ಬಿಜೆಪಿಯ ಶಕ್ತಿ ಕಾರ್ಯಕರ್ತರ ಭುಜದ ಮೇಲಿದೆ: ವೇದವ್ಯಾಸ್ ಕಾಮತ್

Public TV
2 Min Read

ಮಂಗಳೂರು: ಪಕ್ಷದ ಬೆಳವಣಿಗೆಗೆ ಕಾರ್ಯಕರ್ತರು ಹರಿಸುವ ಬೆವರಿನಿಂದ ದೇಶದಾದ್ಯಂತ ಭಾರತೀಯ ಜನತಾ ಪಾರ್ಟಿಯು ಸದೃಢ ವೃಕ್ಷದಂತೆ ಬೆಳೆದಿದೆ. ಬಿಜೆಪಿಯ ಶಕ್ತಿ ಕಾರ್ಯಕರ್ತರ ಭುಜದಲ್ಲಡಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಮಂಗಳೂರಿ ಮರೋಳಿ ವಾರ್ಡಿನ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿಗೆ ತನ್ನದೇ ಆದ ಸಿದ್ಧಾಂತವಿದೆ. ರಾಷ್ಟ್ರೀಯತೆ ಹಾಗೂ ಗಾಂಧೀ ಪ್ರಣೀತ ಸಮಾಜ ನಿರ್ಮಾಣದ ತಳಹದಿಯ ಮೇಲೆ ನಡೆಯುವ ಬಿಜೆಪಿಗೆ ಸರ್ವಸ್ವವನ್ನೂ ಧಾರೆಯೆರೆದು ಪಕ್ಷದ ಬಲವರ್ಧನೆಗಾಗಿ ಅವಿರತವಾಗಿ ಶ್ರಮಿಸುವ ಕಾರ್ಯಕರ್ತರೇ ಶಕ್ತಿ ಎಂದರು.

ಇನ್ನುಳಿದ ರಾಜಕೀಯ ಪಕ್ಷಗಳಿಂದ ಭಿನ್ನವಾಗಿ ಒಂದು ಸಿದ್ಧಾಂತಕ್ಕೆ ಅಂಟಿಕೊಂಡು ತನ್ನ ತತ್ವ ಆದರ್ಶಗಳೊಂದಿಗೆ ರಾಜಿ ಮಾಡಿಕೊಳ್ಳದೆ ಸುಧೀರ್ಘ ಕಾಲ ಪಕ್ಷ ಹೇಗೆ ನಡೆದುಕೊಂಡು ಬಂದಿದೆಯೋ ಅದು ಇನ್ನು ಮುಂದೆಯೂ ಮುಂದುವರಿಯುತ್ತದೆ. 2014ರ ಲೋಕಸಭಾ ಚುನಾವಣೆಯ ವೇಳೆ ಒಬ್ಬೊಬ್ಬ ಕಾರ್ಯಕರ್ತರೂ ಕೂಡ ನಿದ್ದೆ ಅನ್ನಾಹಾರ ಬಿಟ್ಟು ಪಕ್ಷಕ್ಕಾಗಿ ದುಡಿದ ಫಲವಾಗಿ ಇಂದು ಭಾರತದಲ್ಲಿ ಅನೇಕ ಬದಲಾವಣೆಗಳಾಗಿವೆ. ಅಯೋಧ್ಯೆಯ ಪಾವನ ಭೂಮಿಯಲ್ಲಿ ಪ್ರಭು ಶ್ರೀರಾಮನ ಮಂದಿರ ನಿರ್ಮಾಣ, ಕಾಶ್ಮೀರದಲ್ಲಿ 370ನೇ ವಿಧಿ ರದ್ದು, ತ್ರಿವಳಿ ತಲಾಖ್ ನಿಷೇಧ, ಪೌರತ್ವ ಕಾಯ್ದೆ ತಿದ್ದುಪಡಿಯಂತಹ ಅಸಾಧ್ಯವೆನಿಸಿದ್ದಂತಹ ಕಾರ್ಯಗಳೂ ಸಾಕಾರಗೊಂಡಿದೆ. ಇವೆಲ್ಲದರ ಶ್ರೇಯಸ್ಸು ಪಕ್ಷದ ಕಾರ್ಯಕರ್ತರಿಗೆ ಸಲ್ಲಬೇಕು ಎಂದರು.

ಮುಂಬರುವ ದಿನಗಳಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯ 38 ವಾರ್ಡುಗಳಲ್ಲೂ ಕೂಡ ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು. ಆ ಮೂಲಕ ಸಂಘಟನೆಯ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಪೂರ್ಣಿಮಾ, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅದ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಪಂಚಾಯತ್ ರಾಜ್ ರಾಜ್ಯ ಪ್ರಕೋಷ್ಟದ ಸಹ ಸಂಚಾಲಕರಾದ ಪ್ರೇಮಾನಂದ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಉಪಾಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿ ರೂಪಾ ಡಿ ಬಂಗೇರ, ಸುರೇಂದ್ರ ಜೆಪ್ಪಿನಮೊಗರು, ಪೂರ್ವ ಶಕ್ತಿಕೇಂದ್ರ ಅಧ್ಯಕ್ಷರಾದ ಅಜಯ್ ಕುಲಶೇಖರ, ಕಾರ್ಯದರ್ಶಿ ರವಿಚಂದ್ರ, ಮರೋಳಿ ಶಕ್ತಿಕೇಂದ್ರ ಅಧ್ಯಕ್ಷರಾದ ಜಗನ್ನಾಥ್ ಅಡುಮರೋಳಿ, ಜಗನ್ನಾಥ ಶೆಣೈ ಹಾಗೂ ಬಿಜೆಪಿಯ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *