ಬಿಜೆಪಿ ಮುಖಂಡನ ಪತ್ನಿ ಅಂತ ಹೇಳಿಕೊಂಡಿದ್ದ ಮಹಿಳೆ ಆತ್ಮಹತ್ಯೆ

Public TV
1 Min Read

ಹುಬ್ಬಳ್ಳಿ: ಕಲಘಟಗಿ ಬಿಜೆಪಿ ಮುಖಂಡ ಬಸವರಾಜ ಕೇಲಗಾರ ಪತ್ನಿ ಎಂದು ಹೇಳಿಕೊಂಡು ಹಣಕಾಸಿನ ವಿಚಾರವಾಗಿ ಬೀದಿ ಬೀದಿಯಲ್ಲಿ ಬಡಿದಾಡಿಕೊಂಡಿದ್ದ ಅನಿತಾ ರೇವಣಕರ್ ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಹುಬ್ಬಳ್ಳಿಯ ಕೇಶ್ವಾಪುರದ ಸ್ವಾಗತ ಕಾಲೋನಿಯ ನಿವಾಸದಲ್ಲಿ ಅನಿತಾ ರೇವಣಕರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಬಿಜೆಪಿ ಮುಖಂಡ ಬಸವರಾಜ ಕೇಲಗಾರ ತನಗೆ ಮದುವೆಯಾಗಿ ಮಕ್ಕಳು ಇದ್ದರು, ವಿಧವೆಯಾಗಿದ್ದ ತನನ್ನು ಮೋಸ ಮಾಡಿ ಮದುವೆಯಾಗಿದ್ದ. ಮದುವೆ ನಂತರ ನನ್ನ ಬಳಿ ಹಣ ಪಡೆದುಕೊಂಡು ವಂಚಿಸಿದ್ದ ಎಂದು ಮಹಿಳೆ ಆರೋಪಿಸಿದ್ದಳು. ಅಲ್ಲದೇ ಹಣಕಾಸಿನ ವಿಚಾರವಾಗಿ ಬಿಜೆಪಿ ಮುಖಂಡನ ಮನೆಗೆ ಹೋದ ವೇಳೆ ಮೃತ ಮಹಿಳೆಯ ಮೇಲೆ ಹಿಗ್ಗಾಮುಗ್ಗ ಥಳಿಸಿ ಹಲ್ಲೆ ಮಾಡಲಾಗಿತ್ತು ಎನ್ನಲಾಗಿದೆ.

ಇದಲ್ಲದೇ ಮೃತ ಮಹಿಳೆ ಹಾಗೂ ಬಸವರಾಜ ಕೇಲಗಾರ ಮಧ್ಯದ ಹಣಕಾಸಿನ ವಿಚಾರವಾಗಿ ಅನೇಕ ಬಾರಿ ಬಡಿದಾಡಿಕೊಂಡಿದ್ದು, ಪೊಲೀಸ್ ಠಾಣೆಗಳಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಇತ್ತೀಚೆಗೆ ಮಹಿಳೆ ತಾನೇ ತನ್ನ ತಲೆಗೆ ಹೊಡೆದುಕೊಂಡು ಬಿಜೆಪಿ ಮುಖಂಡನ ಮೇಲೆ ದೂರು ದಾಖಲಿಸಿದ್ದ ವೇಳೆ ಮಹಿಳೆಯ ಸಂಚು ಬಯಲಾಗಿತ್ತು. ಅಲ್ಲದೇ ಮಹಿಳೆ ಹಣಕ್ಕಾಗಿ ಬಿಜೆಪಿ ಮುಖಂಡನನ್ನ ಪೀಡಿಸುತ್ತಿರುವುದಾಗಿ ದೂರು ಸಹ ದಾಖಲಾಗಿತ್ತು.

ಕಳೆದ ಎರಡು-ಮೂರು ತಿಂಗಳಲ್ಲಿ ಮೃತ ಮಹಿಳೆ ಹಾಗೂ ಬಿಜೆಪಿ ಮುಖಂಡನ ಮಧ್ಯೆ ಸಾಕಷ್ಟು ಗಲಾಟೆ ನಡೆದು ಪ್ರಕರಣ ಪೊಲೀಸ್ ಠಾಣೆಗಳ ಮೇಟ್ಟಿಲೇರಿತ್ತು. ಇದಾದ ಬೆನ್ನಲ್ಲೇ ಮಹಿಳೆ ಇದೀಗ ನೇಣಿಗೆ ಶರಣಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈ ಘಟನೆಯ ಬಗ್ಗೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *