ಬಿಜೆಪಿ ಅಭ್ಯರ್ಥಿ ಎಸ್‍ಟಿ ಅಲ್ಲ, ದಾಖಲೆಯನ್ನೇ ತಿದ್ದುಪಡಿ ಮಾಡಿದ್ದಾರೆ: ರೇವಣ್ಣ

Public TV
1 Min Read

– ಆರೋಪಕ್ಕೆ ತಿರುಗೇಟು ನೀಡಿದ ನಗರಸಭಾ ಅಧ್ಯಕ್ಷ ಆಕಾಂಕ್ಷಿ

ಹಾಸನ: ಹಾಸನ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಎಸ್‍ಟಿ ಅಭ್ಯರ್ಥಿ ಮೀಸಲಾಗಿದ್ದು, ಬಿಜೆಪಿಯಲ್ಲಿ ಮಾತ್ರ ಎಸ್‍ಟಿ ಸದಸ್ಯ ಆಯ್ಕೆಯಾಗಿದ್ದಾರೆ. ಆದರೆ ಆತನು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಮಾಜಿ ಸಚಿವ ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು ಅಧ್ಯಕ್ಷರ ಚುನಾವಣೆಯು ನಾಳೆ ನಡೆಯಲಿದೆ. ಆದರೆ ಬಿಜೆಪಿ ಸದಸ್ಯ ಮೋಹನ್ ಮಾತ್ರ ಎಸ್‍ಟಿ ಪಂಗಡದವರಾಗಿದ್ದು, ಬಿಜೆಪಿಯವರು ಅಭ್ಯರ್ಥಿಯ ದಾಖಲೆಯನ್ನೇ ತಿದ್ದುಪಡಿ ಮಾಡಿದ್ದಾರೆ. ಈ ಸರ್ಕಾರವು ಯಾವುದನ್ನು ಬೇಕಾದರೂ ಬದಲಾವಣೆ ಮಾಡುತ್ತದೆ. ಈಗಾಗಲೇ ಈ ಪ್ರಕರಣ ತನಿಖೆಯಲ್ಲಿದ್ದು, ಈ ಕೇಸ್ ಇನ್ನೂ ಪೆಂಡಿಂಗ್ ಇದೆ. ಹೀಗಾಗಿ ಈ ಸ್ಥಾನ ಖಾಲಿ ಉಳಿಸಿಕೊಂಡು ಉಳಿದ ಸ್ಥಾನಕ್ಕೆ ಚುನಾವಣೆ ಮಾಡಬೇಕೆಂದು ಒತ್ತಾಯಿಸಿದರು.

ಈ ಬಗ್ಗೆ ಉಪವಿಭಾಗಾಧಿಕಾರಿಗಳಿಗೆ ದೂರು ಬರೆದರೂ ಇದುವರೆಗೂ ಯಾವ ಕ್ರಮ ಜರುಗಿಸಿರುವುದಿಲ್ಲ. ಬಿಜೆಪಿ ಅಭ್ಯರ್ಥಿ ಮೋಹನ್ ಸನ್ ಆಫ್ ರಘುಪತಿ ರಾವ್ ಮರಾಠ ಇದ್ದುದನ್ನು ಗೋಂಡ ಎಂದು ಬದಲಾಯಿಸಲಾಗಿದೆ. ಈ ಬಗ್ಗೆ ಇಷ್ಟೊತ್ತಿಗೆ ಕೇಸು ದಾಖಲಿಸಬೇಕಾಗಿತ್ತು. ಜಿಲ್ಲಾಧಿಕಾರಿಗಳಿಗೆ ದೂರು ಕೊಟ್ಟರೂ ಏನು ಮಾಡುತ್ತಿದ್ದಾರೆ? ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಹಾಗೂ ಎಸಿಗೆ ಪತ್ರ ಬರೆಯಲಾಗಿದ್ದರೂ ಯಾವ ಪ್ರಯೋಜವಾಗಿರುವುದಿಲ್ಲ. ಕಳೆದ 6 ತಿಂಗಳ ಹಿಂದೆಯೇ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಬೇಕಾಗಿತ್ತು. ಆದರೇ ಇಷ್ಟು ತಡವಾಗಿದೆ. ರಾಜ್ಯದಲ್ಲಿರುವ ಚುನಾವಣಾ ಆಯೋಗ ಕೂಡ ರಬ್ಬರ್ ಸ್ಟಾಂಪ್ ಇದ್ದಂತೆ ಎಂದು ರೇವಣ್ಣ ಕಿಡಿಕಾರಿದರು.

ರೇವಣ್ಣ ಆರೋಪಕ್ಕೆ ತಿರುಗೇಟು ನೀಡಿರುವ ನಗರಸಭಾ ಅಧ್ಯಕ್ಷ ಆಕಾಂಕ್ಷಿ ಮೋಹನ್, ಚುನಾವಣೆ ನಡೆದು 25 ತಿಂಗಳ ನಂತರ ಎಸ್‍ಟಿ ಅಲ್ಲ ಅಂತಿದ್ದಾರೆ. ಇಷ್ಟು ದಿನ ಏನು ಮಾಡುತ್ತಿದ್ದರು. ನಾನು 30 ವರ್ಷದಿಂದ ಜೆಡಿಎಸ್‍ನಲ್ಲಿದ್ದೆ. ಎಸ್‍ಟಿ ಸಮುದಾಯದಿಂದ ನನಗೆ ಟಿಕೆಟ್ ಕೊಡಲು ಜೆಡಿಎಸ್‍ನವರು ಮುಂದೆ ಬಂದಿದ್ದರು. ಆದರೆ ನಾನು ಜೆಡಿಎಸ್ ಬಿಟ್ಟು ಬಿಜೆಪಿಯಿಂದ ಸ್ಪರ್ಧಿಸಿದ್ದರಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ. ಈಗ ಅಧ್ಯಕ್ಷ ಸ್ಥಾನ ಜೆಡಿಎಸ್‍ಗೆ ಸಿಗುತ್ತಿಲ್ಲ ಎಂದು ಹತಾಶರಾಗಿ ಈ ರೀತಿ ಕ್ರಿಯೇಟ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *