ಬಹಿರ್ದೆಸೆ ಹೋದಾಗ ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ- ಕುಟುಂಬದಲ್ಲಿ ನಿಲ್ಲದ ಬಯಲು ಮಲವಿಸರ್ಜನೆ

Public TV
1 Min Read

ಚಿತ್ರದುರ್ಗ: ಬಹಿರ್ದೆಸೆಗೆ ತೆರಳಿದ್ದ ವೇಳೆ 13 ವರ್ಷದ ಅಪ್ರಾಪ್ತೆ ಮೇಲೆ ಕಿಡಿಗೇಡಿಗಳು ಜುಲೈ 23 ರಂದು ಅತ್ಯಾಚಾರವೆಸಗಿ, ಕೊಲೆ ಮಾಡಿದ್ದರು. ಇಷ್ಟಾದರೂ ಬುದ್ಧಿ ಕಲಿಯದ ಕುಟುಂಬಸ್ಥರು, ಶೌಚಾಲಯ ನಿರ್ಮಿಸಿಕೊಳ್ಳದೆ, ಇನ್ನೂ ಬಹಿರ್ದೆಸೆಗೆ ತೆರಳುತ್ತಿದ್ದಾರೆ.

ಅಪ್ರಾಪ್ತೆ ಮೇಲೆ ನಡೆದ ದುಶ್ಕ್ರತ್ಯದ ಬೆನ್ನತ್ತಿದ ಚಿತ್ರದುರ್ಗ ಪೊಲೀಸರು, ಪ್ರಕರಣ ನಡೆದು ಕೇವಲ 14 ದಿನಗಳಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆದರೆ ಈ ಕುಟುಂಬಕ್ಕೆ ಸಾಂತ್ವಾನಹೇಳುವ ನೆಪದಲ್ಲಿ ನಿತ್ಯವೂ ರಾಜಕಾರಣಿಗಳು, ಅಧಿಕಾರಿಗಳು ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲದೆ ಸಚಿವ ಶ್ರೀರಾಮುಲು ಸಂತ್ರಸ್ತೆಯ ತಂದೆ, ತಾಯಿಯನ್ನು ಭೇಟಿಯಾಗಿ ಎರಡು ಲಕ್ಷ ರೂಪಾಯಿ ವೈಯಕ್ತಿಕ ಪರಿಹಾರ ನೀಡಿ ಸಾಂತ್ವಾನ ಹೇಳಿದ್ದಾರೆ.

ಬಾಲಕಿಯ ಕುಟುಂಬಸ್ಥರು ಆಶ್ರಯ ಯೋಜನೆಯಡಿ ನೂತನ ಮನೆ ನಿರ್ಮಿಸಿದ್ದಾರೆ. ಸ್ವಂತ ಖರ್ಚಿನಲ್ಲಿ ಶೌಚಾಲಯವನ್ನೂ ಕಟ್ಟಿಸಿಕೊಂಡಿದ್ದಾರೆ. ಆದರೆ ಮಗಳನ್ನು ಕಳೆದುಕೊಂಡ ನೋವಿನಲ್ಲಿರುವ ಕುಟುಂಬ ನೂತನ ಮನೆಯನ್ನು ಉದ್ಘಾಟಿಸಿಲ್ಲ. ಹೀಗಾಗಿ ಇಂತಹ ಅಮಾನವೀಯ ಕೃತ್ಯ ನಡೆದರೂ ಸಂತ್ರಸ್ತೆಯ ಕುಟುಂಬದವರು ಬಯಲು ಶೌಚಕ್ಕೆ ತೆರಳುತ್ತಿದ್ದಾರೆ.

ಸರ್ಕಾರದಿಂದ ಹಳ್ಳಿಗಳಲ್ಲಿ ಬಯಲು ಶೌಚಾಲಯ ಮುಕ್ತವಾಗಿಸಲು ಗ್ರಾಮ ಪಂಚಾಯಿತಿಯಿಂದಲೇ ಶೌಚಾಲಯ ನಿರ್ಮಿಸುವ ಯೋಜನೆಯಿದ್ದರೂ ಈ ಗ್ರಾಮದಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿಲ್ಲ. ಶೌಚಾಲಯ ನಿರ್ಮಿಸುವ ಯೋಜನೆಯ 12,000ರೂ. ಹಣವೂ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಇತರೆ ಅಧಿಕಾರಿಗಳ ಜೇಬು ಸೇರುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ. ಈ ಬಗ್ಗೆ ಗ್ರಾಮಪಂಚಾಯಿತಿ ಪಿಡಿಒ ವೀರೇಶ್ ಅವರನ್ನು ಕೇಳಿದರೆ, ಅವರೇ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಆದರೆ ಇನ್ನೂ ಬಳಸುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಘಟನೆಯಿಂದ ಮನನೊಂದಿರುವ ಸಂತ್ರಸ್ತೆಯ ಕುಟುಂಬಸ್ಥರು ಸಹ ಆರೋಪಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಕುಟುಂಬಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳಾದ ನೀರು, ಶೌಚಾಲಯದ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *