಯಲಿದ್ದಾರೆ ಎಂಬ ಭರವಸೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈ ಹಿಂದೆ ಸಮಾಜವಾದಿ ಪಕ್ಷದ ನಾಯಕ, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಬಿಜೆಪಿ ಲಸಿಕೆಯಲ್ಲಿ ನನಗೆ ನಂಬಿಕಲೆ ಇಲ್ಲ ಎಂದು ಹೇಳುವ ಮೂಲಕ ಭಾರೀ ಚರ್ಚೆಗೆ ಗ್ರಾಸವಾಗಿದ್ದರು. ಸದ್ಯಕ್ಕೆ ನಾನು ಲಸಿಕೆ ಹಾಕಲು ಹೋಗುತ್ತಿಲ್ಲ. ಬಿಜೆಪಿಯ ಲಸಿಕೆಯನ್ನು ನಾನು ಹೇಗೆ ನಂಬುವುದು ಎಂದು ಪ್ರಶ್ನಸಿದ್ದರು. ನಮ್ಮ ಸರ್ಕಾರ ರಚನೆಯಾದಾಗ ಎಲ್ಲರಿಗೂ ಉಚಿತ ಲಸಿಕೆ ಸಿಗುತ್ತದೆ. ನಾವು ಬಿಜೆಪಿಯ ಲಸಿಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *