ಬಿಎಸ್‍ವೈ ಊಟ ಮಾಡಲು ಕಲಬುರಗಿಗೆ ಬಂದು ಹೋಗಿರಬಹುದು: ಸಿದ್ದರಾಮಯ್ಯ

Public TV
1 Min Read

ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಆದರೆ ಜನಪ್ರತಿನಿಧಿಗಳ ಜೊತೆ ಚರ್ಚಿಸದೇ ಹೋಗಿದ್ದಾರೆ. ಯಡಿಯೂರಪ್ಪ ಅವರು ಊಟ ಮಾಡಲು ಕಲಬುರಗಿಗೆ ಬಂದು ಹೋಗಿರಬಹುದು. ಇದು ಜನಪ್ರತಿನಿಧಿಗಳ ಸರ್ಕಾರವೇ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿ 100 ಕೋಟಿ ರೂಪಾಯಿ ನಷ್ಟವಾಗಿದೆ. ರಾಜ್ಯ ಸರ್ಕಾರದ ಪ್ರಕಾರ ಒಟ್ಟು 700 ಕೋಟಿ ನಷ್ಟವಾಗಿದೆ. ಬರೀ ಮುಂಗಾರು ಬೆಳೆ ಅಷ್ಟೇ ಅಲ್ಲ ಹಿಂಗಾರು ಬೆಳೆ ಸಹ ಬೆಳೆಯಲಾಗುವದಿಲ್ಲ. ಈ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡ್ತಿದ್ದಾರೆ ಎಂದು ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರುಗಳು ಯಾರು ಕೂಡ ರೈತರಿಗೆ ಸಾಂತ್ವನ ಹೇಳಿ ಪರಿಹಾರ ಕೊಡಿಸಿಲ್ಲ. ಸಚಿವರು ಬಾರದ ಹಿನ್ನೆಲೆ ಅಧಿಕಾರಿಗಳು ಸಹ ಕೆಲಸ ಚುರುಕಾಗಿಲ್ಲ. ಕಂದಾಯ ಸಚಿವ ಆರ್.ಅಶೋಕ್ ಕಾಟಚಾರಕ್ಕೆ ಬಂದು ಹೋಗಿದ್ದಾರೆ. ಪಿಕ್‍ನಿಕ್ ತರಹ ಬಂದು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ಸಹ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ರಾಜ್ಯ ಸರ್ಕಾರ ಸಹ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. 2019ರ ಪರಿಹಾರದ ಹಣ ಸಹ ಇನ್ನೂ ರಾಜ್ಯದಲ್ಲಿ ಕೊಟ್ಟಿಲ್ಲ. ಕೆಲವರಿಗೆ ಕೊಟ್ಟಿದ್ದಾರೆ ಇನ್ನು ಕೆಲವರಿಗೆ ಕೊಟ್ಟಿಲ್ಲ. ಪ್ರವಾಹದಿಂದ ಜನರ ಸಂಕಷ್ಟ ಹಾಗು ಹಣ ಬಿಡಗಡೆ ಫೇಲ್ ಆಗಿದೆ ಎಂದು ಕಿಡಿಕಾರಿದರು.

ಈ ಸರ್ಕಾರದಲ್ಲಿ ಧಮ್ ಇಲ್ಲ ಅಂತ ಹೇಳಿದೆ. ಆದರೆ ಅದನ್ನು ಬೇರೆಯದಕ್ಕೆ ಹೋಲಿಸಿದ್ದಾರೆ. ನಾನು ಹೇಳಿದು ಪರಿಹಾರ ಕೊಡಿಸುವಲಿ ದಮ್ ಇಲ್ಲ ಅಂತ ಹೇಳಿದೆ. ರಾಜ್ಯದ 25 ಸಂಸದರು ಏನು ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಮಲತಾಯಿ ಧೋರಣೆ, ಅದೇ ಬಿಹಾರಕ್ಕೆ ಹೋಗಿ ನೋಡಿ ಯಾವ ರೀತಿ ಪರಿಹಾರ ಕೊಡುತ್ತಾರೆ. ಕಾರಜೋಳ ಅವರು ಮೇ ತಿಂಗಳಿನಿಂದ ಈ ಕಡೆ ಬಂದಿಲ್ಲ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಐಡೆಂಟಿ ಕಾರ್ಡ್ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *