ಬಿಜೆಪಿಗೆ ಜಯಮೃತ್ಯುಂಜಯ ಶ್ರೀ ಎಚ್ಚರಿಕೆ

Public TV
2 Min Read

ತುಮಕೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟೀಸ್ ಜಾರಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪಂಚಮ ಸಾಲಿಪೀಠದ ಜಯಮೃತ್ಯುಂಜಯ ಸ್ವಾಮೀಜಿ ಸಿಡಿದೆದ್ದಿದ್ದಾರೆ.

ಈ ಸಂಬಂಧ ಸಿದ್ದಗಂಗಾಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್‍ಗೆ ಜೊತೆಗೆ ಪಂಚಮಸಾಲಿ ಸಮುದಾಯ ಇದೆ. ನೋಟಿಸ್ ಹಿಂಪಡೆಯದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮೀಸಲಾತಿ ಹೋರಾಟವನ್ನು ಬಿಜೆಪಿಗರೇ ಹತ್ತಿಕ್ಕಲು ಸಂಚು ಮಾಡಿದ್ದಾರೆ. ಬಿಜೆಪಿ ಮುಖಂಡ ಸುಪುತ್ರನ ಕೈವಾಡ ಇದೆ ಅಂತ ಹೇಳಲು ಇಚ್ಛಿಸ್ತೇನೆ ಎಂದು ಬಿಎಸ್‍ವೈ ಪುತ್ರ ವಿಜಯೇಂದ್ರ ವಿರುದ್ಧ ಜಯಮೃತ್ಯುಂಜಯ ಶ್ರೀ ನೇರ ವಾಗ್ದಾಳಿ ನಡೆಸಿದ್ದಾರೆ.

ಲಿಂಗಾಯಿತರಿಗೇ ಮೀಸಲಾತಿ ಸಿಕ್ಕಿಲ್ಲ. ಎಲ್ಲಾ ಪೂಜ್ಯರು ಪಾದಯಾತ್ರೆಗೆ ಬನ್ನಿ ಎಂದು ಹೇಳ್ತೇನೆ. ನಮ್ಮ ಪಾದಯಾತ್ರೆ ಭಾಗವಹಿಸಿದ ಜನಪ್ರತಿನಿಧಿಗಳನ್ನ ಹತ್ತಿಕ್ಕುವ ಪ್ರಯತ್ನ ಆಗ್ತಿದೆ. ಈ ವಿಚಾರದಲ್ಲಿ ಯತ್ನಾಳ್ ಅವರಿಗೆ ಮೊದಲ ಬಾರಿಗೆ ನೋಟಿಸ್ ಕೊಟ್ಟಿದ್ದಾರೆ. ಕೇಂದ್ರದ ವರಿಷ್ಠರಿಗೆ ಮನವಿ ಮಾಡ್ತೇನೆ, ಕೊಟ್ಟಿರುವ ನೋಟಿಸ್ ಪರಿಶೀಲನೆ ಮಾಡಿ ವಾಪಸ್ ಪಡೀಬೇಕು. ರಾಜ್ಯದಲ್ಲಿ ಬಿಜೆಪಿ ಮುಖಂಡರ ಒಳಪಿತೂರಿಯಿಂದಾಗಿ ಹೀಗಾಗ್ತಿದೆ. ನಮ್ಮ ಹೋರಾಟದ ಪ್ರಮುಖ ನಾಯಕರು ಕಾಶಪ್ಪನವರ್ ಹಾಗೂ ಯತ್ನಾಳ್. ಯಾರೇ ಏನೇ ಮಾಡಿದ್ರು ಹೋರಾಟ ನಿಲ್ಲಿಸೋಕೆ ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಬೇರೆ ಸಮುದಾಯಗಳಿಗೆ ಪ್ರಚೋದನೆ ಮಾಡ್ತಿದ್ದಾರೆ. ಹೋರಾಟದಲ್ಲಿ ಕ್ಯಾಬಿನೇಟ್ ಮಿನಿಸ್ಟ್ರುಗಳೇ ಭಾಗವಹಿಸ್ತಾರೆ ಅವರ ಬಗ್ಗೆ ಕ್ರಮವಿಲ್ಲ. ಯತ್ನಾಳ್ ಗೌಡರು ವೈಯಕ್ತಿಕವಾಗಿ ಏನೂ ಹೇಳಿಲ್ಲ. ಅವರು ಹಾಲುಮತ, ವಾಲ್ಮೀಕಿ ಹಾಗೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೇಳಿದ್ರು. ವಿಧಾನಸೌಧದಲ್ಲಿ ಗುಡುಗಿದ್ದು ತಪ್ಪಾ ಎಂದು ಪ್ರಶ್ನಿಸಿರುವ ಸ್ವಾಮೀಜಿ, ನಿಮ್ಮೆಲ್ಲರ ಮಾತಿಗೆ ಬೆಲೆಕೊಟ್ಟು ವಿಧಾನಸೌಧಕ್ಕೆ ಮುತ್ತಿಗೆ ಹಾಕಲ್ಲ ಅಂತ ಹೇಳಿದ್ದೇನೆ. ನೋಟಿಸ್ ಪಡೆಯದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಶತಸಿದ್ಧ ಎಂದು ವಾರ್ನ್ ಮಾಡಿದ್ದಾರೆ.

ಯತ್ನಾಳ್‍ಗೆ ನೋಟಿಸ್:
ಸಿಎಂ ಯಡಿಯೂರಪ್ಪ ನಾಯಕತ್ವದ ವಿರುದ್ಧ ಹೇಳಿಕೆ, ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ಕುರಿತು ಕೇಂದ್ರ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ. ಈಗ ಅಳೆದು ತೂಗಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ. ಪಕ್ಷ ವಿರೋಧಿ ಚಟುವಟಿಕೆ, ಅಶಿಸ್ತು ಉಲ್ಲೇಖಿಸಿ ಹಾಗೂ ನಾಯಕತ್ವ ವಿಚಾರ, ಸಿಎಂ ಬದಲಾವಣೆ, ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಟೀಕೆಗಾಗಿ ಶೋಕಾಸ್ ನೋಟಿಸ್ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *