ಬಿಕ್ಕಟ್ಟು ಶಮನಕ್ಕೆ ಪ್ರತಿಭಟನೆ ಬದಲು ಮಾತುಕತೆ ನಡೆಸಿ – ಧರಣಿನಿರತ ರೈತರಿಗೆ ಸುಪ್ರೀಂಕೋರ್ಟ್ ಸಲಹೆ

Public TV
1 Min Read

– ಪ್ರತಿಭಟನೆ ನಡೆಸುವ ಹಕ್ಕು ರೈತರಿಗಿದೆ
– ಕೃಷಿ ಕಾಯ್ದೆಯ ಪ್ರತಿ ಹರಿದು ಹಾಕಿದ ಸಿಎಂ ಕೇಜ್ರಿವಾಲ್

ನವದೆಹಲಿ: ಪ್ರತಿಭಟನೆ ನಡೆಸುವುದು ಮೂಲಭೂತ ಹಕ್ಕು. ಅದರಂತೆ, ಕೃಷಿ ಕಾಯ್ದೆಗಳ ವಿಚಾರದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ರೈತರಿಗಿದೆ. ಆದ್ರೆ ಆಸ್ತಿ, ಪ್ರಾಣ ನಷ್ಟಗಳಿಗೆ ಇದು ದಾರಿ ಮಾಡಿಕೊಡಬಾರದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ರೈತರು ತಮ್ಮ ಹೋರಾಟ ಮುಂದುವರೆಸಬಹುದು. ಸಮಸ್ಯೆ ಇತ್ಯರ್ಥಕ್ಕೆ ಇದು ಸರಿಯಾದ ಮಾರ್ಗ ಅಲ್ಲ. ಮಾತುಕತೆ ಮೂಲಕವೇ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ದೆಹಲಿಯನ್ನು ನಿರ್ಬಂಧಿಸಿದರೆ ಜನ ಹಸಿವಿನಿಂದ ತತ್ತರಿಸಿ ಹೋಗಬೇಕಾಗುತ್ತದೆ. ನಿಮ್ಮ ಉದ್ದೇಶ ಈಡೇರಬೇಕು ಎಂದರೆ ಮಾತುಕತೆ ನಡೆಸಿ. ಕೇವಲ ಹೋರಾಟ ಮಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಎಸ್‍ಎ ಬೊಬ್ಡೆ ನೇತೃತ್ವದ ಪೀಠ ರೈತರಿಗೆ ಸಲಹೆ ನೀಡಿದೆ.

ಕೃಷಿ ಕಾಯ್ದೆಗಳ ಜಾರಿಯನ್ನು ತಡೆಹಿಡಿದರೆ ರೈತರು, ಕೇಂದ್ರದ ಜೊತೆ ಮಾತುಕತೆಗೆ ಮುಂದಾಗಬಹುದೇನೋ? ಈ ವಿಚಾರವನ್ನು ಒಮ್ಮೆ ಪರಿಶೀಲಿಸಿ ಎಂದು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಇದಕ್ಕೆ ಸ್ಪಂದಿಸಿದ ಅಟಾರ್ನಿ ಜನೆರಲ್, ಕೇಂದ್ರದ ಜೊತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವುದಾಗಿ ತಿಳಿಸಿದರು. ಮುಂದಿನ ವಿಚಾರಣೆಯನ್ನು ರಜೆಕಾಲ ಪೀಠ ನಡೆಸಲಿದೆ ಎಂದ ಬೊಬ್ಡೆ ಪೀಠ ವಿಚಾರಣೆಯನ್ನು ಮುಂದೂಡಿತು.

ಈ ಮಧ್ಯೆ ದೆಹಲಿಯಲ್ಲಿ ಉಷ್ಣಾಂಶ ದಿನೇ ದಿನೇ ಇಳಿಕೆಯಾಗುತ್ತಿದೆ. ತಾಪಮಾನ 3 ಡಿಗ್ರಿ ಸೆಲ್ಸಿಯಸ್‍ಗೆ ಇಳಿದಿದೆ. ಕೊರೆವ ಚಳಿಯಲ್ಲೇ ಅನ್ನದಾತರು ಹೋರಾಟ ಮುಂದುವರಿಸಿದ್ದಾರೆ. ತೀವ್ರ ಚಳಿಗೆ ಇಂದು ಧರಣಿನಿರತ ರೈತರೊಬ್ಬರು ಬಲಿ ಆಗಿದ್ದಾರೆ. ಕೃಷಿ ಕಾಯ್ದೆ ವಿರುದ್ಧ ದೆಹಲಿ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದ್ದು, ದೆಹಲಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಾಯ್ದೆಯ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬಿಜೆಪಿ-ಎಎಪಿ ಮಧ್ಯೆ ವಾಕ್ಸಮರವೂ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *