ಬಿಜೆಪಿಯಲ್ಲಿನ ಖಾತೆ ಹಂಚಿಕೆ ಬಿಕ್ಕಟ್ಟು ಬಹುತೇಕ ಶಮನ

Public TV
1 Min Read

ಬೆಂಗಳೂರು: ಬಿಜೆಪಿಯಲ್ಲಿ ಖಾತೆ ಹಂಚಿಕೆ ಬಿಕ್ಕಟ್ಟು ಬಹುತೇಕ ಶಮನವಾದಂತೆ ಕಾಣುತ್ತಿದೆ. ವಸತಿ ಅಥವಾ ಲೋಕೋಪಯೋಗಿ ಖಾತೆಗೆ ಬೇಡಿಕೆ ಇಟ್ಟಿದ್ದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಣ್ಣಗಾದಂತೆ ಕಾಣುತ್ತಿದ್ದಾರೆ.

ಮೊನ್ನೆಯಷ್ಟೇ ಮೂರು ಕಾದು ತೀರ್ಮಾನ ಪ್ರಕಟಿಸ್ತೀನಿ ಅಂತಾ ಗುಡುಗಿದ್ದ ಎಂಟಿಬಿ ನಾಗರಾಜ್, ಈಗ ಏನೂ ಅಸಮಾಧಾನವೇ ಇಲ್ಲ ಅನ್ನೋ ರೀತಿ ಸಣ್ಣಕೈಗಾರಿಕಾ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಖಾತೆ ಬದಲಾವಣೆ ಮಾಡದಿದ್ರೂ ಸದ್ಯಕ್ಕೆ ಸುಮ್ಮನಾಗ್ತೀನಿ. ಹೆಂಗೂ ಖಾತೆ ಇದೆ. ಪಕ್ಷದಲ್ಲಿ 2023ರವರೆಗೆ ಮುಂದುವರಿಯುತ್ತೇನೆ ಅಂತಾ ಹೇಳಿದ್ದಾರೆ.

ಇತ್ತ ಸಿಎಂ ಭೇಟಿಯಾದ ಮೇಲ್ಮನೆ ಸದಸ್ಯ ಆರ್. ಶಂಕರ್ ಮತ್ತೆ ಖಾತೆ ಬೇಡಿಕೆ ಇಟ್ಟಿದ್ದಾರೆ. ನಾನು ಬಿಜೆಪಿ ಸೇರಿದರೂ, ಒಂದು ರೀತಿ ಪಕ್ಷೇತರನಾಗಿ ದೂರ ಉಳಿದಿದ್ದೇನೆ ಅಂತಾ ನೋವು ತೋಡಿಕೊಂಡಿದ್ದಾರೆ. ಇನ್ನೊಂದೆಡೆ ಸಾರಿಗೆ ಖಾತೆಯಿಂದ ಅಸಮಾಧಾನಗೊಂಡಿದ್ದ ಸಚಿವ ರಾಮುಲು, ಕೊಟ್ಟ ಇಲಾಖೆಯಲ್ಲೇ ಸಕ್ರಿಯನಾಗಿ ಕೆಲಸ ಮಾಡ್ತೀನಿ. ಅಸಮಾಧಾನ ಎಲ್ಲಾ ಸುಳ್ಳು ಎಂದು ತೇಪೆ ಹಚ್ಚಿದ್ದಾರೆ. ಇದನ್ನೂ ಓದಿ: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಆನಂದ್ ಸಿಂಗ್ – ಸಿಎಂ ಸಂಧಾನ ಸಭೆ ಸಕ್ಸಸ್

ಅತ್ತ ಸಚಿವ ಸ್ಥಾನ ಸಿಗದ ಕಾರಣ ಅಸಮಾಧಾನಗೊಂಡು ದೆಹಲಿ ದಂಡಯಾತ್ರೆ ಕೈಗೊಂಡಿರುವ ರೇಣುಕಾಚಾರ್ಯ, ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಬಂದಿದ್ದೀನಿ.. ಬಂಡಾಯ ಏನೂ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಮಸ್ಯೆ ಶೇ.100ರಷ್ಟು ಸುಖಾಂತ್ಯವಾಗಿದೆ, ಕೆಲ ತೀರ್ಮಾನಗಳನ್ನು ಹೇಳಲು ಸಾಧ್ಯವಿಲ್ಲ: ರಾಜೂ ಗೌಡ

Share This Article
Leave a Comment

Leave a Reply

Your email address will not be published. Required fields are marked *